ಆಂಧ್ರಪ್ರದೇಶದಲ್ಲಿ ತೃತೀಯಶಕ್ತಿಯಾಗಿ ಬಿಜೆಪಿ-ಜನಸೇನಾ ಪಕ್ಷ
ಅಮರಾವತಿ, ಜನವರಿ 16: ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಹಾಗೂ ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆಪಿ ನಡ್ಡಾ ಭೇಟಿ ನಂತರ ಹುಟ್ಟಿಕೊಂಡಿದ್ದ ನಿರೀಕ್ಷೆಯಂತೆ ಬಿಜೆಪಿ-ಜನಸೇನಾ ಪಕ್ಷ ಮೈತ್ರಿ ಮೂಡಿದೆ. ಈ ಕುರಿತಂತೆ ಗುರುವಾರ(ಜನವರಿ 16) ದಂದು ಅಧಿಕೃತವಾಗಿ ಘೋಷಿಸಲಾಗಿದೆ.
ಆಂಧ್ರ ರಾಜಕೀಯದಲ್ಲಿಆಡಳಿತಾರೂಢ ವೈಎಸ್ಸಾರ್ ಕಾಂಗ್ರೆಸ್ ಪಕ್ಷ, ತೆಲುಗು ದೇಶಂ ಪಕ್ಷದ ನಂತರ ತೃತೀಯ ಶಕ್ತಿಯಾಗಿ ಬಿಜೆಪಿ ಹಾಗೂ ಜನಸೇನಾ ಪಕ್ಷ ಮೈತ್ರಿ ಕಾರ್ಯನಿರ್ವಹಿಸಲಿದೆ.
ತೆಲುಗು ಚಿತ್ರರಂಗದ ಪವರ್ ಸ್ಟಾರ್, ಜನಸೇನಾ ಪಕ್ಷದ ಸ್ಥಾಪಕ ಪವನ್ ಕಲ್ಯಾಣ್ ಅವರ ಚುನಾವಣಾ ರಾಜಕೀಯದ ಆರಂಭದ ಹೆಜ್ಜೆಯಲ್ಲೇ ಮುಗ್ಗರಿಸಿ, ನಂತರ ತಮ್ಮ ಹಿರಿಯಣ್ಣ ಚಿರಂಜೀವಿ ಅವರಂತೆ ರಾಷ್ಟ್ರೀಯ ಪಕ್ಷದ ಜೊತೆ ಮೈತ್ರಿ, ವಿಲೀನದ ಆಫರ್ ಎದುರು ನೋಡುತ್ತಿದ್ದರು. ಇದಕ್ಕೆ ಪೂರಕವಾಗಿ ಬಿಜೆಪಿ ಕೂಡಾ ಆಂಧ್ರದಲ್ಲಿ ತನ್ನ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿದ್ದು, ಹೀಗಾಗಿ, ಉಭಯ ಪಕ್ಷಗಳ ನಡುವೆ ಮೈತ್ರಿಗೆ ಕಾರಣವಾಗಿದೆ.
ಪವನ್ ಕಲ್ಯಾಣ್ ಗೆ ಚಿರು ಕುಟುಂಬ ಬೆಂಬಲವಿಲ್ಲ
ಆಂಧ್ರಪ್ರದೇಶ ಬಿಜೆಪಿ ಅಧ್ಯಕ್ಷ ಕನ್ನಾ ಲಕ್ಷ್ಮಿನಾರಾಯಣ ಹಾಗೂ ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಅವರು ವಿಜಯವಾಡದಲ್ಲಿ ನಡೆಸಿದ ಜಂಟಿ ಸುದ್ದಿಗೋಷ್ಠಿ ಬಿಜೆಪಿ-ಜನಸೇನಾ ಪಕ್ಷದ ಮೈತ್ರಿ ಘೋಷಿಸಿದರು. ಜಾತಿ, ಕೌಟುಂಬಿಕ, ಭ್ರಷ್ಟಾಚಾರದಿಂದ ತುಂಬಿದ ಆಡಳಿತವನ್ನು ತೊಡೆದು ಹಾಕಲು ಈ ಮೈತ್ರಿ ಸಾಧಿಸಲಾಗಿದೆ. 2024ರಲ್ಲಿ ನಮ್ಮ ಮೈತ್ರಿಕೂಟ ಅಧಿಕಾರಕ್ಕೆ ತರಲು ಯತ್ನಿಸಲಾಗುವುದು ಎಂದು ಪವನ್ ಕಲ್ಯಾಣ್ ಹೇಳಿದರು. ಇದಕ್ಕೂ ಮುನ್ನ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಬಿಜೆಪಿ ಜೊತೆ ಜನಸೇನಾ ಪಕ್ಷ ಮೈತ್ರಿಯೊಂದಿಗೆ ಕಣಕ್ಕಿಳಿಯಲಿದೆ.
