ತೀವ್ರ ಹುಡುಕಾಟದ ಬಳಿಕ ಕೊರೊನಾ ಸೋಂಕಿತೆ ಸಿಕ್ಕಿದ್ದು ಆಂಧ್ರ ರೈಲಿನಲ್ಲಿ
ರಾಜಮುಂಡ್ರಿ, ಡಿಸೆಂಬರ್ 24: ದೆಹಲಿಯಿಂದ ವಿಶಾಖಪಟ್ಟಣಕ್ಕೆ ಸಾಗುತ್ತಿದ್ದ ರೈಲಿನಲ್ಲಿದ್ದ ಮಹಿಳೆ ಮತ್ತು ಆಕೆಯ ಮಗನನ್ನು ಆರೋಗ್ಯ ಮತ್ತು ಪೊಲೀಸ್ ಅಧಿಕಾರಿಗಳು ರಾಜಮುಂಡ್ರಿಯಲ್ಲಿ ಇಳಿಸಿದ ಘಟನೆ ನಡೆದಿದೆ. ಕೋವಿಡ್ ವೈರಸ್ನ ರೂಪಾಂತರ ಕಂಡುಬಂದಿರುವ ಯುನೈಟೆಡ್ ಕಿಂಗ್ಡಂನಿಂದ ಈ ಮಹಿಳೆ ಡಿ. 21ರಂದು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಅವರ ಕೋವಿಡ್ 19 ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿತ್ತು.
ಆದರೆ ಇದರ ಬಗ್ಗೆ ಅರಿವಿಲ್ಲದ ಮಹಿಳೆ, ತನ್ನ ಮಗನೊಂದಿಗೆ ದೆಹಲಿಯಿಂದ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಹಕುಂಪೇಟೆ ಬ್ಲಾಕ್ಗೆ ಪ್ರಯಾಣಿಸಿದ್ದರು. ಈ ಮಹಿಳೆಯನ್ನು ಸಂಪರ್ಕಿಸಲು ಅಧಿಕಾರಿಗಳಿಗೆ ಸಾಧ್ಯವಾಗದ ಕಾರಣ ತೀವ್ರ ಆತಂಕ ಸೃಷ್ಟಿಯಾಗಿತ್ತು. ಹೀಗಾಗಿ ಆಕೆಯ ಪತ್ತೆಗೆ ವ್ಯಾಪಕ ಕಾರ್ಯಾಚರಣೆ ನಡೆಸಲಾಗಿತ್ತು. ಕೊನೆಗೆ ಆಕೆ ವಿಶಾಖಪಟ್ಟಣಕ್ಕೆ ಹೋಗುತ್ತಿದ್ದ ರೈಲಿನಲ್ಲಿ ಪತ್ತೆಯಾಗಿದ್ದಾಳೆ.
ರೂಪಾಂತರದ ಕೊರೊನಾ ಸೋಂಕು; ಈಗಿರುವ ಲಸಿಕೆಗಳು ಪರಿಣಾಮಕಾರಿಯೇ?
ಮಹಿಳೆ ಮತ್ತು ಆಕೆಯ ಮಗ ಇಬ್ಬರನ್ನೂ ಸರ್ಕಾರಿ ಸ್ವಾಮ್ಯದ ಕ್ವಾರೆಂಟೈನ್ ಕೇಂದ್ರಕ್ಕೆ ರವಾನಿಸಲಾಗಿದೆ. ಆಕೆಯ ಮಾದರಿಗಳನ್ನು ಗುರುವಾರ ಪುನಃ ಸಂಗ್ರಹಿಸಿ ಅದನ್ನು ಪುಣೆಯಲ್ಲಿನ ರಾಷ್ಟ್ರೀಯ ವೈರಾಣು ಸಂಸ್ಥೆಗೆ ಕಳುಹಿಸಲು ನಿರ್ಧರಿಸಲಾಗಿದೆ. ಆಕೆಗೆ ಬ್ರಿಟನ್ನಲ್ಲಿ ಕಾಣಿಸಿಕೊಂಡಿರುವ ಕೊರೊನಾ ವೈರಸ್ನ ರೂಪಾಂತರ ತಗುಲಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.
ಬ್ರಿಟನ್ನಲ್ಲಿ ಇನ್ನೂ ಎರಡು ಹೆಚ್ಚು ಪ್ರಬಲ ಸಾಂಕ್ರಾಮಿಕವಾದ ಕೋವಿಡ್ ರೂಪಾಂತರಗಳು ಪತ್ತೆಯಾಗಿವೆ. ಇದು ಮತ್ತಷ್ಟು ಆತಂಕ ಮೂಡಿಸಿದೆ. ಎಲ್ಲ ರಾಜ್ಯಗಳೂ ಇತ್ತೀಚೆಗೆ ಬ್ರಿಟನ್ನಿಂದ ಮರಳಿದ ಪ್ರಜೆಗಳ ವಿವರಗಳನ್ನು ಕಲೆಹಾಕುತ್ತಿವೆ.
ಲಸಿಕೆ ತುರ್ತು ಬಳಕೆಗೆ ಮತ್ತೆ ಅರ್ಜಿ; ಅನುಮೋದನೆ ಸಿಗುವುದು ಯಾವಾಗ?
ಡಿಸೆಂಬರ್ 9 ರಿಂದ ತೆಲಂಗಾಣಕ್ಕೆ ಇದುವರೆಗೂ ಬ್ರಿಟನ್ನಿಂದ 1200 ಮಂದಿ ಪ್ರಯಾಣಿಕರು ಬಂದಿದ್ದಾರೆ. ಅವರಿಗೆ ವೈದ್ಯಕೀಯ ತಪಾಸಣೆ ನಡೆಸಲು ಅವರ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದೇವೆ. ಅವರ ಆರೋಗ್ಯ ಸ್ಥಿತಿಯ ಬಗ್ಗೆ ವಿಚಾರಿಸುತ್ತಿದ್ದೇವೆ. ಇದುವರೆಗೂ ಅಲ್ಲಿಂದ ಬಂದವರಲ್ಲಿಯಾರಿಗೂ ಪಾಸಿಟಿವ್ ಬಂದಿಲ್ಲ ಎಂದು ತೆಲಂಗಾಣ ಸಾರ್ವಜನಿಕ ಆರೋಗ್ಯ ನಿರ್ದೇಶಕ ಶ್ರೀನಿವಾಸ ರಾವ್ ತಿಳಿಸಿದ್ದಾರೆ.