ಹೃದಯ ಹಿಂಡುವ ಕಥೆ: 150ಕಿ.ಮೀ ನಡೆದ ಕಾರ್ಮಿಕ ಸೇರಿದ್ದು ಮನೆಯಲ್ಲ ಮಸಣ!
ಚಿತ್ತೂರ್, ಮೇ.01: ಕೊರೊನಾ ವೈರಸ್ ಸೋಂಕು ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾರತ ಲಾಕ್ ಡೌನ್ ಘೋಷಿಸಿದೆ. ಇದರ ಮಧ್ಯೆ ತಮ್ಮ ಮನೆಗೆ ತೆರಳುವುದಕ್ಕಾಗಿ 150ಕ್ಕೂ ಹೆಚ್ಚು ಕಿಲೋ ಮೀಟರ್ ನಡೆದುಕೊಂಡೇ ಸಾಗಿದ ವಲಸೆ ಕಾರ್ಮಿಕ ಮಸಣ ಸೇರಿದಂತಾ ಹೃದಯ ವಿದ್ರಾವಕ ಘಟನೆಯೊಂದು ಆಂಧ್ರ ಪ್ರದೇಶದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
Recommended Video
ಕೂಲಿ ಕೆಲಸ ಅರಸಿ ಬೆಂಗಳೂರಿಗೆ ವಲಸೆ ಬಂದಿದ್ದ ಕಾರ್ಮಿಕನಿಗೆ ದುಡಿಮೆ ಇರಲಿಲ್ಲ. ಆಂಧ್ರ ಪ್ರದೇಶ ಚಿತ್ತೂರು ಜಿಲ್ಲೆಯ ಸ್ವಗ್ರಾಮ ಮಿತ್ತಪಲ್ಲಿಗೆ ತೆರಳುವುದಕ್ಕೆ ಯಾವುದೇ ವಾಹನವೂ ಸಿಕ್ಕಿರಲಿಲ್ಲ. ಹೀಗಾಗಿ ಬೆಂಗಳೂರಿನಿಂದ ನಡೆದುಕೊಂಡು ಸಾಗಿದ 28 ವರ್ಷದ ಹರಿಪ್ರಸಾದ್ ಬುಧವಾರ ಸ್ವಗ್ರಾಮ ಸನಿಹ ತೆರಳುತ್ತಿದ್ದಂತೆ ಪ್ರಾಣ ಬಿಟ್ಟಿದ್ದಾರೆ.
1,000 ಕಾರ್ಮಿಕರನ್ನು ಹೊತ್ತ ಚುಕುಬುಕು ರೈಲು ಹೊರಟಿದ್ದೆಲ್ಲಿಗೆ?
ಕರ್ನಾಟಕದಲ್ಲಿ ನೊವೆಲ್ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 576ಕ್ಕೆ ಏರಿಕೆಯಾಗಿದೆ. ಬೆಂಗಳೂರು ಒಂದರಲ್ಲೇ 145ಕ್ಕೂ ಅಧಿಕ ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿದ್ದು, ಇದುವರೆಗೂ ರಾಜ್ಯದಲ್ಲಿ 21 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಆದರೆ ಬೆಂಗಳೂರಿನಲ್ಲೇ ಕೂಲಿ ಮಾಡಿಕೊಂಡಿದ್ದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿರಲಿಲ್ಲ.
ಬೆಂಗಳೂರು ತೊರೆಯಲು ಕೊರೊನಾ ಭೀತಿಯೇ ಕಾರಣ
ಕರ್ನಾಟಕಕ್ಕೆ ವಲಸೆ ಬಂದಿದ್ದ ಕಾರ್ಮಿಕ ಹರಿಪ್ರಸಾದ್ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಬೆಂಗಳೂರಿನಲ್ಲಿ ಹೆಚ್ಚುತ್ತಿರುವುದನ್ನು ಕಂಡು ಬೆಚ್ಚಿ ಬಿದ್ದಿದ್ದರು. ಮಹಾಮಾರಿಯಿಂದ ಹೇಗಾದರೂ ಪಾರಾಗಬೇಕು ಎಂಬ ಆಲೋಚನೆಯಲ್ಲಿ ಸಿಲಿಕಾನ್ ಸಿಟಿಯನ್ನು ತೊರೆದು ಚಿತ್ತೂರಿನ ಮಿತ್ತಪಲ್ಲಿ ಗ್ರಾಮದತ್ತ ಮುಖ ಮಾಡಿದ್ದರು ಎಂದು ತಿಳಿದು ಬಂದಿದೆ.
