ಆಂಧ್ರದಲ್ಲಿ ನಾನು ಗೆಲ್ಲೋದರಲ್ಲಿ ಅನುಮಾನವಿಲ್ಲ, ಆದರೆ... : ನಾಯ್ಡು
ಅಮರಾವತಿ, ಮೇ 20: "ಆಂಧ್ರಪ್ರದೇಶದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ನಾನು ಆಯ್ಕೆಯಾಗುವುದು ಸಾವಿರ ಪ್ರತಿಶತ ಖಚಿತ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಶೇ.50 ರಷ್ಟು ವಿವಿಪ್ಯಾಟ್ ಅನ್ನು ಇವಿಎಂ ಜೊತೆ ತಾಳೆ ಮಾಡಬೇಕು" ಎಂಬುದು ನಮ್ಮ ಬೇಡಿಕೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ, ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಆಂಧ್ರದಲ್ಲಿ ನಾಯ್ಡು ಮತ್ತೆ ಸಿಎಂ, ಆದ್ರೆ ಕೇಂದ್ರದಲ್ಲಿ ಆಟ ನಡೆಯೋಲ್ಲ!
ಆಂಧ್ರಪ್ರದೇಶದಲ್ಲಿ ನಾನು ಗೆಲ್ಲುತ್ತೇನೆ ಎಂಬುದು 1000 ಪ್ರತಿಶತ ಸತ್ಯ. ಅದರಲ್ಲಿ 0.1ರಷ್ಟು ಅನುಮಾನವೂ ಇಲ್ಲ. ಆದರೆ ಮತ ಎಣಿಕೆಗೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳಿವೆ. ಇವಿಎಂ ಕುರಿತೂ ಹಲವು ಅನುಮಾನವಿದೆ. ಅವನ್ನೆಲ್ಲ ಚುನಾವಣಾ ಆಯೋಗ ಈಗಲೇ ಬಗೆಹರಿಸಬೇಕು. ಇಲ್ಲವೆಂದರೆ ಧರಣಿ ಕೂರಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಆಂಧ್ರಪ್ರದೇಶದಲ್ಲಿ ಒಟ್ಟು 175 ವಿಧಾನಸಭಾ ಕ್ಷೇತ್ರಗಳಿದ್ದು, ಅವುಗಳಲ್ಲಿ 90-110 ಸ್ಥಾನಗಳಲ್ಲಿ ನಾಯ್ಡು ನೇತೃತ್ವದ ಟಿಡಿಪಿ ಜಯಗಳಿಸಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಚುನಾವಣೋತ್ತರ ಸಮೀಕ್ಷೆಗಳು ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ಅಧಿಕಾರಕ್ಕೆ ಬರುತ್ತದೆಂದು ಹೇಳಿದ್ದು, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರವೇ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ ಎಂದಿದೆ.