ವರದಕ್ಷಿಣೆ ಕಿರುಕುಳಕ್ಕೆ ಸಾಫ್ಟ್ವೇರ್ ಇಂಜಿನಿಯರ್ ಪತ್ನಿ ಬಲಿ
ಅಮರಾವತಿ, ಸೆ. 13: ಬೆಂಗಳೂರಿನ ಸಾಫ್ಟ್ವೇರ್ ಇಂಜಿನಿಯರ್ ಪತ್ನಿ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜನಿಯರ್ ಆಗಿದ್ದ ಅನಿಲ್ ಎಂಬಾತ 4 ವರ್ಷಗಳ ಹಿಂದೆ ಮೌನಿಕಾ ಎಂಬುವವರನ್ನು ವರಿಸಿದ್ದ. ಅನಿಲ್ನದ್ದು ಮೂಲತಃ ಆಂಧ್ರದ ಕೃಷ್ಣ ಜಿಲ್ಲೆಯ ವೀರಂಕಿ ಗ್ರಾಮ. ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ವರ್ಕ್ಫ್ರಮ್ ಹೋಂ ಇದ್ದ ಹಿನ್ನೆಲೆಯಲ್ಲಿ ಬೆಂಗಳೂರು ತೊರೆದು ಊರು ಸೇರಿದ್ದ ಅನಿಲ್, ಆಂಧ್ರದ ತನ್ನ ಸ್ವಂತ ಊರಿಂದಲೇ ಕಾರ್ಯನಿರ್ವಹಿಸುತ್ತಿದ್ದ. ಎಲ್ಲವೂ ಸರಿಯಾಗಿದೆ ಎನ್ನುವಾಗಲೇ ಅನಿಲ್ ಪತ್ನಿ ಮೌನಿಕಾ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.
ಆದರೆ ಈ ಬಗ್ಗೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಮೌನಿಕಾ ಕುಟುಂಬಸ್ಥರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಇದಾದ ಬಳಿಕ ಎಚ್ಚೆತ್ತುಕೊಂಡಿದ್ದ ಖಾಕಿ ಪಡೆ ಅನಿಲ್ ಮತ್ತು ಆತನ ತಂದೆ-ತಾಯಿಯನ್ನ ವಶಕ್ಕೆ ಪಡೆದಿದೆ. ಪ್ರಕರಣ ಮೇಲ್ನೋಟಕ್ಕೆ ಕಗ್ಗಂಟಾಗಿದ್ದರೂ, ಇದು ವರದಕ್ಷಿಣೆ ಕಿರುಕುಳಕ್ಕೆ ನಡೆದಿರುವ ಹತ್ಯೆ ಅಂತಾ ಮೃತ ಮೌನಿಕಾ ಕುಟುಂಬ ಗಂಭೀರ ಆರೋಪ ಮಾಡುತ್ತಿದೆ. ಆದರೆ ತನಿಖೆ ನಂತರವಷ್ಟೇ ಸತ್ಯ ಹೊರಬೀಳಬೇಕಿದೆ.
ಸುಂದರ ಸಂಸಾರಕ್ಕೆ ಕೊಳ್ಳಿ ಇಟ್ಟಿದ್ದು ಯಾರು..?
ಸ್ವತಃ ಮೌನಿಕಾ ಕುಟುಂಬ ಹೇಳುವಂತೆ ಅನಿಲ್ ಹಾಗೂ ಮೌನಿಕಾ ಆಂಧ್ರಪ್ರದೇಶದ ತಮ್ಮ ಸ್ವಂತ ಊರಿಗೆ ಬಂದ ನಂತರ ಕೂಡ ಖುಷಿಯಾಗಿದ್ದರು. ಆದರೆ ದಿಢೀರ್ ಏನಾಯಿತೋ ಗೊತ್ತಿಲ್ಲ, ಮೌನಿಕಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮತ್ತೊಂದ್ಕಡೆ ಇದು ಹತ್ಯೆ ಎಂದು ಮೌನಿಕಾ ಕುಟುಂಬ ಆರೋಪಿಸುತ್ತಿದೆ. ಅನಿಲ್ ಹಾಗೂ ಆತನ ಕುಟುಂಬ ಸಾವಿನಲ್ಲಿ ನೇರ ಹೊಣೆ ಎಂದು ಮೌನಿಕಾ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನೇಣುಬಿಗಿದ ಸ್ಥಿತಿಯಲ್ಲಿ ಮೌನಿಕಾ ಶವ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆ ಮುಗಿಸಿ ಪೊಲೀಸರು ಐಪಿಸಿ ಸೆಕ್ಷನ್ 492, 304 ಬಿ ಅಡಿಯಲ್ಲಿ ಅನಿಲ್ ಹಾಗೂ ಕುಟುಂಬಸ್ಥರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಅದ್ಧೂರಿಯಾಗಿ ಮದುವೆ ಮಾಡಿದ್ದರು
ನೂರಾರು ಕನಸು ಹೊತ್ತು, ನೂರು ವರ್ಷ ಬಾಳುವ ಕನಸು ಕಂಡಿದ್ದ ಮೌನಿಕಾ ಮದುವೆ ಅದ್ಧೂರಿಯಾಗೇ ನಡೆದಿತ್ತು. ಮೇಲಾಗಿ ಗಂಡನದ್ದು ಸಾಫ್ಟ್ವೇರ್ ಇಂಜಿನಿಯರ್ ಕೆಲಸ. ಹೀಗಾಗಿ ಬೆಂಗಳೂರಿನಲ್ಲಿದ್ದ ಜೋಡಿ ಚೆನ್ನಾಗಿಯೇ ಇತ್ತು. ಆದರೆ ಊರಿಗೆ ಹೋದ ಬಳಿಕ ಏನಾಯಿತೋ ಗೊತ್ತಿಲ್ಲ ವೈಮನಸ್ಸು ಶುರುವಾಗಿದೆ. ಇದು ವರದಕ್ಷಿಣೆಯಿಂದಲೇ ಶುರುವಾದ ವೈಮನಸ್ಸು ಹಾಗೂ ಈ ಸಾವಿಗೆ ವರದಕ್ಷಿಣೆ ಕಿರುಕುಳವೇ ಕಾರಣ ಅಂತಾ ಆರೋಪಿಸಲಾಗುತ್ತಿದೆ. ಅದೇನೆ ಇರಲಿ, ಇನ್ನೂ ಬದುಕಿ ಬಾಳಬೇಕಿದ್ದ ವಯಸ್ಸಿನಲ್ಲಿ ಮೌನಿಕಾ ಹೀಗೆ ಮಸಣ ಸೇರಿದ್ದು ಮಾತ್ರ ಘೋರ ದುರಂತವೇ ಸರಿ.