11 ವರ್ಷಗಳ ನಂತರ ಬಂದ್ ಆದ ಮಂತ್ರಾಲಯ: ರಾಯರ ದರ್ಶನ ಇಲ್ಲ
ಕುರ್ನೂಲ್, ಮಾರ್ಚ್ 19: ಕೊರೊನಾದಿಂದ ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿಷೇಧ ಮಾಡಲಾಗಿದೆ. ಮಂತ್ರಾಲಯ ಕೂಡ ಇಂದಿನಿಂದ ಬಂದ್ ಆಗಿದೆ.
ಸಾಮಾನ್ಯ ದಿನಕ್ಕಿಂತ ಇಂದು ಗುರುವಾರ, ರಾಯರ ದರ್ಶನಕ್ಕೆ ಬರುವ ಭಕ್ತಾಧಿಗಳ ಸಂಖ್ಯೆ ಹೆಚ್ಚಿರುತ್ತದೆ. ಆದರೆ, ಇಂದಿನಿಂದ ರಾಯರ ದರ್ಶನಕ್ಕೆ ನಿರ್ಬಂಧ ಏರಲಾಗಿದೆ. ಕೊರೊನಾ ವೈರಸ್ ಭೀತಿಯಿಂದ ಈ ನಿಯಮವನ್ನು ಪಾಲಿಸಲಾಗುತ್ತಿದೆ.
ಕೊರೊನಾ ಎಫೆಕ್ಟ್ ಇನ್ಮುಂದೆ ಆನ್ಲೈನ್ನಲ್ಲೇ ದೇವರ ದರ್ಶನ
ಕೊರೊನಾ ವೈರಸ್ ಭೀತಿ ಮುಗಿಯುವವರೆಗೆ ದೇವಾಲಯದ ಒಳಗೆ ಭಕ್ತಾಧಿಗಳಿಗೆ ಹೋಗಲು ಅವಕಾಶ ನೀಡುವುದಿಲ್ಲ ಎಂದು ಶ್ರೀಮಠದ ಶ್ರೀಗಳು ತಿಳಿಸಿದ್ದಾರೆ. ರಾಯರ ಪೂಜೆ ಪ್ರತಿ ದಿನ ನಡೆಯಲಿದ್ದು, ಭಕ್ತಾಧಿಗಳ ದರ್ಶನಕ್ಕೆ ಅವಕಾಶ ನೀಡಲಾಗುವುದಿಲ್ಲ.
11 ವರ್ಷಗಳ ಬಳಿಕ ಮಂತ್ರಾಲಯ ಬಂದ್
11 ವರ್ಷಗಳ ಹಿಂದೆ 2009 ಅಕ್ಟೋಬರ್ ತಿಂಗಳಲ್ಲಿ ಮಂತ್ರಾಲಯ ಬಂದ್ ಆಗಿತ್ತು. ಪ್ರವಾಹದಿಂದ ರಾಯರ ದರ್ಶನಕ್ಕೆ ನಿರ್ಬಂಧ ಏರಲಾಗಿತ್ತು. ಇದೀಗ ಮತ್ತೆ ಅಂತಹ ಆತಂಕದ ಪರಿಸ್ಥಿತಿ ಎದುರಾಗಿದೆ. ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತೆ ಕ್ರಮ ತೆಗೆದುಕೊಂಡಿದ್ದು, ಮಠದ ಒಳಗೆ ಭಕ್ತಾಧಿಗಳಿಗೆ ನಿಷೇಧ ಮಾಡಲಾಗಿದೆ. ದಿನ ನಿತ್ಯದ ರಾಯರ ಪೂಜೆ ನಡೆಯಲಿದ್ದು, ದರ್ಶನಕ್ಕೆ ಅವಕಾಶ ಇರುವುದಿಲ್ಲ.
ನಂಜುಂಡೇಶ್ವರನ ದರ್ಶನ ಸಿಗುವುದಿಲ್ಲ
ಮೈಸೂರು ಜಿಲ್ಲೆಯ ನಂಜನಗೂಡಿನ ಶ್ರೀ ನಂಜುಂಡೇಶ್ವರ ದೇವಸ್ಥಾನದಲ್ಲಿಯೂ ಕೊರೊನಾ ಭೀತಿ ಎದುರಾಗಿದೆ. ಹೀಗಾಗಿ, ಇಂದಿನಿಂದ ಅಲ್ಲಿಯೂ ದೇವರ ದರ್ಶನಕ್ಕೆ ನಿರ್ಬಂಧ ಏರಲಾಗಿದೆ. ಕರ್ನಾಟಕ ರಾಜ್ಯ ಬಂದ್ ಇರುವವರೆಗೆ, ಅಂದರೆ, ಮಾರ್ಚ್ 31ರವರೆಗೆ ದೇವಸ್ಥಾನದಲ್ಲಿ ಭಕ್ತರಿಗೆ ಅವಕಾಶ ನೀಡದಿರಲು ನಿರ್ಧಾರಿಸಲಾಗಿದೆ.
ಆದಿಚುಂಚನಗಿರಿಯಲ್ಲಿಯೂ ಇದೇ ನಿಯಮ
ಆದಿಚುಂಚನಗಿರಿ ಮಠ ಶ್ರೀ ಕಾಲಭೈರವೇಶ್ವರನ ದರ್ಶನಕ್ಕೆ ಸಹ ಸದ್ಯಕ್ಕೆ ನಿರ್ಬಂಧ ಇದೆ. ಕೊರೊನಾ ತಡೆಗೆ ಮುಂದಿನ 2 ವಾರಗಳ ಕಾಲ ಭಕ್ತರು ದೇವರ ದರ್ಶನಕ್ಕೆ ಆಗಮಿಸದಂತೆ ತಿಳಿಸಲಾಗಿದೆ. ಆದಿಚುಂಚನಗಿರಿ ಸಂಸ್ಥಾನ ಮಠದ ಜಗದ್ಗುರು ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳು ಭಕ್ತಾದಿಗಳಲ್ಲಿ ಮಠಕ್ಕೆ ಬಾರದಂತೆ ಮನವಿ ಮಾಡಿದ್ದಾರೆ.
ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳು
ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈವರೆಗೆ 14 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೊರೊನಾದಿಂದ ಕಲಬುರ್ಗಿಯ ಒಬ್ಬ ವೃದ್ದ ಮೃತಪಟ್ಟಿದ್ದಾರೆ. ಹೀಗಾಗಿ, ರಾಜ್ಯದಲ್ಲಿ ಕೊರೊನಾ ಭೀತಿ ಹೆಚ್ಚಿದೆ. ಬಹುತೇಕ ಎಲ್ಲ ಪ್ರಮುಖ ದೇವಲಯಗಳು ಭಕ್ತರಿಗೆ ನಿಷೇಧ ಮಾಡಿದೆ.