ತಿರುಮಲ: ಒಂದೇ ದಿನ 10 ಕೋಟಿ ರುಪಾಯಿ ದೇಣಿಗೆ ಸಂಗ್ರಹ
ಅಮರಾವತಿ ಜೂನ್ 7: ದೇಶದ ಅತ್ಯಂತ ಶ್ರೀಮಂತ ದೇಗುಲಗಳಲ್ಲಿ ಒಂದೆನಿಸಿಕೊಂಡಿರುವ ತಿರುಮಲ ತಿರುಪತಿ ದೇಗುಲದಲ್ಲಿ ಸೋಮವಾರ ಒಂದೇ ದಿನ ದಾಖಲೆಯ 10 ಕೋಟಿ ರುಪಾಯಿ ದೇಣಿಗೆ ಸಂಗ್ರಹವಾಗಿದೆ.
ಆಂಧ್ರ ಪ್ರದೇಶದ ತಿರುಪತಿ ಜಿಲ್ಲೆಯ ಪವಿತ್ರ ತಿರುಮಲ ಬೆಟ್ಟದಲ್ಲಿರುವ ಶ್ರೀ ವೆಂಕಟೇಶ್ವರ ದರ್ಶನಕ್ಕೆ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಶ್ರೀ ವೆಂಕಟೇಶ್ವರನ ಭಕ್ತರಾಗಿರುವ ತಮಿಳುನಾಡಿನ ತಿರುನಲ್ವೇಲಿಯ ಗೋಪಾಲ ಬಾಲ ಕೃಷ್ಣ ಎಂಬುವವರು ತಿರುಮಲ ತಿರುಪತಿ ದೇವಸ್ಥಾನಗಳು(ಟಿಟಿಡಿ) ಟ್ರಸ್ಟ್ ಗೆ ಸೋಮವಾರ 7 ಕೋಟಿ ರು. ದೇಣಿಗೆ ನೀಡಿದ್ದಾರೆ.
ಟಿಟಿಡಿ ಗೆ ಸೇರಿರುವ ಪ್ರಾಣದಾನ ಟ್ರಸ್ಟ್, ಗೋಸಂರಕ್ಷಣಾ ಟ್ರಸ್ಟ್, ಬಾಲಾಜಿ ಇನ್ಸ್ಟಿಟ್ಯುಟ್ ಆಫ್ ಸರ್ಜರಿ ರಿಸರ್ಚ್ ಅಂಡ್ ರಿಹ್ಯಾಬಿಲಿಟೇಶನ್ ಫಾರ್ ದಿ ಡಿಸೇಬಲ್ಡ್, ವೇದ ಪರಿರಕ್ಷಣಾ ಟ್ರಸ್ಟ್, ಸರ್ವ ಶ್ರೇಯಸ್ ಟ್ರಸ್ಟ್ ಮತ್ತು ಶ್ರೀ ವೆಂಕಟೇಶ್ವರ ಭಕ್ತಿ ಚಾನಲ್ (ಎಸ್ವಿಬಿಸಿ) ಗೆ ತಲಾ ಒಂದು ಕೋಟಿ ರುಪಾಯಿ ದೇಣಿಗೆ ನೀಡಿದ್ದಾರೆ.
ಮತಾಂಧ ಶಕ್ತಿಗಳ ವಿರುದ್ಧ ಒಂದಾಗಿ: ಕೇರಳ ಸಿಎಂ
ಕಂಪನಿಗಳಿಂದ 3 ಕೋಟಿ ರು. ದೇಣಿಗೆ: ಅಲ್ಲದೇ ತಿರುನಲ್ವೇಲಿ ಮೂಲದ ಕಂಪನಿಗಳಿಂದ ಟಿಟಿಡಿ ಮತ್ತು ಇತರೆ ಮೂರು ಟ್ರಸ್ಟ್ ಗಳಿಗೆ ಒಟ್ಟು ಮೂರು ಕೋಟಿ ರುಪಾಯಿ ದೇಣಿಗೆ ಬಂದಿದೆ. ಎ-ಸ್ಟಾರ್ ಟೆಸ್ಟಿಂಗ್ ಅಂಡ್ ಇನ್ ಸ್ಪೆಕ್ಶನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ವೆಂಕಟೇಶ್ವರ ವಿದ್ಯಾದಾನ ಟ್ರಸ್ಟ್ ಗೆ ಒಂದು ಕೋಟಿ ರುಪಾಯಿ ದೇಣಿಗೆ ನೀಡಿದೆ. ಬಾಲಕೃಷ್ಣ ಇಂಧನ ಕಂಪನಿಯು ಶ್ರೀ ವೆಂಕಟೇಶ್ವರ ಆಲಯ ನಿರ್ಮಾಣ ಟ್ರಸ್ಟ್ ಗೆ ಒಂದು ಕೋಟಿ ರುಪಾಯಿ ದೇಣಿಗೆ ನೀಡಿದೆ. ಅದೇ ರೀತಿ ಸೀ ಹಬ್ ಇನ್ ಸ್ಪೆಕ್ಶನ್ ಸರ್ವೀಸಸ್ ಕಂಪನಿಯು ಶ್ರೀ ವೆಂಕಟೇಶ್ವರ ಹೆರಿಟೇಜ್ ಪ್ರಿಸರ್ವೇಶನ್ ಟ್ರಸ್ಟ್ ಗೆ ಒಂದು ಕೋಟಿ ರುಪಾಯಿ ದೇಣಿಗೆ ನೀಡಿದೆ.
