ಘೋರ ಅವಾಂತರ: ಮೇಕೆ ಬಲಿ ಬದಲು ವ್ಯಕ್ತಿಯ ತಲೆ ಕಡಿದ ಕುಡುಕ
ಚಿತ್ತೂರು (ಆಂಧ್ರಪ್ರದೇಶ), ಜನವರಿ 18: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಸಂಕ್ರಾಂತಿ ಆಚರಣೆಯ ನಡುವೆ ಘೋರ ಅವಾಂತರ ಜರುಗಿದೆ. ಭಾನುವಾರ (ಜನವರಿ 16) ಸಂಕ್ರಾಂತಿ ಆಚರಣೆ ಸಂದರ್ಭದಲ್ಲಿ ಪ್ರಾಣಿಬಲಿ ಕೊಡುವುದು ರೂಢಿಯಿಂದ ಪಾಲಿಸಿಕೊಂಡು ಬಂದಿದ್ದಾರೆ. ಆದರೆ, ಬಲಿಗಾಗಿ ಸಿದ್ಧವಿದ್ದ ಮೇಕೆ ಬದಲಿಗೆ ಪಕ್ಕದಲ್ಲಿದ್ದ ವ್ಯಕ್ತಿಯೊಬ್ಬನ ತಲೆ ಕಡಿದ ದುರ್ಘಟನೆ ವರದಿಯಾಗಿದೆ.
ಕುಡುಕ ವ್ಯಕ್ತಿಯೊಬ್ಬ ಬಲಿಕೊಡುವ ಮೇಕೆಯನ್ನು ಹಿಡಿದಿದ್ದ ವ್ಯಕ್ತಿಯ ಕುತ್ತಿಗೆಗೆ ಕತ್ತಿ ಹಾಕಿದ್ದಾನೆ. ಪೊಲೀಸರ ಪ್ರಕಾರ, ಅಮಲೇರಿದ ಸ್ಥಿತಿಯಲ್ಲಿದ್ದ ಆ ವ್ಯಕ್ತಿ ಮೇಕೆಯನ್ನು ಕಡಿಯಲು ಕತ್ತಿ ಎತ್ತಿದ್ದಾನೆ, ಆದರೆ, ಮೇಕೆ ಕುತ್ತಿಗೆ ಬದಲಿಗೆ ಪಕ್ಕದಲ್ಲಿದ್ದ ವ್ಯಕ್ತಿ ಕುತ್ತಿಗೆ ಕತ್ತರಿಸಿದ್ದಾನೆ. ಗಾಯಗೊಂಡು ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಸುರೇಶ್ (35) ಅವರನ್ನು ಮದನಪಲ್ಲಿಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು, ಕುತ್ತಿಗೆಗೆ ಬಲವಾದ ಏಟು ಬಿದ್ದು, ರಕ್ತಸ್ರಾವವಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
ಪಾನಮತ್ತನಾಗಿದ್ದ ಚಲಪತಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.