ರಾಮೋಜಿರಾವ್ ಮಧ್ಯಸ್ಥಿಕೆಯಲ್ಲಿ ಚಂದ್ರಬಾಬು ನಾಯ್ಡು -ಅಮಿತ್ ಷಾ ಭೇಟಿ
ಅಮರಾವತಿ, ಆ. 21: ತೆಲಗು ದೇಶಂ ಪಾರ್ಟಿ ನೇತಾರ, ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಸಂಜೆ ರಾಮೋಜಿರಾವ್ ಮಧ್ಯಸ್ಥಿಕೆಯಲ್ಲಿ ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಲಿದ್ದಾರೆ.
ನಾಯ್ಡು ಹಾಗೂ ಅಮಿತ್ ಶಾ ಭೇಟಿ ಆಂಧ್ರ ಪ್ರದೇಶ ರಾಜಕೀಯಲ್ಲಿ ಸಂಚನಲ ಮೂಡಿಸಿದೆ. ಚಂದ್ರಬಾಬು ನಾಯ್ಡು ಅವರನ್ನು ಬಿಜೆಪಿಯತ್ತ ಸೆಳೆಯಲು ಕಳೆದ ಮೂರು ವರ್ಷದಿಂದಲೂ ಪ್ರಯತ್ನಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ ಭಾನುವಾರ ಸಂಜೆ ರಾಮೋಜಿರಾವ್ ಅವರ ಮಧ್ಯಸ್ಥಿಕೆಯಲ್ಲಿ ಚಂದ್ರಬಾಬು ನಾಯ್ಡು ಹಾಗೂ ಅಮಿತ್ ಶಾ ಭೇಟಿಯಾಗಿ 45 ನಿಮಿಷ ಮಾತುಕತೆ ನಡೆಸಲಿದ್ದಾರೆ.
ವೈ. ಎಸ್. ಜಗನ್ ರಾಜಕೀಯ ರಂಗಕ್ಕೆ ಎಂಟ್ರಿ ಕೊಟ್ಟ ಬಳಿಕ ತೆಲಗು ದೇಶಂ ಪಾರ್ಟಿ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಅಧಿಕಾರ ಚುಕ್ಕಾಣಿ ಹಿಡಿಯವುದು ಕಷ್ಟಕರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಚಂದ್ರಬಾಬು ನಾಯ್ಡು ಬಿಜೆಪಿ ಜತೆ ಕೈ ಜೋಡಿಸುವ ಮಾತುಗಳು ಕೇಳಿ ಬರುತ್ತಿವೆ. ಈ ಮಾತುಗಳು ಬೆನ್ನಲ್ಲೇ ಅಮಿತ್ ಶಾ ಮತ್ತು ನಾಯ್ಡು ಭೇಟಿ ಮಾಡುತ್ತಿರುವುದು ಇದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.
ಭಾನುವಾರ ಆಂಧ್ರ ಪ್ರದೇಶದ ಮುನುಗೊಡೆಯಲ್ಲಿ ಆಯೋಜಿಸಿರುವ ಬೃಹತ್ ಸಮಾವೇಶದಲ್ಲಿ ಅಮಿತ್ ಶಾ ಪಾಲ್ಗೊಳ್ಳುತ್ತಿದ್ದಾರೆ. ಭಾನುವಾರ ಸಂಜೆ ವೇಳೆಗೆ ರಾಮೋಜಿ ಫಿಲಂ ಸಿಟಿಗೆ ಭೇಟಿ ನೀಡಲಿದ್ದು, ಆ ಬಳಿಕ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ದೆಹಲಿ ತಲುಪಲಿದ್ದಾರೆ.
ಬಿಜೆಪಿ ಬೆಂಬಲ ನೀಡಲಿದೆಯೇ?
ಚಂದ್ರಬಾಬು ನಾಯ್ಡು ಅವರ ಮಾತುಕತೆ ಸಲುವಾಗಿ ಅಮಿತ್ ಶಾ ರಾಮೋಜಿ ಫಿಲಂ ಸಿಟಿಗೆ ಹೋಗುತ್ತಿದ್ದಾರೆ. ಅತ್ತ ಚಂದ್ರಬಾಬು ನಾಯ್ಡು ಸಹ ರಾಮೋಜಿ ರಾವ್ ಫಿಲಂ ಸಿಟಿಗೆ ಹೋಗಿ ಅಮಿತ್ ಶಾ ಅವರನ್ನು ಬರ ಮಾಡಿಕೊಳ್ಳಲಿದ್ದಾರೆ. ಈ ಮಾತುಕತೆ ಫಲಪ್ರದವಾದಲ್ಲಿ ನಾಯ್ಡು ಅಧಿಕಾರಕ್ಕಾಗಿ ಕಮಲ ಜತೆ ತೆಲಗು ದೇಶಂ ಪಾರ್ಟಿ ಸೇರಿದರೂ ಅಚ್ಚರಿ ಪಡಬೇಕಿಲ್ಲ.