ಅಸ್ವಸ್ಥಗೊಂಡ ಕಾರ್ಮಿಕನ ನೆರವಿಗೆ ಧಾವಿಸದ ಜನರು
ಸುಮಾರು 150ಕ್ಕೂ ಹೆಚ್ಚು ಕಿಲೋ ಮೀಟರ್ ದೂರ ನಡೆದುಕೊಂಡು ಸಾಗಿದ ಕಾರ್ಮಿಕ ಹರಿಪ್ರಸಾದ್ ಮಾರ್ಗಮಧ್ಯದಲ್ಲಿ ತೀವ್ರ ಅಸ್ವಸ್ಥಗೊಂಡಿದ್ದರು. ಮೊದಲೇ ಟಿಬಿ ರೋಗಿಯಾಗಿದ್ದ ಕಾರ್ಮಿಕನು ಸುದೀರ್ಘ ಅಂತರ ನಡೆದಿದ್ದು, ಆಯಾಸದಿಂದ ಬಸವಳಿದಿದ್ದನು. ಹೀಗಿದ್ದರೂ ಕಾರ್ಮಿಕನಿಗೆ ಕೊರೊನಾ ವೈರಸ್ ತಗಲಿರುವ ಭೀತಿ ಹಿನ್ನೆಲೆಯಲ್ಲಿ ಯಾರೊಬ್ಬರೂ ನೆರವು ನೀಡಲಿಲ್ಲ.
ಹರಿಪ್ರಸಾದ್ ಮೃತದೇಹಕ್ಕೂ ಗ್ರಾಮದಲ್ಲಿ ಪ್ರವೇಶ ನಿರ್ಬಂಧ
ಬೆಂಗಳೂರಿನಿಂದ ನಡೆದುಕೊಂಡು ಹೋಗಿ ಆಯಾಸದಿಂದ ಮೃತಪಟ್ಟ ಕಾರ್ಮಿಕ ಹರಿಪ್ರಸಾದ್ ಮೃತದೇಹಕ್ಕೂ ಕೂಡಾ ಆಂಧ್ರ ಪ್ರದೇಶ ಚಿತ್ತೂರು ಜಿಲ್ಲೆ ಮಿತ್ತಪಲ್ಲಿ ಗ್ರಾಮಸ್ಥರು ಪ್ರವೇಶ ನಿರಾಕರಿಸಿದರು. ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟಿರಬಹುದು ಎಂಬ ಭಯದಲ್ಲಿ ಸ್ವತಃ ಸಂಬಂಧಿಕರೇ ಮೃತದೇಹವನ್ನು ಮುಟ್ಟುವುದಕ್ಕೆ ಹಿಂದುಮುಂದು ನೋಡಿದರು.
ಕಾರ್ಮಿಕ ಹರಿಪ್ರಸಾದ್ ಗೆ ಕೊರೊನಾ ವೈರಸ್ ನೆಗೆಟಿವ್
ಬೆಂಗಳೂರಿನಿಂದ ಆಗಮಿಸಿದ ವ್ಯಕ್ತಿಯೊಬ್ಬ ಗ್ರಾಮದ ಬಳಿ ಮೃತಪಟ್ಟಿರುವ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ವೈದ್ಯಕೀಯ ಸಿಬ್ಬಂದಿ ಮೃತದೇಹದ ರಕ್ತ ಮತ್ತು ಗಂಟಲು ಮಾದರಿಯನ್ನು ಕೊರೊನೆ ಟೆಸ್ಟ್ ಗೆ ಕಳುಹಿಸಿ ಕೊಟ್ಟರು. ಈ ವೇಳೆ ಕಾರ್ಮಿಕನಲ್ಲಿ ಕೊರೊನಾ ವೈರಸ್ ಸೋಂಕು ಇಲ್ಲ ಎಂಬುದು ಸ್ಪಷ್ಟವಾಯಿತು. ಗುರುವಾರ ಪೊಲೀಸರ ನೆರವಿನಿಂದ ಮೃತದೇಹಕ್ಕೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.