ಮೇ 21ರಿಂದ APSRTC ಬಸ್ ಸಂಚಾರ, ಕರ್ನಾಟಕಕ್ಕೂ ಸಂಪರ್ಕ
ವಿಜಯವಾಡ, ಮೇ 20: ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (APSRTC) ಯು ಮೇ 21 ರಿಂದ ರಾಜ್ಯದೆಲ್ಲೆಡೆ ಬಸ್ ಸಂಚಾರ ಆರಂಭಿಸಲಿದೆ. ಜೊತೆಗೆ ಅಂತಾರಾಜ್ಯ ಬಸ್ ವ್ಯವಸ್ಥೆ ಇರಲಿದೆ ಎಂದು ಎಪಿಎಸ್ ಆರ್ ಟಿಸಿ ಉಪಾಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಮಡಿರೆಡ್ಡಿ ಪ್ರತಾಪ್ ಬುಧವಾರದಂದು ಹೇಳಿದರು.
ಕೇಂದ್ರ ಸರ್ಕಾರವು ಲಾಕ್ಡೌನ್ 4.0 ಮಾರ್ಗ ಸೂಚಿಯಲ್ಲಿ ನೀಡುವಂತೆ ಅಂತಾರಾಜ್ಯ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಲಾಗುತ್ತದೆ, ಈ ಬಗ್ಗೆ ಈಗಾಗಲೇ ಅಕ್ಕ ಪಕ್ಕದ ರಾಜ್ಯಗಳಿಗೆ ಪತ್ರ ಬರೆಯಲಾಗಿದೆ. ಅನುಮತಿ ಸಿಕ್ಕ ರಾಜ್ಯಗಳಿಗೆ ಬಸ್ ಸಂಚರಿಸಲಿದೆ. ಕಂಟೈನ್ಮೆಂಟ್ ಜೋನ್ ಗಳಿಗೆ ಬಸ್ ಸಂಚಾರ ಇರುವುದಿಲ್ಲ ಎಂದರು.
ಈ 4 ರಾಜ್ಯದವರು ಕರ್ನಾಟಕಕ್ಕೆ ಎಂಟ್ರಿಯಾಗುವಂತಿಲ್ಲ!
ತೆಲಂಗಾಣ, ತಮಿಳುನಾಡು, ಕರ್ನಾಟಕಕ್ಕೆ ಆಂಧ್ರಪ್ರದೇಶದಿಂದ ಬಹಳಷ್ಟು ಮಂದಿ ಪ್ರಯಾಣಿಸುತ್ತಾರೆ. ಆ ರಾಜ್ಯಗಳಿಂದಲೂ ನಮ್ಮ ರಾಜ್ಯಕ್ಕೆ ಪ್ರಯಾಣಿಕರಿದ್ದಾರೆ. ಆ ರಾಜ್ಯಗಳಿಂದ ಅನುಮತಿಗಾಗಿ ಕಾಯಲಾಗುತ್ತಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯದಿಂದ ಈಗಾಗಲೆ ಅನುಮತಿ ನೀಡಲಾಗಿದೆ. ಕರ್ನಾಟಕದ ಸಿಎಂ ಯಡಿಯೂರಪ್ಪ ಅವರು ಮಹಾರಾಷ್ಟ್ರ, ತಮಿಳುನಾಡು, ಕೇರಳ ಹಾಗೂ ಗುಜರಾತ್ ರಾಜ್ಯಗಳ ಪ್ರಯಾಣಿಕರಿಗೆ ಮಾತ್ರ ಕರ್ನಾಟಕ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವುದಾಗಿ ಹೇಳಿದ್ದಾರೆ. ಹೀಗಾಗಿ, ಆಂಧ್ರ ಸಾರಿಗೆ ಸಂಸ್ಥೆ ಬಸ್ ಗಳು ಕರ್ನಾಟಕಕ್ಕೆ ಸಂಚರಿಸಬಹುದಾಗಿದೆ. ಇದರಿಂದ ಹೈದರಾಬಾದ್ ಕರ್ನಾಟಕ ಭಾಗದ ಸಾರ್ವಜನಿಕರಿಗೆ ಶುಭ ಸುದ್ದಿ ಸಿಕ್ಕಿದ್ದಂತಾಗಿದೆ.
ಅಂತಾರಾಜ್ಯ ಸಾರಿಗೆಗೆ ಅವಕಾಶ, ಅಪಾಯ ಕಟ್ಟಿಟ್ಟ ಬುತ್ತಿ
ವಿಜಯವಾಡ ಹಾಗೂ ವಿಶಾಖಪಟ್ಟಣಂನಲ್ಲಿ ಮೊದಲಿಗೆ ನಗರ ಸೇವೆ ಬಸ್ ಗಳು ಸಂಚರಿಸಲಿವೆ. ಮೆ 21ರಂದು 434 ಮಾರ್ಗಗಳಲ್ಲಿ 1683 ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಲಾಕ್ಡೌನ್ ನಿಂದಾಗಿ ಎಪಿಎಸ್ ಆರ್ ಟಿಸಿಗೆ ಸುಮಾರು 1200 ಕೋಟಿ ರು ನಷ್ಟವಾಗಿದೆ ಎಂದು ಪ್ರತಾಪ್ ಹೇಳಿದರು.
ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯವಾಗಿದೆ. ಒಂದು ವೇಳೆ ಮಾಸ್ಕ್ ಇಲ್ಲದೆ ಬಸ್ ನಿಲ್ದಾಣಕ್ಕೆ ಬಂದರೆ ಸಬ್ಸಿಡಿ ದರ 10 ರು ನಂತೆ ಮಾಸ್ಕ್ ಪಡೆಯಬಹುದು. ಸರಳ ಬಳಕೆಯ ಸ್ಯಾನಿಟೈಸರ್ ಇರಲಿದೆ. ಟಿಕೆಟ್ ಬುಕ್ಕಿಂಗ್ ಕೂಡಾ ಸುಲಭಗೊಳಿಸಲಿದೆ. ಎಸಿ ಬಸ್ ಗಳಲ್ಲಿ ಹೊದಿಕೆ ನೀಡುವುದಿಲ್ಲ ಎಂದು ಪ್ರತಾಪ್ ಹೇಳಿದರು.