ಆಂಧ್ರಪ್ರದೇಶಕ್ಕೆ ಒಂದಲ್ಲ ಮೂರು ರಾಜಧಾನಿ: ಬಿಜೆಪಿ ನಾಯಕರ ಮೌನ
ಅಮರಾವತಿ, ಡಿಸೆಂಬರ್.27: ಒಂದು ರಾಜ್ಯಕ್ಕೆ ಒಂದು ರಾಜಧಾನಿ ಇರುವುದು ಸರ್ವೇ ಸಾಮಾನ್ಯ. ಆದರೆ, ಆಂಧ್ರಪ್ರದೇಶದಲ್ಲಿ ಮೂರು ರಾಜಧಾನಿಗಳನ್ನು ಸ್ಥಾಪಿಸಲು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸರ್ಕಾರ ಮುಂದಾಗಿದೆ. ವೈಎಸ್ಆರ್ ಕಾಂಗ್ರೆಸ್ ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಸದ್ಯದ ಮಟ್ಟಿಗೆ ಅಮರಾವತಿ ಆಂಧ್ರಪ್ರದೇಶದ ರಾಜಧಾನಿಯಾಗಿದೆ. ಇದರ ಜೊತೆಗೆ ಮತ್ತೆರೆಡು ರಾಜಧಾನಿಗಳನ್ನು ನಿರ್ಮಿಸಲು ಸರ್ಕಾರ ಚಿಂತನೆ ನಡೆಸಿದ್ದು, ಈ ನಿಲುವಿನ ವಿರುದ್ಧ ಟಿಡಿಪಿ, ಬಿಜೆಪಿ ಸೇರಿದಂತೆ ಎಲ್ಲ ವಿರೋಧ ಪಕ್ಷದ ನಾಯಕರು ಕಿಡಿ ಕಾರುತ್ತಿದ್ದಾರೆ.
ಪ್ರಸಾದ ತಿಂದವನ ಕಥೆ ಅಷ್ಟೇ; ಎರಡು ತಿಂಗಳಿಗೊಂದು ಕೊಲೆ ಕಡ್ಡಾಯ!
ಸರ್ಕಾರದ ತೀರ್ಮಾನವನ್ನು ವಿರೋಧಿಸಿದ ಟಿಡಿಪಿ ಸಂಸದ ಕೇಸಿನೇನಿ ಶ್ರೀನಿವಾಸ್ ಹಾಗೂ ಶಾಸಕ ಬುದ್ಧ ವೆಂಕಣ್ಣರನ್ನು ಗೃಹ ಬಂಧನದಲ್ಲಿ ಇರಿಸಲಾಗಿತ್ತು. ವಿಜಯವಾಡದ ನಿವಾಸದಲ್ಲಿ ನಾಯಕರು ಇರುವಂತೆ ಪೊಲೀಸರಿಗೆ ಸರ್ಕಾರವೇ ಸೂಚಿಸಿದ್ದು, ಸಾಕಷ್ಟು ಸುದ್ದಿಯಾಗಿತ್ತು.
ಮೌನ ದೀಕ್ಷಾ ಪ್ರತಿಭಟನೆ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ
ಆಂಧ್ರಪ್ರದೇಶದಲ್ಲಿ ಮೂರು ರಾಜಧಾನಿಗಳನ್ನು ನಿರ್ಮಿಸಲು ಹೊರಟ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಕನ್ನ ಲಕ್ಷ್ಮಿ ನಾರಾಯಣ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಉದ್ದಂಡರಾಯನಿ ಪೇಲಂ ಗ್ರಾಮದಲ್ಲಿ ಬೆಳಗ್ಗೆ 9 ಗಂಟೆಯಿಂದ ಒಂದು ಗಂಟೆಗಳ ಕಾಲ ಮೌನ ದೀಕ್ಷಾ ಪ್ರತಿಭಟನೆ ನಡೆಸಿದರು.