ವಿಧಾನಸಭೆ ಚುನಾವಣೆ ಸೋಲು ಪಾಠ ಕಲಿಸಿದೆ
175 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಪವನ್ ಕಲ್ಯಾಣ್ ಸಾರಥ್ಯದ ಜನಾಸೇನಾ ಪಕ್ಷದ ಅಭ್ಯರ್ಥಿಗಳು, 140 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರು. ಉಳಿದ 35 ಕ್ಷೇತ್ರಗಳನ್ನ ತಮ್ಮ ಮೈತ್ರಿ ಪಕ್ಷ ಬಿಎಸ್ ಪಿ ಪಕ್ಷಕ್ಕೆ ಬಿಟ್ಟುಕೊಟ್ಟಿದ್ದರು. ದುರಂತ ಅಂದ್ರೆ ಕೇವಲ ಒಂದು ಸೀಟು ಮಾತ್ರ ಜನಾಸೇನಾ ಪಕ್ಷದ ಪಾಲಾಗಿದೆ. ಇದು ಪವನ್ ಕಲ್ಯಾಣ್ ಗೆ ಭಾರಿ ಮುಖಭಂಗ ಉಂಟಾಗಿತ್ತು. ಭೀಮಾವರಂ ಮತ್ತು ಗಾಜುವಾಕ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದ ಪವರ್ ಸ್ಟಾರ್ ಗೆ ಎರಡೂ ಕ್ಷೇತ್ರದಲ್ಲೂ ಗೆಲುವು ಸಿಗಲಿಲ್ಲ. ಈಗ ಬಿಜೆಪಿ ಜೊತೆ ಸಖ್ಯ ಬೆಳೆಸಿದರೆ, ಬಿಎಸ್ಪಿ ಸೇರಿದಂತೆ ಇತರೆ ಮಿತ್ರಪಕ್ಷಗಳಿಂದ ದೂರಾಗಬೇಕಾಗುತ್ತದೆ.
ಚಿರಂಜೀವಿ ಹಾದಿಯಲ್ಲೇ ತಮ್ಮಡು ಪವನ್
2009ರಲ್ಲಿ ಆಂಧ್ರಪ್ರದೇಶದ (ತೆಲಂಗಾಣ ಆಗಿರಲಿಲ್ಲ) ಒಟ್ಟು 295 ಕ್ಷೇತ್ರಗಳಿಗೆ ವಿಧಾನಸಭೆ ಚುನಾವಣೆ ನಡೆದಿತ್ತು. ಈ ಎಲೆಕ್ಷನ್ ನಲ್ಲಿ ಮೆಗಾಸ್ಟಾರ್ ಚಿರಂಜೀವಿ ಸ್ಥಾಪಿಸಿದ್ದ ಪ್ರಜಾರಾಜ್ಯಂ ಪಕ್ಷ ಸ್ಪರ್ಧೆ ಮಾಡಿತ್ತು. ಭಾರಿ ಭರವಸೆಗಳೊಂದಿಗೆ ಅಖಾಡಕ್ಕೆ ಧುಮುಕಿದ್ದ ಚಿರಂಜೀವಿ ಬಹುಮತ ಪಡೆದು ಮುಖ್ಯಮಂತ್ರಿ ಆಗ್ತಾರೆ ಎಂದೇ ಹೇಳಲಾಗುತ್ತಿತ್ತು. ಆದ್ರೆ, ಅಂತಿಮವಾಗಿ 18 ಸೀಟು ಗೆಲ್ಲುವಲ್ಲಿ ಮಾತ್ರ ಚಿರಂಜೀವಿ ಯಶಸ್ವಿಯಾಗಿದ್ದರು.
ಚಿರಂಜೀವಿ 30 ತಿಂಗಳು ನಂತರ ಕಾಂಗ್ರೆಸ್ ಪಕ್ಷದ ಜೊತೆ ತಮ್ಮ ಪಕ್ಷವನ್ನು ವಿಲೀನ ಮಾಡಿಕೊಂಡಿದ್ದರು. ನಂತರ ಕಾಂಗ್ರೆಸ್ ಬೆಂಬಲದೊಂದಿಗೆ ರಾಜ್ಯ ಸಭೆ ಸದಸ್ಯನಾಗಿ ಆಯ್ಕೆಯಾಗಿ ಕೇಂದ್ರ ಸಚಿವರು ಆಗಿದ್ದರು.