ಮಾಜಿ ಕೇಂದ್ರ ಸಚಿವ ವೈ. ಎಸ್. ಚೌಧರಿ ಅಲಿಯಾಸ್ ಸುಜನ್ ಚೌಧರಿ ಈ ಸೀಕ್ರೇಟ್ ಸಭೆ ಆಯೋಜನೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಜೆಪಿಗೆ ಟಿಡಿಪಿ ಬೆಂಬಲ
ನಾಯ್ಡು ಅಧಿಕಾರಕ್ಕಾಗಿ ಬಿಜೆಪಿ ಜತೆ ಕೈ ಜೋಡಿಸಿದಲ್ಲಿ ಆಂಧ್ರ ಮತ್ತು ತೆಲಂಗಾಣ ರಾಜಕೀಯದಲ್ಲಿ ಭಾರೀ ಬದಲಾವಣೆ ಆಗಲಿದೆ. ತೆಲಂಗಾಣದಲ್ಲಿ ಬಿಜೆಪಿ ಪಕ್ಷಕ್ಕೆ ಟಿಡಿಪಿ ಸಹಾಯ ಬೇಕಿದೆ. ಕೊಡು- ಪಡೆ ತತ್ವದ ಅಡಿ ಆಂಧ್ರದಲ್ಲಿ ಟಿಡಿಪಿಗೆ ಬಿಜೆಪಿ ಬೆಂಬಲವಾಗಿ ನಿಂತರೆ, ತೆಲಂಗಾಣದಲ್ಲಿ ಬಿಜೆಪಿಗೆ ಟಿಡಿಪಿ ಬೆಂಬಲ ನೀಡಲಿದೆ. ಈ ಮೂಲಕ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಕಮಲ ಅರಳಿಸುವ ಅಮಿತ್ ಶಾ ಪ್ಲಾನ್ ಯಶಸ್ವಿಯಾಗಲಿದೆ.
ಅಮಿತ್ ಶಾ ತೀರ್ಮಾನವೇನು?
ಈಗಾಗಲೇ ಬಿಜೆಪಿಗೆ ಬಾಹ್ಯ ಬೆಂಬಲ ನೀಡಿರುವ ಚಂದ್ರಬಾಬು ನಾಯ್ಡು, ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆ ವೇಳೆ ತನ್ನ ನಿಷ್ಠೆಯನ್ನು ಬಿಜೆಪಿಗೆ ತೋರಿಸಿದ್ದಾರೆ. ಹೀಗಾಗಿ ಆಂಧ್ರ ಪ್ರದೇಶದಲ್ಲಿ ಮುಂದಿನ ಅಸೆಂಬ್ಲಿ ಚುನಾವಣೆ ವೇಳೆಗೆ ಟಿಡಿಪಿಗೆ ಬಿಜೆಪಿ ಬೆಂಬಲ ನೀಡಿದರೂ ಅಚ್ಚರಿ ಪಡಬೇಕಿಲ್ಲ. ಎಲ್ಲವೂ ಇವತ್ತಿನ ಅಮಿತ್ ಶಾ ಮತ್ತು ನಾಯ್ಡು ಮಾತುಕತೆ ನಿರ್ಣಯಿಸಲಿವೆ. ಈ ಮಾತುಕತೆ ಫಲಪ್ರದವಾದರೆ ಆಂಧ್ರದಲ್ಲಿ ಸದ್ಯ ಅಧಿಕಾರದಲ್ಲಿರುವ ಜಗನ್ ಮೋಹನ್ ರೆಡ್ಡಿ ತಮ್ಮ ಕಾರ್ಯತಂತ್ರ ಬದಲಾವಣೆ ಮಾಡಬೇಕಿದೆ.
ಬಿಜೆಪಿಗೆಗೂ ಬೆಂಬಲ ಅನಿವಾರ್ಯ
ಮುಂದಿನ ಅಸೆಂಬ್ಲಿ ಚುನಾವಣೆ ವೇಳೆಗೆ ಬಿಜೆಪಿ ಮತ್ತು ಜನಸೇನಾ ಬೆಂಬಲ ಪಡೆದಿದ್ದೇ ಆದಲ್ಲಿ ತೆಲಗು ದೇಶಂ ಪಾರ್ಟಿ ಅಧಿಕಾರ ಚುಕ್ಕಾಣಿ ಹಿಡಿಯುವುದರಲ್ಲಿ ಅನುಮಾನವೇ ಇಲ್ಲ. ಹೇಗಾದರೂ ಮಾಡಿ ಅಧಿಕಾರ ಚುಕ್ಕಾಣಿ ಹಿಡಿಯಲು ಯತ್ನಿಸುತ್ತಿರುವ ಚಂದ್ರಬಾಬು ನಾಯ್ಡು ಅನ್ಯ ಪಕ್ಷಗಳ ಬೆಂಬಲದ ಮೊರೆ ಹೋಗಿದ್ದಾರೆ. ಇದರಲ್ಲಿ ನಾಯ್ಡು ಯಶಸ್ವಿಯಾಗುತ್ತಾರಾ?. ಬಿಜೆಪಿಯೂ ಬೆಂಬಲ ನೀಡಲಿದೆಯೇ? ಎಂಬುದನ್ನು ಕಾಲವೇ ನಿರ್ಧರಿಸಲಿದೆ.