ಕೋವಿಡ್ 19: ಅತ್ಯಂತ ಶ್ರೀಮಂತ ದೇಗುಲಕ್ಕೆ ಆದಾಯ ಖೋತಾ!
ಅಮರಾವತಿ, ಜುಲೈ 14: ಕೋವಿಡ್ 19 ಸಾಂಕ್ರಾಮಿಕದಿಂದ ವಿವಿಧ ಕ್ಷೇತ್ರ, ವಿವಿಧ ಉದ್ದಿಮೆಗಳ ಆದಾಯಕ್ಕೆ ಭಾರಿ ಹೊಡೆತ ಬಿದ್ದಿದೆ. ದೇಶದ ಅತ್ಯಂತ ಶ್ರೀಮಂತ ದೇಗುಲ ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ)ಗೆ ಪ್ರತಿದಿನದ ಭಕ್ತಾದಿಗಳ ಸಂಖ್ಯೆ, ದೈನಂದಿನ ಆದಾಯ ಖೋತಾ ಆಗಿದೆ.
ಕೋವಿಡ್ 19ಕ್ಕೂ ಮುನ್ನ ಪ್ರತಿದಿನ ಸರಾಸರಿ 65 ಸಾವಿರಕ್ಕೂ ಅಧಿಕ ಮಂದಿಯನ್ನು ಕಾಣುತ್ತಿದ್ದ ತಿರುಮಲ ಬೆಟ್ಟ, ಈಗ 15 ಸಾವಿರಕ್ಕೆ ಕುಸಿದಿದೆ. ಕೋವಿಡ್ 19 ಮಾರ್ಗಸೂಚಿಯಂತೆ ಆನ್ ಲೈನ್ ನಲ್ಲಿ ಮುಂಗಡ ಬುಕ್ಕಿಂಗ್ ಮಾಡಿಕೊಂಡ 6 ಸಾವಿರ ಮಂದಿಗೆ ಮಾತ್ರ ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.
ಕೊರೊನಾವೈರಸ್ ಸಾಂಕ್ರಾಮಿಕ ಮೊದಲ ಅಲೆ ಸಂದರ್ಭದಲ್ಲಿ ದೇಗುಲ 80 ದಿನಗಳ ಕಾಲ ದೇಗುಲ ಬಂದ್ ಮಾಡಲಾಗಿತ್ತು. 2020 ಜೂನ್ ತಿಂಗಳಲ್ಲಿ ಬಂದ್ ಆಗಿದ್ದು ನಂತರ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಮಾರ್ಚ್ 2021 ವೇಳೆಗೆ ಎನ್ನಬಹುದು. ಪ್ರತಿದಿನ 25 ಸಾವಿರಕ್ಕೇರಿದೆ.
ಕೋವಿಡ್ 19 ಹಬ್ಬುವ ಭೀತಿಯಿಂದ ಏಪ್ರಿಲ್ 21ರ ವೇಳೆಗೆ ಸರ್ವ ದರ್ಶನವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. 300 ರು ಪಾವತಿಸಿ ಆನ್ಲೈನ್ನಲ್ಲಿ ಟಿಕೆಟ್ ಬುಕ್ ಮಾಡಿ ದರ್ಶನಕ್ಕೆ ತೆರಳುವ ಅವಕಾಶ ಕಲ್ಪಿಸಲಾಗಿದೆ.
ಭಕ್ತಾದಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ, ದೇಗುಲದ ಆದಾಯವು ಕಡಿಮೆಯಾಗಿದೆ. ಮೊದಲ ಅಲೆಯಲ್ಲೇ ಹುಂಡಿ ಗಳಿಕೆ ತಳ ಮುಟ್ಟಿತ್ತು. ಪ್ರತಿದಿನಕ್ಕೆ ಸರಾಸರಿ 2 ಕೋಟಿ ರು ಆದಾಯ ಗಳಿಕೆ ಹೊಂದಿದ್ದ ದೇಗುಲ, 2ನೇ ಅಲೆಯಲ್ಲಿ ಒಟ್ಟಾರೆ 11.95 ಕೋಟಿ ರು ಮಾತ್ರ ಆದಾಯ ಗಳಿಸಿದೆ.
ದೇಗುಲ ನಿರ್ವಹಣೆಗಾಗಿ ಚಿನ್ನಾಭರಣವನ್ನು ಕರಗಿಸುವ ಬಗ್ಗೆ ಕೂಡಾ ಟಿಟಿಡಿ ಯೋಚಿಸುತ್ತಿದೆ ಎಂಬ ಸುದ್ದಿಯಿದೆ. ಸುಮಾರು 9000 ಕಿಲೋಗ್ರಾಂ ಚಿನ್ನ ಶೇಖರಣೆಯನ್ನು ಟಿಟಿಡಿ ಹೊಂದಿದೆ. ಆದರೆ, ದೇಗುಲದ ಹುಂಡಿಗೆ ಭಕ್ತಾದಿಗಳು ಹಾಕಿರುವ ಚಿನ್ನ ಹಾಗೂ ನಿಶ್ಚಿತ ಠೇವಣಿಯಲ್ಲಿರುವ ಮೊತ್ತಕ್ಕೆ ಕೈ ಹಾಕಲು ಟಿಟಿಡಿ ಚೇರ್ಮನ್ ವೈ.ಎಸ್ ಸುಬ್ಬಾರೆಡ್ಡಿ ಮನಸ್ಸು ಮಾಡಿಲ್ಲ.
1,300 ಕೋಟಿ ರು ಹುಂಡಿ ಆದಾಯ ಈಗ 725 ಕೋಟಿ ರು ಎಂದು ಅಂದಾಜಿಸಲಾಗಿದೆ.ದೇಗುಲಕ್ಕೆ ಆದಾಯ ತರುತ್ತಿದ್ದ ಲಡ್ಡು ಕೌಂಟರ್ ಗಳ ಸಂಖ್ಯೆಯನ್ನು 60 ರಿಂದ 30ಕ್ಕೆ ಇಳಿಸಲಾಗಿದೆ. ಆದರೆ, ಲಡ್ಡು ಬೆಲೆ ಏರಿಕೆ ಮಾಡಲು ಟಿಟಿಡಿ ಮುಂದಾಗಿಲ್ಲ. ಕೋವಿಡ್ 19 ದೆಸೆಯಿಂದ ಟಿಟಿಡಿ ಹೆಚ್ಚು ಡಿಜಿಟಲ್ ನತ್ತ ವಾಲುತ್ತಿದೆ. ಎಸ್ ವಿ ಬಿಸಿ ಟಿಟಿಡಿ ವಾಹಿನಿಗೂ ಹೆಚ್ಚಿನ ಪ್ರಚಾರ ನೀಡಲಾಗುತ್ತಿದೆ.