ನುಡಿದಂತೆ ನಡೆದ ಸಿಎಂ; ಆಟೋ, ಟ್ಯಾಕ್ಸಿ ಚಾಲಕರಿಗೆ ಸಿಕ್ತು 10 ಸಾವಿರ ರೂ.
ಅಮರಾವತಿ, ಜೂನ್ 05 : ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಕೊಟ್ಟ ಮಾತಿನಂತೆ ನಡೆದಿದ್ದಾರೆ. ಆಟೋ ಮತ್ತು ಟ್ಯಾಕ್ಸಿ ಚಾಲಕರ ಖಾತೆ 10 ಸಾವಿರ ರೂ. ಗಳನ್ನು ಜಮೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಲಾಕ್ ಡೌನ್ ಹಿನ್ನಲೆಯಲ್ಲಿ 4 ತಿಂಗಳು ಮೊದಲೇ ಹಣವನ್ನು ನೀಡಿ ಸಹಾಯಕ್ಕೆ ನಿಂತಿದ್ದಾರೆ.
Recommended Video
'ವೈಎಸ್ಆರ್ ವಾಹನ ಮಿತ್ರ' ಯೋಜನೆಯಡಿ ರಾಜ್ಯದ 2.62 ಲಕ್ಷ ಆಟೋ, ಟ್ಯಾಕ್ಸಿ ಚಾಲಕರಿಗೆ 10 ಸಾವಿರ ರೂ. ಸಿಕ್ಕಿದೆ. ಲಾಕ್ ಡೌನ್ ಕಾರಣ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಚಾಲಕರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾವಣೆಯಾಗುತ್ತಿದೆ.
40 ಸಾವಿರ ಆಟೋ, ಟ್ಯಾಕ್ಸಿ ಚಾಲಕರಿಗೆ ಮೊದಲ ಹಂತದಲ್ಲಿ ಪರಿಹಾರ
ಜಗನ್ ಮೋಹನ್ ರೆಡ್ಡಿ ಈ ವರ್ಷ 'ವೈಎಸ್ಆರ್ ವಾಹನ ಮಿತ್ರ' ಯೋಜನೆಗಾಗಿ 262.49 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. 2, 62, 495 ಚಾಲಕರು ಈ ಯೋಜನೆಯ ಲಾಭಪಡೆದುಕೊಂಡಿದ್ದಾರೆ. 37,754 ಹೊಸ ಚಾಲಕರು ಯೋಜನೆಗೆ ಈ ವರ್ಷ ಸೇರ್ಪಡೆಗೊಂಡಿದ್ದಾರೆ.
ಕರ್ನಾಟಕದಲ್ಲಿ ಕರ್ಫ್ಯೂ ಸಮಯದಲ್ಲಿ ಬಸ್, ಆಟೋ,ಕ್ಯಾಬ್ ಓಡಾಟಕ್ಕೆ ಅನುಮತಿ
2019ರ ಅಕ್ಟೋಬರ್ 4ರಂದು 'ವೈಎಸ್ಆರ್ ವಾಹನ ಮಿತ್ರ' ಯೋಜನೆಗೆ ರಾಜ್ಯ ಸರ್ಕಾರ ಚಾಲನೆ ನೀಡಿತ್ತು. ವಾರ್ಷಿಕ 10 ಸಾವಿರ ರೂ.ಗಳನ್ನು ಆಟೋ, ಟ್ಯಾಕ್ಸಿ ಚಾಲಕರಿಗೆ ನೀಡುವ ಯೋಜನೆ ಇದಾಗಿತ್ತು. ವಿಮೆ, ನೋಂದಣಿ ಸೇರಿದಂತೆ ಇತರ ಖರ್ಚುಗಳಿಗೆ ಚಾಲಕರು ಇದನ್ನು ಬಳಸಿಕೊಳ್ಳುವ ಉದ್ದೇಶ ಯೋಜನೆಯದ್ದು.
