ಆಂಧ್ರಪ್ರದೇಶದ ಅನಂತಪುರ ಸರ್ಕಾರಿ ಅಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ಕನ್ನಡಿಗರಿಗೆ ಚಿಕಿತ್ಸೆ
ಬೆಂಗಳೂರು, ಮೇ. 24: ದುಬಾರಿ ಚಿಕಿತ್ಸಾ ವೆಚ್ಚ ಮತ್ತು ಐಸಿಯು ಬೆಡ್ ಲಭ್ಯವಾಗದ ಕಾರಣ ರಾಜ್ಯದ ಗಡಿ ಭಾಗದ ನಿವಾಸಿಗಳು ಕೊರೊನಾ ಚಿಕಿತ್ಸೆಗಾಗಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ಸರ್ಕಾರಿ ಆಸ್ಪತ್ರೆ ಮೊರೆ ಹೋಗುತ್ತಿದ್ದಾರೆ. ಗಡಿಭಾಗದ ಕನ್ನಡಿಗರು ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯಲು ಅನಂತಪುರ ಜಿಲ್ಲಾಧಿಕಾರಿ ಗಂಧಂ ಚಂದ್ರುಡು ಅವಕಾಶ ಕಲ್ಪಿಸಿದ್ದಾರೆ. ತಮ್ಮ ರೋಗಿಗಳಿಗೆ ಬೆಡ್, ಚಿಕಿತ್ಸೆ ಕೊಡಲಾಗದ ಪರಿಸ್ಥಿತಿಯಲ್ಲಿ ಅನಂತಪುರ ಜಿಲ್ಲಾ ಕೇಂದ್ರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ರಾಜ್ಯದ ಗಡಿಭಾಗದ ಜನರಿಗೆ ಅವಕಾಶ ನೀಡಲಾಗಿದೆ. ಅನಂತಪುರ ಪೊಲೀಸರು ಮತ್ತು ಜಿಲ್ಲಾಧಿಕಾರಿಗಳು ಮಾನವೀಯ ನಡೆಗೆ ಎಲ್ಲಡೆ ಪ್ರಶಂಸೆ ವ್ಯಕ್ತವಾಗಿದೆ.
ರಾಜ್ಯದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಪರಕಾಷ್ಠೆ ತಲುಪಿದೆ. ಪಾಸಿಟಿವ್ ಪ್ರಕರಣಗಳು ಇಳಿಕೆಯಾಗುತ್ತಿದ್ದರೂ, ಸಾವಿನ ಪ್ರಮಾಣ ಜಾಸ್ತಿಯಾಗುತ್ತಿದೆ. ಲಾಕ್ ಡೌನ್ ಜಾರಿ ಹಿನ್ನೆಲೆಯಲ್ಲಿ ಕೊರೊನಾ ಸೋಂಕು ಪರೀಕ್ಷೆ ಮಾಡಿಸಿಕೊಳ್ಳದೇ ಅನಾರೋಗ್ಯಕ್ಕೆ ತುತ್ತಾದ ಬಳಿಕ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಇನ್ನು ರಾಜ್ಯಸರ್ಕಾರ ಕೈಗೊಂಡ ತೀರ್ಮಾನಗಳಿಂದ ರಾಜಧಾನಿಯಲ್ಲಿ ಖಾಸಗಿ ಆಸ್ಪತ್ರೆಗಳು ರಕ್ತ ಹೀರುತ್ತಿವೆ. ಇಷ್ಟಾಗಿಯೂ ಕೊರೊನಾ ಸೋಂಕಿಗೆ ಐಸಿಯು ಬೆಡ್ ಸಿಗುತ್ತಿಲ್ಲ. ಹೀಗಾಗಿ ಕೊರೊನಾ ಸೋಂಕಿತರು ಬೀದಿಯಲ್ಲಿ ಹೆಣವಾಗುತ್ತಿದ್ದಾರೆ. ಇನ್ನು ನೆರೆ ರಾಜ್ಯ ಆಂಧ್ರ ಪ್ರದೇಶದಲ್ಲಿ ಇದೀಗ ಕೊರೊನಾ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಆದರೂ ಬಡವರಿಗೆ ಉಚಿತವಾಗಿ ಚಿಕಿತ್ಸೆ ಪಡೆಯುವಂಥ ಅವಕಾಶ ನೆರೆ ರಾಜ್ಯದಲ್ಲಿ ಕಲ್ಪಿಸಿದ್ದಾರೆ. ಹೀಗಾಗಿ ರಾಜ್ಯದ ಗಡಿ ಭಾಗದ ಜನರು ಇದೀಗ ಆಂಧ್ರಪ್ರದೇಶದ ಅನಂತಪುರ ಜಿಲ್ಲಾ ಆಸ್ಪತ್ರೆ ಮೊರೆ ಹೋಗುತ್ತಿದ್ದಾರೆ.
