ಪೂರ್ವ ಗೋದಾವರಿ ಜಿಲ್ಲೆಯಲ್ಲಿ ರಸ್ತೆ ಅಪಘಾತ; ಚಿತ್ರದುರ್ಗದ ಎಂಟು ಮಂದಿ ಸಾವು
ಅಮರಾವತಿ (ಆಂಧ್ರಪ್ರದೇಶ), ಅಕ್ಟೋಬರ್ 15: ಪೂರ್ವ ಗೋದಾವರಿ ಜಿಲ್ಲೆಯ ಚಿಂತೂರು ಗ್ರಾಮದಲ್ಲಿ ಮಂಗಳವಾರ ಖಾಸಗಿ ಬಸ್ ಉರುಳಿ, ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಹಲವರಿಗೆ ಗಾಯಗಳಾಗಿವೆ. ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ಇತರ ರಾಜ್ಯಗಳ ಪುಣ್ಯಕ್ಷೇತ್ರ ದರ್ಶನಕ್ಕೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
Recommended Video
ಮಿನಿ ಬಸ್ ಕಮರಿಗೆ ಉರುಳಿ, ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮರೆದುಮಿಲ್ಲಿ- ಚಿಂತೂರು ರಸ್ತೆಯಲ್ಲಿನ ವಾಲ್ಮೀಕಿಕೊಂಡದ ಸಮೀಪ ಈ ಘಟನೆ ಸಂಭವಿಸಿದೆ. ಆಸ್ಪತ್ರೆಗೆ ಕರೆದೊಯ್ಯುವಾಗ ಮೂವರು ಗಾಯಗಳಿಂದ ಸಾವನ್ನಪ್ಪಿದ್ದಾರೆ ಎಂದು ಪೂರ್ವ ಗೋದಾವರಿ ಜಿಲ್ಲೆಯ ಎಸ್ ಪಿ ಅದ್ನಾನ್ ನಯೀಂ ಅಸ್ಮಿ ಮಾಹಿತಿ ನೀಡಿದ್ದಾರೆ.
ಕಾರು ಅಪಘಾತದಲ್ಲಿ ನಾಲ್ವರು ರಾಷ್ಟ್ರ ಮಟ್ಟದ ಹಾಕಿ ಆಟಗಾರರ ದುರ್ಮರಣ
ತೀವ್ರವಾಗಿ ಗಾಯಗೊಂಡಿದ್ದ ಇತರ ಮೂವರ ಸ್ಥಿತಿ ಗಂಭೀರವಾಗಿ ಇದೆ. ಅವರನ್ನು ರಂಪಚೋಡಾವರಂ ಪ್ರದೇಶದಲ್ಲಿ ಇರುವ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾತ್ರಾರ್ಥಿಗಳು ಇದ್ದ ಬಸ್ ಭದ್ರಾಚಲಂನಿಂದ ಅನ್ನವರಂಗೆ ತೆರಳುತ್ತಿತ್ತು. ಈ ವೇಳೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಸ್ತೆ ಅಪಘಾತವಾದ ಚಿಂತೂರು ಗ್ರಾಮದಲ್ಲಿ ಮೊಬೈಲ್ ಫೋನ್ ಸಂಪರ್ಕ ಸಿಗುವುದಿಲ್ಲ. ಆದ್ದರಿಂದ ಸ್ಯಾಟಲೈಟ್ ಫೋನ್ ಗಳನ್ನು ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುರಳೀಧರ್ ರೆಡ್ಡಿ ಮಾಹಿತಿ ನೀಡಿದ್ದಾರೆ.