ಆಂಧ್ರದಲ್ಲಿ ನಾಯ್ಡು ಮತ್ತೆ ಸಿಎಂ, ಆದ್ರೆ ಕೇಂದ್ರದಲ್ಲಿ ಆಟ ನಡೆಯೋಲ್ಲ!
ಅಮರಾವತಿ, ಮೇ 20: ಭಾನುವಾರ ಬಿಡುಗಡೆಯಾದ ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಕೊಂಚ ಸಿಹಿ, ಕೊಂಚ ಕಹಿ!
ಆಂಧ್ರಪಪ್ರದೇಶದಲ್ಲಿ ಲೋಕಸಭೆ ಚುನಾವಣೆಯೊಟ್ಟಿಗೆ ವಿಧಾನಸಭೆ ಚುನಾವಣೆಯೂ ನಡೆದಿತ್ತು. ನಾಯ್ಡು ವಿರುದ್ಧ ಆಡಳಿತ ವಿರೋಧಿ ಅಲೆ ಇದ್ದಿದ್ದರಿಂದ ಈ ಬಾರಿ ತೆಲುಗು ದೇಶಂ ಪಕ್ಷ ಸೋಲಬಹುದು, ಜಗನ್ಮೋಹನ್ ರೆಡ್ಡಿ ನೇತೃತ್ವದ ವೈಎಸ್ ಆರ್ ಕಾಂಗ್ರೆಸ್ ಬಹುಮತ ಪಡೆದು ಅಧಿಕಾರಕ್ಕೆ ಬರಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಇಂಡಿಯಾ ಟುಡೇ - ಏಕ್ಸಿಸ್ ಎಕ್ಸಿಟ್ ಪೋಲ್: ದ.ಭಾರತದಲ್ಲಿ ಯಾರಿಗೆ ಮೇಲುಗೈ?
ಆದರೆ ಚುನಾವಣೋತ್ತರ ಸಮೀಕ್ಷೆಗಳು ನಾಯ್ಡು ಮತ್ತೊಮ್ಮೆ ಮುಖ್ಯಮಂತ್ರಿಯಾಗಬಹದು ಎಂದಿವೆ. ಆದರೆ ಕೇಂದ್ರದಲ್ಲಿ ಎನ್ ಡಿ ಎ ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬರಲಿದ್ದು, ಇಷ್ಟು ದಿನ ಎನ್ ಡಿಎ ವಿರೋಧಿ ಬಣಗಳನ್ನು ಒಗ್ಗೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ನಾಯ್ಡು ಅವರು ರಾಷ್ಟ್ರದ ರಾಜಕಾರಣದ ಸಹವಾಸವೇ ಬೇಡ ಎಂದು ಸುಮ್ಮನೆ ಕೂರಬೇಕಾಗುತ್ತದೆ. ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಸತ್ಯವಾದರೆ ನಾಯ್ಡು ರಾಷ್ಟ್ರ ರಾಜಕಾರಣದತ್ತ ಹೆಜ್ಜೆ ಇರಿಸುವ ಯೋಚನೆಯನ್ನೇ ಬಿಟ್ಟು ಆಂಧ್ರಪ್ರದೇಶಕ್ಕಷ್ಟೇ ಸೀಮಿತವಾಗಿ ಇರಬೇಕಾಗುತ್ತದೆ.
ಆಂಧ್ರಪ್ರದೇಶದಲ್ಲಿ ಒಟ್ಟು 175 ವಿಧಾನಸಭಾ ಕ್ಷೇತ್ರಗಳಿದ್ದು, ಅವುಗಳಲ್ಲಿ 90-110 ಸ್ಥಾನಗಳಲ್ಲಿ ನಾಯ್ಡು ನೇತೃತ್ವದ ಟಿಡಿಪಿ ಜಯಗಳಿಸಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಆದರೆ ಲೋಕಸಭೆ ಚುನಾವಣೆಯಲ್ಲಿ ವೈಎಸ್ ಆರ್ ಕಾಂಗ್ರೆಸ್ ಸುಮಾರು 11(25) ಕ್ಷೇತ್ರಗಳಲ್ಲಿ ಜಯಗಳಿಸಲಿದೆ. ವೈಎಸ್ ಆರ್ ಕಾಂಗ್ರೆಸ್ ತನ್ನ ಬೆಂಬಲವನ್ನು ಎನ್ ಡಿಎ ಮೈತ್ರಿಕೂಟಕ್ಕೆ ನೀಡಿದರೆ, ನಾಯ್ಡುಗೆ ಇದರಿಂದ ತೀವ್ರ ಮುಖಭಂಗವಾಗಬಹುದು. ಆದ್ದರಿಂದ ಎಕ್ಸಿಟ್ ಪೋಲ್ ಸತ್ಯವಾದರೆ ಸಿಎಂ ಹುದ್ದೆ ಪಡೆದರೂ, ಸಂಭ್ರಮಿಸುವ ಅವಕಾಶವನ್ನು ನಾಯ್ಡು ಕಳೆದುಕೊಳ್ಳಲಿದ್ದಾರೆ.