ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ಮೇಲೆ ಚಪ್ಪಲಿ ಎಸೆತ!
ಅಮರಾವತಿ, ಫೆಬ್ರವರಿ 27: ತೆಲಗು ದೇಶಂ ಪಕ್ಷದ ಅಧ್ಯಕ್ಷ ಹಾಗೂ ಆಂದ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮೇಲೆ ದುಷ್ಕರ್ಮಿಗಳು ಚಪ್ಪಲಿ, ಮೊಟ್ಟೆ, ಟೊಮೆಟೊಗಳನ್ನು ಎಸೆದಿರುವ ಘಟನೆ ಗುರುವಾರ ಸಂಜೆ ವಿಶಾಖಪಟ್ಟಣದಲ್ಲಿ ನಡೆದಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಚಂದ್ರಬಾಬು ನಾಯ್ಡು ಅವರನ್ನು ವಿಶಾಖಪಟ್ಟಣ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಿಶಾಖಪಟ್ಟಣದಲ್ಲಿ ಟಿಡಿಪಿ ಆಯೋಜಿಸಿದ್ದ ಪ್ರಜಾ ಚೈತನ್ಯ ಯಾತ್ರೆಯಲ್ಲಿ ಪಾಲ್ಗೊಳ್ಳಲು ನಾಯ್ಡು ಬಂದಿದ್ದಾಗ ಈ ಘಟನೆ ನಡೆದಿದೆ. ಪ್ರಜಾ ಚೈತನ್ಯ ಯಾತ್ರೆಯಲ್ಲಿ ನಾಯ್ಡು ಭಾಗವಹಿಸಬಾರದು, ಗೋ ಬ್ಯಾಕ್ ನಾಯ್ಡು ಎಂದು ವೈಎಸ್ಆರ್ ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ ನಡೆಸಿ, ಪ್ರತಿಭಟನೆ ನಡೆಸಿದ್ದಾರೆ.
ಆಂಧ್ರ ಸಿಎಂ ಜಗನ್ ದ್ವೇಷದ ನಡೆಗೆ ಚಂದ್ರಬಾಬು ನಾಯ್ಡು ಹೈರಾಣ
ಪ್ರತಿಭಟನೆಯನ್ನು ಕಡೆಗಣಿಸಿ ಪಾದಯಾತ್ರೆ ನಡೆಸಲು ಚಂದ್ರಬಾಬು ನಾಯ್ಡು ಅವರು ಮುಂದಾಗಿದ್ದರು. ಈ ವೇಳೆ ಅವರ ಮೇಲೆ ಚಪ್ಪಲಿ, ಟೊಮೆಟೊ ಮೊಟ್ಟೆಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶಾಖಪಟ್ಟಣದ ವಿಮಾನ ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ಸಮಾವೇಶಕ್ಕೆ ಪೊಲೀಸರು ತಡೆ ನೀಡಿ, ಎರಡೂ ಕಡೆಯ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ವಿಶಾಖಪಟ್ಟಣದಲ್ಲಿ ಸದ್ಯ ಉದ್ವಿಗ್ನತೆಯ ವಾತಾವರಣ ನಿರ್ಮಾಣವಾಗಿದೆ ಎಂದು ವರದಿಗಳು ತಿಳಿಸಿವೆ.