ಸದನ ಕೋಲಾಹಲ: ಚಂದ್ರಬಾಬು ನಾಯ್ಡು, ಇತರೆ 12 ಶಾಸಕರ ಅಮಾನತು
ವಿಜಯವಾಡ, ನವೆಂಬರ್ 30: ಆಂಧ್ರಪ್ರದೇಶ ವಿಧಾನಸಭೆ ಚಳಿಗಾಲ ಅಧಿವೇಶನದ ಮೊದಲ ದಿನವೇ ಸದಸನದಲ್ಲಿ ಕೋಲಾಹಲ ಸೃಷ್ಟಿಸಿದ ಕಾರಣಕ್ಕೆ ಪ್ರತಿಪಕ್ಷ ನಾಯಕ ಚಂದ್ರಬಾಬು ನಾಯ್ಡು ಹಾಗೂ 12 ಶಾಸಕರನ್ನು ಅಮಾನತುಗೊಳಿಸಲಾಗಿದೆ.
ಪ್ರತಿಭಟನೆ ಕೈಬಿಟ್ಟು ವಾಪಸ್ ಹೋಗಿ ಕುಳಿತುಕೊಳ್ಳಿ ಎಂದು ಸ್ಪೀಕರ್ ಪದೇಪದೆ ಮನವಿ ಮಾಡಿದರೂ ಒಪ್ಪದ ಚಂದ್ರಬಾಬು ನಾಯ್ಡು ಹಾಗೂ ಇತರೆ 12 ಶಾಸಕರನ್ನು ಅಮಾನತುಗೊಳಿಸಲಾಗಿದೆ.
ಆಂಧ್ರ ಸಿಎಂ ಜಗನ್ ದ್ವೇಷದ ನಡೆಗೆ ಚಂದ್ರಬಾಬು ನಾಯ್ಡು ಹೈರಾಣ
ಟಿಡಿಪಿ ಸದಸ್ಯೆ ನಿಮ್ಮಲಾ ರಮಾನೈದು ಅವರು ನಿವಾರ್ ಚಂಡಮಾರುತದಿಂದ ಉಂಟಾದ ಹಾನಿ ಮತ್ತು ಪರಿಹಾರ ವಿಷಯ ಪ್ರಸ್ತಾಪಿಸಿದರು.
ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು, ನಷ್ಟದ ಕುರಿತು ಡಿಸೆಂಬರ್ 15 ರೊಳಗೆ ವರದಿ ನೀಡುವಂತೆ ಸೂಚಿಸಲಾಗಿದೆ. ವರದಿ ಬಂದ ನಂತರ ಸಬ್ಸಿಡಿ ರೂಪದಲ್ಲಿ ಡಿಸೆಂಬರ್ 31 ರೊಳಗೆ ಪರಿಹಾರವನ್ನು ಪಾವತಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಪ್ರತಿಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರಿಗೆ ಮಾತನಾಡಲು ಮೈಕ್ ನೀಡುವಂತೆ ಸ್ಪೀಕರ್ ಗೆ ಒತ್ತಾಯಿಸಲಾಯಿತು. ಆದರೆ ಅವರ ಪಕ್ಷದ ಸದಸ್ಯ ರಮಾನೈದು ಮಾತನಾಡುತ್ತಿರುವುದರಿಂದ ಇದನ್ನು ನಿರಾಕರಿಸಲಾಯಿತು. ಇದರಿಂದಾಗಿ ಟಿಡಿಪಿ ಸದಸ್ಯರು ಚಂದ್ರಬಾಬು ನಾಯ್ಡು ಅವರಿಗೆ ಮಾತನಾಡಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು.
ಅಲ್ಲದೆ ಇದರಿಂದ ಕೋಪಗೊಂಡ ಚಂದ್ರಬಾಬು ನಾಯ್ಡು ಅವರು ಸ್ಪೀಕರ್ ಕುರ್ಚಿಯ ಮುಂದೆ ನೆಲದ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು.
ಚಂದ್ರಬಾಬು ನಾಯ್ಡು ಅವರ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಿಎಂ ಜಗನ್ ಮೋಹನ್ ರೆಡ್ಡಿ, ನಾಯ್ಡು ಅವರು ತಮ್ಮ ಪಕ್ಷದ ಸದಸ್ಯರೊಬ್ಬರು ಮಾತನಾಡುತ್ತಿರುವಾಗ ಮಧ್ಯ ಪ್ರವೇಶಿಸಿ ಅಡ್ಡಿಪಡಿಸಲು ಯತ್ನಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಬಳಿಕ ಚಂದ್ರಬಾಬು ನಾಯ್ಡು ಹಾಗೂ 12 ಮಂದಿ ಶಾಸಕರನ್ನು ಅಮಾನತುಗೊಳಿಸಲಾಯಿತು.