ಡಿಡಿ ರೂಪದಲ್ಲಿ ದೇಣಿಗೆ ಹಸ್ತಾಂತರ: ದಾನಿಗಳು ಈ ಮೊತ್ತವನ್ನು ತಿರುಮಲ ತಿರುಪತಿ ದೇವಸ್ಥಾನಗಳು(ಟಿಟಿಡಿ) ಟ್ರಸ್ಟ್ ನ ಇಒ ಎ.ವಿ.ಧರ್ಮಾರೆಡ್ಡಿ ಅವರಿಗೆ ಡಿಡಿ ರೂಪದಲ್ಲಿ ಹಸ್ತಾಂತರಿಸಿದರು. ಇದಲ್ಲದೇ ಪ್ರತಿ ದಿನದಂತೆ ಸಾವಿರಾರು ಭಕ್ತರು ದರ್ಶನದ ಸಮಯದಲ್ಲಿ ಹುಂಡಿಗೆ ದೇಣಿಗೆ ಹಾಕಿದ್ದಾರೆ. ಕೊರೊನಾ ಪ್ರಕರಣಗಳ ಸಂಖ್ಯೆ ತಗ್ಗಿದ ನಂತರ ತಿರುಪತಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲಿಯೂ ವಾರಾಂತ್ಯದಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ.
ಪ್ರತಿ ನಿತ್ಯ ಸಾವಿರಾರು ಭಕ್ತರಿಂದ ದರ್ಶನ: ತಿರುಮಲ ವೆಂಕಟೇಶ್ವರ ದರ್ಶನಕ್ಕೆ ಪ್ರತಿ ನಿತ್ಯ ಸಾವಿರಾರು ಭಕ್ತರು ಹರಿದು ಬರುತ್ತಾರೆ. ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ತಿರುಮಲಕ್ಕೆ ಆಗಮಿಸಿದ್ದರು. ವೈಕುಂಠ ಏಕಾದಶಿ ಮತ್ತು ಗರುಡ ಸೇವಾ ದಿನಗಳಲ್ಲಿ ಯಾತ್ರಾರ್ಥಿಗಳ ದಟ್ಟಣೆಗಿಂತ ಈ ಎರಡು ತಿಂಗಳಲ್ಲಿ ಭಕ್ತರು ಹೆಚ್ಚಿದ್ದರು. ವಾರಾಂತ್ಯದ ದಿನಗಳಾದ ಶನಿವಾರ ಮತ್ತು ಭಾನುವಾರಗಳಲ್ಲಂತೂ ಸರತಿ ಸಾಲುಗಳು ತುಸು ಹೆಚ್ಚೇ ಇತ್ತು. ಈಗಲೂ ದೇಗುಲದಲ್ಲಿ ದೊಡ್ಡ ಸರತಿ ಸಾಲುಗಳು ಮುಂದುವರಿದಿದೆ. ಇದರ ಪರಿಣಾಮವಾಗಿ ಶ್ರೀ ವೆಂಕಟೇಶ್ವರನ ದರ್ಶನಕ್ಕೆ ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ಕಾಯಬೇಕಾಗುತ್ತದೆ. ಸರತಿ ಸಾಲುಗಳು ಮತ್ತು ಕಂಪಾರ್ಟ್ಮೆಂಟ್ಗಳು ತುಂಬಿ ತುಳುಕುತ್ತಿವೆ.