ರಾಜಕೀಯ ತ್ಯಜಿಸುತ್ತೇನೆ: ಜಗನ್ಗೆ ಚಂದ್ರಬಾಬು ನಾಯ್ಡು ಸವಾಲು
ಅಮರಾವತಿ, ಡಿಸೆಂಬರ್ 18: ರಾಜ್ಯದಲ್ಲಿ ಮೂರು ರಾಜಧಾನಿಗಳನ್ನು ರಚಿಸುವ ಸಂಬಂಧ ಜನಾಭಿಪ್ರಾಯ ಸಂಗ್ರಹಣೆ ಮಾಡಿ. ಒಂದು ವೇಳೆಗೆ ರಾಜ್ಯದ ಜನತೆ ಅದರ ಪರವಾಗಿ ಮತ ಹಾಕಿದರೆ ತಾವು ರಾಜಕೀಯವನ್ನೇ ತ್ಯಜಿಸುವುದಾಗಿ ಆಂಧ್ರಪ್ರದೇಶದ ವಿರೋಧ ಪಕ್ಷ ತೆಲುಗು ದೇಶಂ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರಿಗೆ ಸವಾಲು ಹಾಕಿದ್ದಾರೆ.
ರಾಜ್ಯದ ಆರು ಕೋಟಿ ಜನರ ಬಯಕೆಗೆ ವಿರುದ್ಧವಾಗಿ ರಾಜಧಾನಿಯನ್ನು ಬೇರೆಡೆಗೆ ಸ್ಥಳಾಂತರಿಸುವ ಪ್ರಯತ್ನವನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಮತ್ತು ಜನತೆಯ ಕ್ಷಮೆಯಾಚಿಸಬೇಕು ಎಂದು ಅವರು ಮುಖ್ಯಮಂತ್ರಿಯನ್ನು ಆಗ್ರಹಿಸಿದ್ದಾರೆ.
ರೈತರ ಹೋರಾಟಕ್ಕಾಗಿ ಎಂತಹ 'ತ್ಯಾಗ' ಮಾಡಿದ ಚಂದ್ರಬಾಬು ನಾಯ್ಡು ಪತ್ನಿ!
ಅಮರಾವತಿಯನ್ನು ರಾಜಧಾನಿಯನ್ನಾಗಿ ಉಳಿಸಿಕೊಳ್ಳುವ ರೈತರ ಹೋರಾಟಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಅಮರಾವತಿಯ ರಾಯಪುಡ ಗ್ರಾಮದಲ್ಲಿ ಆಯೋಜಿಸಲಾಗಿದ್ದ 'ಅಮರಾವತಿ ಜನಭೇರಿ' ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು.
ದಕ್ಷಿಣ ಆಫ್ರಿಕಾದಲ್ಲಿ ಇರುವಂತೆ ರಾಜ್ಯದಲ್ಲಿ ಮೂರು ರಾಜಧಾನಿಗಳನ್ನು ರಚಿಸುವ ಬಗ್ಗೆ ಕಳೆದ ವರ್ಷ ಜಗನ್ ಮೋಹನ್ ರೆಡ್ಡಿ ಅವರು ಬಯಕೆ ವ್ಯಕ್ತಪಡಿಸಿದ್ದರು. ವಿಶಾಖಪಟ್ಟಣಂ ಅನ್ನು ಕಾರ್ಯಕಾರಿ ರಾಜಧಾನಿ, ಕರ್ನೂಲ್ ಅನ್ನು ನ್ಯಾಯಾಂಗ ರಾಜಧಾನಿ ಮತ್ತು ಅಮರಾವತಿಯನ್ನು ಶಾಸಕಾಂಗ ರಾಜಧಾನಿ ಎಂದು ಕರೆಯುವ ಶಾಸನವನ್ನು ಅವರ ಸರ್ಕಾರ ಅನುಮೋದಿಸಿತ್ತು.
ಆಂಧ್ರಪ್ರದೇಶಕ್ಕೆ ಒಂದಲ್ಲ ಮೂರು ರಾಜಧಾನಿ: ಬಿಜೆಪಿ ನಾಯಕರ ಮೌನ
ಅಮರಾವತಿ ರಾಜಧಾನಿಯ ಅಭಿವೃದ್ಧಿಗಾಗಿ 33,000ಕ್ಕೂ ಅಧಿಕ ಕೃಷಿ ಭೂಮಿಯನ್ನು ಬಿಟ್ಟುಕೊಟ್ಟಿದ್ದ ರೈತರು ಮೂರು ರಾಜಧಾನಿಗಳ ನಿರ್ಧಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು. ಕಳೆದ ವರ್ಷ ಡಿ. 17ರಂದು ಸ್ಥಳೀಯ ರೈತರು ರಾಜಕೀಯ ಪಕ್ಷಗಳು, ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಅಮರಾವತಿಯನ್ನು ಮಾತ್ರವೇ ರಾಜಧಾನಿಯನ್ನಾಗಿ ಉಳಿಸಿಕೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ಆರಂಭಿಸಿದ್ದರು.