ಮುಖ್ಯಮಂತ್ರಿ ನೇತೃತ್ವದ ಸಭೆಯಲ್ಲಿ ಅಂತಿಮ ನಿರ್ಧಾರ
ರಾಜ್ಯ ಸರ್ಕಾರದ ಸಂಪುಟ ಸಭೆಯಲ್ಲಿ ಮೂರು ರಾಜಧಾನಿಗಳ ನಿರ್ಮಾಣಕ್ಕೆ ಹಸಿರು ನಿಶಾನೆ ಸಿಕ್ಕಿದೆ. ಶುಕ್ರವಾರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದಲ್ಲಿ ಮಹತ್ವದ ಸಂಪುಟ ಸಭೆ ನಡೆಯಲಿದೆ. ಈ ವೇಳೆ ಮೂರು ರಾಜಧಾನಿಗಳನ್ನು ಯಾವ ರೀತಿ ರೂಪಿಸಬೇಕು ಎಂಬುದರ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ.
ಆಂಧ್ರಪ್ರದೇಶದಲ್ಲಿ ವಿಭಾಗಕ್ಕೊಂದು ರಾಜಧಾನಿ
ಇನ್ನು, ಯಾವ ಆಧಾರದ ಮೇಲೆ ರಾಜಧಾನಿಗಳನ್ನು ನಿರ್ಮಾಣ ಮಾಡಬೇಕು ಎಂಬುದರ ಬಗ್ಗೆ ತಜ್ಞರ ಸಮಿತಿಯು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರಿಗೆ ಈಗಾಗಲೇ ಸಲಹೆ ಸೂಚನೆಗಳನ್ನು ನೀಡಿದೆ ಎಂದು ಹೇಳಲಾಗುತ್ತಿದೆ. ಸರ್ಕಾರದ ಸಚಿವಾಲಯದ ಕಾರ್ಯಗಳನ್ನು ನಿರ್ವಹಿಸಲು ಒಂದು ರಾಜಧಾನಿ, ಶಾಸಸಕರ ಕಾರ್ಯ ನಿರ್ವಹಣೆಗೆ ಅನುಕೂಲವಾಗುವಂತೆ ಮತ್ತೊಂದು ರಾಜಧಾನಿ ಹಾಗೂ ಹೈಕೋರ್ಟ್ ನ್ನು ಮತ್ತೊಂದು ರಾಜಧಾನಿಯಲ್ಲಿ ವಿಂಗಡಿಸಲು ತಜ್ಞರ ಸಮಿತಿ ಸಲಹೆ ನೀಡಿರುವ ಬಗ್ಗೆ ತಿಳಿದು ಬಂದಿದೆ.
ಇಂದು ಆಂಧ್ರಪ್ರದೇಶ ರಾಜಧಾನಿಯಲ್ಲಿ ನಿಷೇಧಾಜ್ಞೆ
ರಾಜಕೀಯ ನಾಯಕರಷ್ಟೇ ಅಲ್ಲ. ಮೂರು ರಾಜಧಾನಿಗಳ ಪ್ರಸ್ತಾವನೆಗೆ ಜನರು ಕೂಡಾ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಯುತ್ತಿದ್ದು, ವಿಶಾಖಪಟ್ಟಣಂನ್ನು ರಾಜಧಾನಿ ಮಾಡಲು ಹೊರಟ ಸರ್ಕಾರಕ್ಕೆ ಧಿಕ್ಕಾರ ಕೂಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸಿಆರ್ ಪಿಸಿ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಸಿಎಂ ನಿರ್ಧಾರಕ್ಕೆ ಚಂದ್ರಬಾಬು ನಾಯ್ಡು ವಿರೋಧ
ಇನ್ನು, ಮೂರು ರಾಜಧಾನಿಗಳ ನಿರ್ಮಾಣ ಹಾಗೂ ಟಿಡಿಪಿ ನಾಯಕರನ್ನು ಗೃಹ ಬಂಧನದಲ್ಲಿ ಇರಿಸಿದ ಸರ್ಕಾರದ ವಿರುದ್ಧ ಟಿಡಿಪಿ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ದು ಕೆಂಡಾಮಂಡಲರಾಗಿದ್ದರು. ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸರ್ಕಾರವು ನಿರಂಕುಶ ಪ್ರಭುತ್ವ ಎಂದುಕೊಂಡಿದ್ದಾರೆ. ಸರ್ಕಾರದ ಏಕಪಕ್ಷೀಯ ನಿರ್ಧಾರವು ಪ್ರಜಾಪ್ರಭುತ್ವದ ವಿರೋಧಿಯಾಗಿದೆ ಎಂದು ಚಂದ್ರಬಾಬು ನಾಯ್ಡು ಕಿಡಿ ಕಾರಿದ್ದರು.