ಆಂಧ್ರ ರೈತನ ಇಬ್ಬರು ಮಕ್ಕಳ ಶಿಕ್ಷಣದ ಜವಾಬ್ದಾರಿ ನನ್ನದು: ಚಂದ್ರಬಾಬು ನಾಯ್ಡು
ಅಮರಾವತಿ, ಜುಲೈ 27: ಆಂಧ್ರಪ್ರದೇಶದ ರೈತರ ಇಬ್ಬರು ಮಕ್ಕಳ ಶಿಕ್ಷಣದ ಜವಾಬ್ದಾರಿ ನನ್ನದು ಎಂದು ಆಂಧ್ರ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಬಾಲಿವುಡ್ ನಟ ಸೋನುಸೂದ್ ಚಿತ್ತೂರಿನ ರೈತರ ಕುಟುಂಬಕ್ಕೆ ಟ್ರ್ಯಾಕ್ಟರ್ ನೀಡಿ ಸಹಾಯ ಮಾಡಿದ ಬಳಿಕ ಚಂದ್ರಬಾಬು ನಾಯ್ಡು ಈ ಹೇಳಿಕೆ ನೀಡಿದ್ದಾರೆ. ಸೋನು ಸೂದ್ ಅವರ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಸೋನು ಸೂದ್ ಕಾರ್ಯಕ್ಕೆ ಮಹಾರಾಷ್ಟ್ರ ರಾಜ್ಯಪಾಲರ ಚಪ್ಪಾಳೆ
ಚಿತ್ತೂರು ಜಿಲ್ಲೆಯ ರೈತರ ಕುಟುಂಬಕ್ಕೆ ಟ್ರ್ಯಾಕ್ಟರ್ ನೀಡಿ ಸಹಾಯ ಮಾಡಿದ್ದಕ್ಕೆ ಸೋನು ಸೂದ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಆ ರೈತರ ಇಬ್ಬರು ಹೆಣ್ಣುಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ನಾನು ವಹಿಸಿಕೊಳ್ಳುತ್ತೇನೆ ಎಂದು ನಾಯ್ಡು ಹೇಳಿದ್ದಾರೆ.
ಶನಿವಾರವಷ್ಟೇ ರೈತ ನಾಗೇಶ್ವರ ರಾವ್ ಅವರ ಕುಟುಂಬಕ್ಕೆ ಟ್ರ್ಯಾಕ್ಟರ್ ನೀಡಿದ್ದರು.ಚಿತ್ತೂರು ಜಿಲ್ಲೆಯ ಕೆ ಮಹಲ್ ರಾಜಪಲ್ಲಿ ಮಂಡಲದ ರೈತ ನಾಗೇಶ್ವರ ರಾವ್ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳ ಕಷ್ಟದ ಕುರಿತು ವಿಡಿಯೋವೊಂದಕ್ಕೆ ನಟ ಸೋನು ಸೂದ್ ಪ್ರತಿಕ್ರಿಯಿಸಿದ್ದರು.
ಈ ರೈತ ಕೊರೊನಾ ಬಂದ ನಂತರ ಅಪಾರ ನಷ್ಟದಿಂದ ತನ್ನ ಕೈ ಸುಟ್ಟುಕೊಂಡಿದ್ದರು. ಹೀಗಾಗಿ ಗದ್ದೆ ಉಳುಮೆ ಮಾಡುವ ಸಲುವಾಗಿ ಎತ್ತುಗಳನ್ನು ಖರೀದಿಸಲು ಕೂಡ ರೈತನಲ್ಲಿ ಮುಕ್ಕಾಸು ಇರಲಿಲ್ಲ. ಅನಿವಾರ್ಯತೆ ಹಾಗೂ ಅಸಹಾಯಕತೆ ಈ ರೈತನನ್ನು ತನ್ನಿಬ್ಬರು ಹೆಣ್ಣು ಮಕ್ಕಳನ್ನೇ ನೇಗಿಲು ಹಿಡಿಸಿ ಹೊಲ ಉಳುಮೆ ಮಾಡುವಂತೆ ಮಾಡಿದೆ.