ಅನಿಲ ಸೋರಿಕೆಯಿಂದ ಮೃತಪಟ್ಟವರಿಗೆ 30 ಕೋಟಿ ಬಿಡುಗಡೆ ಮಾಡಿದ ಸಿಎಂ ಜಗನ್
ಮಾತುಕೊಟ್ಟಿದ್ದ ಜಗನ್
2018ರಲ್ಲಿ ಪಾದಯಾತ್ರೆ ಮಾಡುವಾಗ ಆಟೋ ಮತ್ತು ಟ್ಯಾಕ್ಸಿ ಚಾಲಕರು ಜಗನ್ ಮೋಹನ್ ರೆಡ್ಡಿಗೆ ತಮ್ಮ ಸಂಕಷ್ಟ ಹೇಳಿಕೊಂಡಿದ್ದರು. ಫಿಟ್ನೆಸ್ ಪ್ರಮಾಣ ಪತ್ರ, ವಿಮೆ ಎಂದು ಪ್ರತಿ ವರ್ಷ ಸುಮಾರು 10 ಸಾವಿರ ರೂ. ಖರ್ಚು ಬರುತ್ತದೆ ಎಂದು ಹೇಳಿದ್ದರು. ಇದನ್ನು ಆಲಿಸಿದ್ದ ಜಗನ್ ಅಧಿಕಾರಕ್ಕೆ ಬಂದರೆ ಸಹಾಯ ಮಾಡುವುದಾಗಿ ಭರವಸೆ ಕೊಟ್ಟಿದ್ದರು. ಆಂಧ್ರ ಪ್ರದೇಶದಲ್ಲಿ ಚುನಾವಣೆ ನಡೆದು ಪೂರ್ಣ ಬಹುಮತ ಪಡೆದು ಜಗನ್ ಅಧಿಕಾರಕ್ಕೂ ಬಂದರು.
'ವೈಎಸ್ಆರ್ ವಾಹನ ಮಿತ್ರ' ಯೋಜನೆ
ಸರ್ಕಾರ ರಚನೆ ಮಾಡುತ್ತಿದ್ದಂತೆ ಜಗನ್ ಮೋಹನ್ ರೆಡ್ಡಿ 'ವೈಎಸ್ಆರ್ ವಾಹನ ಮಿತ್ರ' ಯೋಜನೆ ಜಾರಿಗೆ ತಂದರು. ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ವಾರ್ಷಿಕ 10 ಸಾವಿರ ರೂ. ಸಹಾಯಧನ ನೀಡುವ ಯೋಜನೆ ಇದಾಗಿದೆ. ಮೊದಲ ವರ್ಷ ಯೋಜನೆಗಾಗಿ ಸರ್ಕಾರ 236 ಕೋಟಿ ರೂ. ವೆಚ್ಚ ಮಾಡಿತು. 2,36,334 ಫಲಾನುಭವಿಗಳು 10 ಸಾವಿರ ರೂ.ಗಳನ್ನು ಪಡೆದರು.
262.49 ಕೋಟಿ ಯೋಜನೆ
2020ರಲ್ಲಿ 'ವೈಎಸ್ಆರ್ ವಾಹನ ಮಿತ್ರ' ಯೋಜನೆಗಾಗಿ ಸರ್ಕಾರ 262.49 ಕೋಟಿ ರೂ. ಬಿಡುಗಡೆ ಮಾಡಿದೆ. ಈ ವರ್ಷ 2,62,495 ಫಲಾನುಭವಿಗಳು ಇದ್ದಾರೆ. ಹೊಸದಾಗಿ 37,754 ಜನರು ಯೋಜನೆಗೆ ಸೇರಿದ್ದಾರೆ. 11,595 ಜನರ ಬ್ಯಾಂಕ್ ಖಾತೆಗೆ ಈಗಾಗಲೇ ಹಣ ಸಂದಾಯವಾಗಿದೆ.
ಚಾಲಕರಿಗೆ ಚಿಂತೆ ಇಲ್ಲ
ಒಂದು ವೇಳೆ ಫಲಾನುಭವಿಗಳಿಗೆ ಹಣ ಬರದಿದ್ದರೆ ಚಿಂತಿಸುವ ಅಗತ್ಯವಿಲ್ಲ ಎಂದು ಅಭಯ ನೀಡಲಾಗಿದೆ. ಅವರು ಹಣ ಪಡೆಯಲು ಅರ್ಹರಾಗಿದ್ದರೆ ಸ್ಪಂದನ ವೆಬ್ ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಜುಲೈ 4ರಂದು ಅವರಿಗೆ ಹಣ ನೀಡಲಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.