ಟಿಡಿಪಿ ದುರ್ಬಲಗೊಳಿಸಲು ಬಿಜೆಪಿ ಪ್ರಯತ್ನ: ಚಂದ್ರಬಾಬು ನಾಯ್ಡು ಆರೋಪ
ಅಮರಾವತಿ, ಜೂನ್ 20: ತೆಲುಗು ದೇಶಂ ಪಕ್ಷದ ನಾಲ್ವರು ರಾಜ್ಯಸಭಾ ಸಂಸದರು ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಲು ನಿರ್ಧರಿಸಿದ ಬೆನ್ನಲ್ಲೇ, ಪಕ್ಷದ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಬಿಜೆಪಿ ತಮ್ಮ ಪಕ್ಷವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ಪಕ್ಷದ ಹಿರಿಯರೊಂದಿಗೆ ಈ ಸಂಬಂಧ ಸಮಾಲೋಚನೆ ನಡೆಸುತ್ತಿರುವುದಾಗಿ ತಿಳಿಸಿದರು.
ನಾಯ್ಡುಗೆ ಮತ್ತೆ ಆಘಾತ: ಬಿಜೆಪಿ ಸೇರಿದ ಟಿಡಿಪಿ ಸಂಸದರು
ಎಎನ್ಐ ಸುದ್ದಿಸಂಸ್ಥೆಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು, 'ಡಿಟಿಪಿಯನ್ನು ದುರ್ಬಲಗೊಳಿಸಲು ಬಿಜೆಪಿ ನಡೆಸುತ್ತಿರುವ ಪ್ರಯತ್ನವನ್ನು ನಾವು ಖಂಡಿಸುತ್ತೇವೆ. ಪಕ್ಷಕ್ಕೆ ಈ ರೀತಿಯ ಬಿಕ್ಕಟ್ಟು ಹೊಸತೇನಲ್ಲ' ಎಂದು ಹೇಳಿದರು.
'ಆಂಧ್ರಪ್ರದೇಶದ ಹಿತಾಸಕ್ತಿಗಾಗಿ ರಾಜ್ಯಕ್ಕೆ ವಿಶೇಷ ಸ್ಥಾನಮಾನದ ಮಾನ್ಯತೆ ಒದಗಿಸುವ ಸಲುವಾಗಿಯಷ್ಟೇ ನಾವು ಬಿಜೆಪಿ ವಿರುದ್ಧ ಹೋರಾಡಿದ್ದೆವು. ವಿಶೇಷ ಸ್ಥಾನಮಾನಕ್ಕಾಗಿ ಕೇಂದ್ರದಲ್ಲಿನ ಸಚಿವ ಸ್ಥಾನಗಳನ್ನೂ ನಾವು ತ್ಯಾಗ ಮಾಡಿದ್ದೆವು' ಎಂದರು.
ಈ ಬೆಳವಣಿಗೆಗಳ ಬಗ್ಗೆ ಪಕ್ಷದ ಮುಖಂಡರು ಚಿಂತೆಗೆ ಒಳಗಾಗುವುದು ಬೇಡ ಎಂದು ಹೇಳಿದ ಅವರು, 'ಮುಖಂಡರು ಮತ್ತು ಕಾರ್ಯಕರ್ತರು ಆತಂಕಕ್ಕೆ ಒಳಗಾಗುವಂಥದ್ದು ಏನೂ ಆಗಿಲ್ಲ' ಎಂದು ಹೇಳಿದರು.
ಟಿಡಿಪಿಯ ರಾಜ್ಯಸಭೆ ಸದಸ್ಯರಾದ ವೈಎಸ್ ಚೌದರಿ, ಸಿಎಂ ರಮೇಶ್ ಮತ್ತು ಟಿಜಿ ವೆಂಕಟೇಶ್, ರಾಜ್ಯಸಭಾ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿದ ಬಳಿಕ ಬಿಜೆಪಿ ಕಾರ್ಯಾಧ್ಯಕ್ಷ ಜೆಪಿ ನಡ್ಡಾ, ರಾಜ್ಯಸಭೆಯ ಬಿಜೆಪಿ ನಾಯಕ ತವಾರ್ ಚಂದ್ ಗೆಹ್ಲೋಟ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು. ಮತ್ತೊಬ್ಬ ಟಿಡಿಪಿ ಸಂಸದ ಜಿ. ಮೋಹನ್ ರಾವ್ ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿರುವುದರಿಂದ ಗುರುವಾರ ಬಿಜೆಪಿ ಸೇರ್ಪಡೆಯಾಗಲಿಲ್ಲ.
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಬುಧವಾರ ಯುರೋಪ್ ಪ್ರವಾಸಕ್ಕೆ ತೆರಳಿದ್ದಾರೆ. ಪತ್ನಿ ಭುವನೇಶ್ವರಿ, ಮಗ ನಾರಾ ಲೋಕೇಶ್, ಸೊಸೆ ಬ್ರಹ್ಮಣಿ ಹಾಗೂ ಮೊಮ್ಮಗ ದೇವಾಂಶ್ ಜತೆ ಅವರು ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಜೂನ್ 24ರಂದು ಅವರು ಆಂಧ್ರಪ್ರದೇಶಕ್ಕೆ ಮರಳಲಿದ್ದಾರೆ.