ಅಧಿಕಾರ ಇದ್ದರಷ್ಟೇ ಎಲ್ಲವೂ ಸಾಧ್ಯ
ಅಧಿಕಾರ ಇದ್ದರಷ್ಟೇ ಎಲ್ಲವೂ ಸಾಧ್ಯ ಎಂಬುದು ಪವನ್ ಕಲ್ಯಾಣ್ ಗೆ ತಡವಾಗಿ ಅರ್ಥವಾಗಿದೆ, ರಾಜಕೀಯ ಎಂದರೆ ಸಮಸ್ಯೆಗಳ ಬಗ್ಗೆ ಮಾತನಾಡುವುದಲ್ಲ, ಸಮಸ್ಯೆ ಬಗೆಹರಿಸಲು ಮುಂದಾಗುವುದು ಎಂದು ಪಕ್ಷವನ್ನು ಇತ್ತೀಚೆಗೆ ತೊರೆದ ಹಿರಿಯ ರಾಜಕೀಯರೊಬ್ಬರು ಹೇಳಿದ್ದಾರೆ. ಬಿಜೆಪಿ ಕೂಡಾ 13 ಜಿಲ್ಲೆಗಳಲ್ಲಿ ಪವನ್ ಗೆ ಇರುವ ಜನಪ್ರಿಯತೆಯನ್ನು ಗಮನಿಸಿ, ಜನಸೇನಾ ಪಕ್ಷವನ್ನು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದೆ. ಪವನ್ ಗೆ ಚಿರಂಜೀವಿಯಂತೆ ರಾಜ್ಯಸಭಾ ಸದಸ್ಯ ಸ್ಥಾನ ದೊರಕಿ, ಕೇಂದ್ರದಲ್ಲಿ ಸಚಿವರಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಜಾತಿ ರಾಜಕೀಯದ ತಂತ್ರಗಾರಿಕೆ
ಜಾತಿಗೊಬ್ಬರಂತೆ ಐವರು ಡಿಸಿಎಂಗಳನ್ನುನೇಮಿಸುವ ಮೂಲಕ ಆಂಧ್ರ ಸಿಎಂ ಜಗನ್ ಜಾತಿ ರಾಜಕೀಯ ತಂತ್ರಗಾರಿಕೆ, ಸಮಾನತೆಯ ನಿಪುಣತೆ ಮೆರೆದಿದ್ದಾರೆ. ಇದನ್ನು ಗಮನಿಸಿರುವ ಬಿಜೆಪಿ , ಒಬಿಸಿ, ಕ್ಷತ್ರಿಯ, ರೆಡ್ಡಿ ಜನಾಂಗ ಎಲ್ಲವನ್ನು ಮುನ್ನಡೆಸಬಲ್ಲ ಕಾಪು ನಾಯಕನಾಗಿ ಪವನ್ ರನ್ನು ಬಿಜೆಪಿ ಕಾಣುತ್ತಿದೆ. ಟಿಡಿಪಿ ದಿನದಿಂದ ತನ್ನ ಜನಪ್ರಿಯತೆ ಕಳೆದುಕೊಳ್ಳುತ್ತಿದೆ. ಹೋರಾಟದ ಮೂಲಕ ಅಧಿಕಾರಕ್ಕೇರಿದ ಜಗನ್ ಇತ್ತೀಚೆಗೆ ತೆಗೆದುಕೊಳ್ಳುತ್ತಿರುವ ಕೆಲ ನಿರ್ಣಯಗಳು ಜನಪ್ರಿಯತೆಯನ್ನು ಕುಗ್ಗಿಸತೊಡಗಿದೆ. ಹೀಗಾಗಿ, ಪವನ್ ಸೆಳೆಯಲು ಇದೇ ಸಕಾಲ ಎಂದು ಬಿಜೆಪಿ ನಿರ್ಧರಿಸಿದೆ.
ಚಿರು ಕುಟುಂಬ ಬೆಂಬಲ ಸಿಗುವುದೇ?
2014ರಲ್ಲಿ ಪವನ್ ಕಲ್ಯಾಣ್ ಅವರ ಮತ್ತೊಬ್ಬ ಅಣ್ಣ ನಾಗಬಾಬು ಅವರು ಪತ್ರಿಕಾ ಹೇಳಿಕೆ ನೀಡಿ 'ನಾನು, ರಾಮ್ ಚರಣ್, ಅಲ್ಲು ಅರ್ಜುನ್ ಹಾಗೂ ಅಲ್ಲು ಅರವಿಂದ್ ಅವರು ಚಿರಂಜೀವಿ ಹಾಕಿಕೊಟ್ಟ ಮಾರ್ಗದಲ್ಲೇ ಸಾಗುತ್ತೇವೆ. ಪವನ್ ಯೋಜನೆಗಳು ಏನೇ ಇದ್ದರೂ ನಮ್ಮ ಕುಟುಂಬದ ಒಗ್ಗಟ್ಟಿಗೆ ಏನು ತೊಂದರೆ ಇಲ್ಲ. ಚಿರಂಜೀವಿ ಜತೆ ಎಲ್ಲರೂ ಇದ್ದೇವೆ. ನಾನಂತೂ ರಾಜಕೀಯಕ್ಕೆ ಸೇರುವುದಿಲ್ಲ ಎಂದಿದ್ದರು. ರಾಜಕೀಯ ವಿಷಯದಲ್ಲಿ ಪವನ್ ಕಲ್ಯಾಣ್ ನಡೆ ಬಗ್ಗೆ ಚಿರು ಕುಟುಂಬದಲ್ಲಿ ಅಸಮಾಧಾನವಿದೆ. ಹಾಗಾಗಿ, ಬಿಜೆಪಿ ಜತೆಗಿನ ಸಖ್ಯವನ್ನು ಹೊಂದಿರುವ ಜನಸೇನಾ ಜೊತೆ ಚಿರು ಕುಟುಂಬದ ಪ್ರಮುಖರು ಗುರುತಿಸಿಕೊಳ್ಳುವುದು ಕಷ್ಟ.