ಭಾರತದಲ್ಲಿ 3 ಲಕ್ಷ ದಾಟಿದ ಕೋವಿಡ್ ಸಾವಿನ ಸಂಖ್ಯೆ
ಬಾಗೇಪಲ್ಲಿ, ಗೌರಿಬಿದನೂರು, ಚಿಕ್ಕಬಳ್ಳಾಪುರ, ಮಧುಗಿರಿ, ಪಾವಗಡ, ಮಡಕಶಿರಾ, ಮಧುಗಿರಿ, ಚಳ್ಳಕೆರೆ, ಶಿರಾದ ಜನರು ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯಲು ಅನಂತಪುರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಕರ್ನಾಟಕದಿಂದ ಹೋಗುತ್ತಿರುವ ಆಂಬ್ಯುಲೆನ್ಸ್ ಗಳನ್ನು ತಡೆಯದೇ, ಚಿಕಿತ್ಸೆಗೆ ಅವಕಾಶ ಕಲ್ಪಿಸುವ ಮೂಲಕ ಗಡಿ ಭಾಗದ ಆಂಧ್ರ ಪೊಲೀಸರು ತಮ್ಮ ಮಾನವೀಯತೆ ತೋರಿದ್ದಾರೆ. ಕೊರೊನಾ ಸೋಂಕಿನಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಬೆಂಗಳೂರಿನಲ್ಲಿ ಬೆಡ್ ಲಭ್ಯವಾಗಿಲ್ಲ. ಜೀವ ಉಳಿಸಿಕೊಳ್ಳುವ ಆಸೆಯಿಂದ ನೆರೆಯ ಅನಂತಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೆಡ್ ಸಿಗದೆ ಅನಂತಪುರ ಜಿಲ್ಲಾ ಆಸ್ಪತ್ರೆಗೆ ದಾಖಲಾಗಲು ಕರ್ನಾಟಕದಿಂದ ಬರುತ್ತಿರುವ ರೋಗಿಗಳಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ. ನಿವೃತ್ತ ಬ್ಯಾಂಕ್ ಉದ್ಯೋಗಿ ಕೂಡ ಬೆಂಗಳೂರಿನಿಂದ ಬಂದು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಆರೋಗ್ಯವಾಗಿದ್ದಾರೆ ಎಂದು ಅನಂತಪುರ ಜಿಲ್ಲಾಧಿಕಾರಿ ಗಂಧಂ ಚಂದ್ರುಡು ತಿಳಿಸಿದ್ದಾರೆ.
ಕರ್ನಾಟಕ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಅನಂತಪುರದೊಂದಿಗೆ ಅವಿನಾಭಾವ ಸಂಬಂಧ. ದಿನ ನಿತ್ಯದ ವಹಿವಾಟಿಗೂ ನಾಡಿನ ಜನರು ಅನಂತಪುರಕ್ಕೆ ಹೋಗಿ ಬರುತ್ತಾರೆ. ವಿಶೇಷ ಅಂದರೆ, ಕರ್ನಾಟಕದಲ್ಲಿ ಕೊರೊನಾ ಸೋಂಕಿಗೆ ತಗಲುತ್ತಿರುವ ಚಿಕಿತ್ಸಾ ವೆಚ್ಚಾ ತೀರಾ ಕಡಿಮೆ. ಹೀಗಾಗಿ ಗಡಿ ಭಾಗದ ಜನರು ಅನಂತಪುರದ ಆಸ್ಪತ್ರೆಗಳನ್ನೇ ನೆಚ್ಚಿಕೊಂಡಿದ್ದಾರೆ. ರಾಜ್ಯದಿಂದ ಚಿಕಿತ್ಸೆಗಾಗಿ ಅನಂತಪುರಕ್ಕೆ ಹೋಗುತ್ತಿರುವ ಆಂಬ್ಯುಲೆನ್ಸ್ ಗಳನ್ನು ತಡೆಯದೇ ಜಿಲ್ಲಾ ಪೊಲೀಸರು ಕೂಡ ಅವಕಾಶ ನೀಡಿದ್ದಾರೆ. ಹೀಗಾಗಿ ನೂರಾರು ಮಂದಿ ಕನ್ನಡಿಗರು ಅನಂತಪುರದಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದು ಚೇತಿರಿಸಿಕೊಂಡಿದ್ದಾರೆ. ಜಿಲ್ಲಾ ಜನತೆ ಮಾತ್ರವಲ್ಲ, ಸಾಕಷ್ಟು ಕೊರೊನಾ ಕೇರ್ ಸೆಂಟರ್ ಗಳನ್ನು ತೆಗೆಯಲಾಗಿದೆ. ಇಲ್ಲಿನ ಸ್ಥಳೀಯರಿಗೂ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತಿದ್ದೇವೆ ಎಂದು ಅನಂತಪುರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.