ಜಗನ್ ಚಿಕ್ಕಪ್ಪ ಸಾವು: ಅಸಹಜ ಸಾವಿನ ಬಗ್ಗೆ ದೂರು ದಾಖಲು
ಅಮರಾವತಿ, ಮಾರ್ಚ್ 15: ಆಂಧ್ರಪ್ರದೇಶದ ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ದಿವಂಗತ ವೈ.ಎಸ್.ರಾಜಶೇಖರ್ ರೆಡ್ಡಿ ಅವರ ತಮ್ಮ ವೈ.ಎಸ್. ವಿವೇಕಾನಂದ ರೆಡ್ಡಿ (68) ಶುಕ್ರವಾರ ನಿಧನರಾದರು.
ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದ ಅವರು ಕಡಪ ಜಿಲ್ಲೆಯಲ್ಲಿ ಕೊನೆಯುಸಿರೆಳೆದರು ಎಂದು ಮೂಲಗಳು ತಿಳಿಸಿವೆ.
ದಿನಾಂಕ ಘೋಷಣೆ ಬೆನ್ನಲ್ಲೇ ವೈಎಸ್ಆರ್ ಪಕ್ಷ ಸೇರಿದ ಖ್ಯಾತ ತೆಲುಗು ನಟ
ವೈ.ಎಸ್. ವಿವೇಕಾನಂದ ರೆಡ್ಡಿ ಅವರ ಸಾವಿನ ಬಗ್ಗೆ ಅವರ ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದಾರೆ. ಅವರ ಆಪ್ತ ಸಹಾಯಕ ಕೃಷ್ಣಾ ರೆಡ್ಡಿ, ವಿವೇಕಾನಂದ ಅವರ ಬೆಡ್ರೂಂ ಮತ್ತು ಬಾತ್ರೂಂಗಳಲ್ಲಿ ರಕ್ತದ ಕಲೆಗಳು ಕಂಡುಬಂದಿರುವುದು ಶಂಕಾಸ್ಪದವಾಗಿದೆ ಎಂದು ಹೇಳಿದ್ದಾರೆ. ಈ ಸಂಬಂಧ ಅವರು ಪ್ರಕರಣದ ತನಿಖೆ ನಡೆಸುವಂತೆ ಪುಲಿವೆಂಡುಲಾ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ತನಿಖೆ ಆರಂಭಿಸಿದ್ದಾರೆ.
ಗುರುವಾರ ರಾತ್ರಿ 10.30ರವರೆಗೂ ಜಮ್ಮಲಮಡುಗು, ಚಪಡು, ದುವ್ವುರು ಮುಂತಾದೆಡೆ ಚುನಾವಣಾ ಪ್ರಚಾರ ನಡೆಸಿದ್ದ ವಿವೇಕಾನಂದ ರೆಡ್ಡಿ, 11.30ರವರೆಗೆ ಬೆಂಬಲಿಗರು, ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿ ಬಳಿಕ ಮನೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಅವರ ಮನೆಯಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ. ಬೆಳಿಗ್ಗೆ ಮನೆಗೆಲಸದವರು ಬಂದಾಗ ಅವರು ಮೃತಪಟ್ಟಿರುವುದು ಕಂಡುಬಂದಿದೆ. ವಿವೇಕಾನಂದ ರೆಡ್ಡಿ ಅವರ ಹಣೆ ಮತ್ತು ಬಲಗೈಗೆ ಗಾಯಗಳಾಗಿವೆ.
1950ರ ಆಗಸ್ಟ್ 8ರಂದು ಜನಿಸಿದ್ದ ವಿವೇಕಾನಂದ ರೆಡ್ಡಿ, ಪತ್ನಿ ಮತ್ತು ಮಗಳನ್ನು ಅಗಲಿದ್ದಾರೆ.
ಪುಲಿವೆಂಡುಲಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು, 1999ರಲ್ಲಿ ಕಡಪ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕಸಭೆ ಪ್ರವೇಶಿಸಿದ್ದರು. 2004ರ ಚುನಾವಣೆಯಲ್ಲಿಯೂ ಭರ್ಜರಿ ಗೆಲುವು ಕಂಡಿದ್ದರು.
ಸಹೋದರ ರಾಜಶೇಖರ್ ರೆಡ್ಡಿ ನಿಧನದ ಬಳಿಕ ಮುಖ್ಯಮಂತ್ರಿ ಎನ್. ಕಿರಣ್ ಕುಮಾರ್ ರೆಡ್ಡಿ ಅವರ ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಕಾಂಗ್ರೆಸ್ ತೊರೆದು ವೈಎಸ್ಆರ್ ಕಾಂಗ್ರೆಸ್ ಸ್ಥಾಪಿಸಿದ್ದ ಜಗನ್ ಮೋಹನ್ ರೆಡ್ಡಿ ಮತ್ತು ವಿವೇಕಾನಂದ ರೆಡ್ಡಿ ನಡುವೆ ಮನಸ್ತಾಪವಿತ್ತು. ಆದರೆ, 2011ರ ವಿಧಾನಸಭೆ ಉಪ ಚುನಾವಣೆಯಲ್ಲಿ ಅತ್ತಿಗೆ ವೈ.ಎಸ್. ವಿಜಯಮ್ಮ ಅವರ ಎದುರು ಸೋಲು ಅನುಭವಿಸಿದ ನಂತರ ಜಗನ್ ಮೋಹನ್ ರೆಡ್ಡಿ ಅವರ ಪಕ್ಷವನ್ನು ಸೇರಿಕೊಂಡಿದ್ದರು.