ಹೊಟ್ಟೆಗಿಲ್ಲದೆ ಮಣ್ಣು ತಿಂದ ಮಕ್ಕಳ ಜೀವ ಕಸಿದುಕೊಂಡಿತು ಹಸಿವು ಎಂಬ ಕ್ರೌರ್ಯ
ಅಮರಾವತಿ, ಮೇ 4: ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ ಹಸಿವಿನಿಂದಾಗಿ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಅಂತ್ಯ ಸಂಸ್ಕಾರಕ್ಕೆ ಹಣ ಮತ್ತು ಜಾಗವಿಲ್ಲದೆ ಪೋಷಕರು ಟೆಂಟ್ನಂತಹ ಗೂಡಿನ ಪಕ್ಕದಲ್ಲಿಯೇ ಮೃತದೇಹಗಳನ್ನು ಹೂತಿದ್ದರು ಎಂಬ ಆಘಾತಕಾರಿ ಸಂಗತಿ ಬಹಿರಂಗವಾಗಿದೆ.
ಹೊಟ್ಟೆಗೆ ತಿನ್ನಲು ಗತಿಯಿಲ್ಲದೆ ಇಬ್ಬರು ಮಕ್ಕಳು ಹಸಿವಾದಾಗಲೆಲ್ಲ ಮಣ್ಣು ತಿನ್ನುತ್ತಿದ್ದರು. ಈ ಮಕ್ಕಳಲ್ಲಿ ಸಂತೋಷ್ (3) ಆರು ತಿಂಗಳ ಹಿಂದೆ ಮೃತಪಟ್ಟರೆ, ಎರಡು ವರ್ಷದ ಆತನ ಸಹೋದರಿ ವೆನ್ನೆಲಾ ಏಪ್ರಿಲ್ 28ರಂದು ಸಾವಿಗೀಡಾಗಿದ್ದಾಳೆ. ಈ ಮಕ್ಕಳ ಪೋಷಕರು ಕರ್ನಾಟಕದಿಂದ ಆಂಧ್ರಕ್ಕೆ ವಲಸೆ ಹೋದವರು.
ಹಸಿವು ಮುಕ್ತವಾಗಿಸುವಲ್ಲಿ ಅನ್ನದಾತರೇ ಪ್ರಮುಖರು!
ಚಿಕ್ಕಬಳ್ಳಾಪುರದ ಬಾಗೇಪಲ್ಲಿಯ ಗ್ರಾಮವೊಂದರಿಂದ ಹತ್ತು ವರ್ಷಗಳ ಹಿಂದೆ ಆಂಧ್ರಪ್ರದೇಶದ ಕದಿರಿಗೆ ವಲಸೆ ಹೋಗಿದ್ದವರು ಎನ್ನಲಾದ ನಾಗಮಣಿ ಮತ್ತು ಮಹೇಶ್ ದಂಪತಿ ಆಶ್ರಯದಲ್ಲಿ ಒಟ್ಟು ಆರು ಮಕ್ಕಳು ಬೆಳೆಯುತ್ತಿದ್ದರು. ಅವರಲ್ಲಿ ನಾಗಮಣಿ ಅವರ ತಂಗಿ ಮಗಳು ವೆನ್ನೆಲಾ ಕೂಡ ಇದ್ದಳು.
ಕದಿರಿ ಮಂಡಲದ ಕುಮ್ಮರವಂಡಲಪಲ್ಲೆ ಗ್ರಾಮದ ಹಮಾಲಿ ಕ್ವಾರ್ಟರ್ಸ್ ಪ್ರದೇಶದಲ್ಲಿ ತಾಯಿ, ಪತಿ ಮತ್ತು ಮಕ್ಕಳೊಂದಿಗೆ ನಾಗಮಣಿ ನೆಲೆಸಿದ್ದರು. ಕಟ್ಟಿಗೆ, ಬಟ್ಟೆಗಳಿಂದ ತಯಾರಿಸಿದ ಸಣ್ಣ ಟೆಂಟ್ ಅವರ ಆಶ್ರಯ ತಾಣವಾಗಿತ್ತು.
ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಈ ಮಹೇಶ್-ನಾಗಮಣಿ ದಂಪತಿಯ ಮಗ ಸಂತೋಷ್ ಆರು ತಿಂಗಳ ಹಿಂದೆ ಸತ್ತು ಹೋಗಿದ್ದ. ಅಕ್ಕಪಕ್ಕದವರು ಹೇಳುವ ಪ್ರಕಾರ ಈ ಎರಡೂ ಮಕ್ಕಳು ಹಸಿವು ತಾಳಲಾರದೆ ಮಣ್ಣು ತಿನ್ನುತ್ತಿದ್ದರು.
'ಈ ಕುಟುಂಬಕ್ಕೆ ಸರಿಯಾದ ಮನೆಯಿಲ್ಲ. ಕಟ್ಟಿಗೆಯಿಂದ ಮಾಡಿಕೊಂಡ ಟೆಂಟ್ನಲ್ಲಿ ವಾಸಿಸುತ್ತಿದ್ದಾರೆ. ಈ ಎರಡೂ ಮಕ್ಕಳು ಸತ್ತ ಬಳಿಕ ದಂಪತಿ ಗುಡಿಸಿಲ ಪಕ್ಕದಲ್ಲಿಯೇ ಮಣ್ಣು ಮಾಡಿದ್ದರು' ಎಂದು ಕದಿರಿ ಗ್ರಾಮೀಣ ವಲಯದ ಇನ್ಸ್ಪೆಕ್ಟರ್ ಎ. ಇಸ್ಮಾಯಿಲ್ ತಿಳಿಸಿದ್ದಾರೆ.
ಕಾಲುಜಾರಿ ಸಂಪ್ನೊಳಗೆ ಬಿದ್ದು ಎರಡು ಪುಟ್ಟ ಜೀವಗಳ ಬಲಿ
ಮಕ್ಕಳ ಸಾವನ್ನು ಗಮನಿಸಿದ ಅಕ್ಕಪಕ್ಕದವರು ಅಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.
ಕೂಲಿ ಕೆಲಸಕ್ಕೆಮ ಹೋಗುತ್ತಿದ್ದ ಪೋಷಕರು ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ, ಆಹಾರವನ್ನು ಕೊಡುತ್ತಿರಲಿಲ್ಲ. ಅಮ್ಮ, ಅಪ್ಪ ಮತ್ತು ಅಜ್ಜಿ ಮೂವರೂ ಮದ್ಯ ಸೇವಿಸುತ್ತಿದ್ದರು. ಮನೆಯಲ್ಲಿ ನಿತ್ಯ ಅಡುಗೆಯನ್ನೇ ಮಾಡುತ್ತಿರಲಿಲ್ಲ. ಮಕ್ಕಳಿಗೆ ಸರಿಯಾಗಿ ಊಟ ನೀಡುತ್ತಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಅಂಗನವಾಡಿ ಸೇವೆಗಳಿಗೆ ಆಧಾರ್ ಕಾರ್ಡ್ ಅಗತ್ಯ. ಈ ದಂಪತಿ ಬಳಿ ಆಧಾರ್ ಕಾರ್ಡ್ ಇರಲಿಲ್ಲ. ಹೀಗಾಗಿ ಮಕ್ಕಳಿಗೆ ನೆರವು ನೀಡಲು ಸ್ಥಳೀಯ ಅಂಗನವಾಡಿ ಸಿಬ್ಬಂದಿಗೆ ಸಾಧ್ಯವಾಗಿರಲಿಲ್ಲ.
ಈ ದಂಪತಿಯ ಹೆಣ್ಣು ಮಗು ವರ್ಷದ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿತ್ತು. ಸದ್ಯ ಅಲ್ಲಿ ಕುಟುಂಬದ ನಾಲ್ಕು ಮಕ್ಕಳು ಉಳಿದಿದ್ದಾರೆ. ಅವರಲ್ಲಿ ಎಂಟು ವರ್ಷದ ಬಾಲಕ, ಏಳು ವರ್ಷ ಹಾಗೂ ಆರು ವರ್ಷದ ಬಾಲಕಿಯನ್ನು ಸರ್ಕಾರಿ ಆಶ್ರಯ ತಾಣದಲ್ಲಿ ಸ್ಥಳಾಂತರಿಸಲಾಗಿದೆ. ನಾಗಮಣಿ ಮತ್ತು ಆಕೆಯ ಒಂದು ವರ್ಷದ ಮತ್ತೊಬ್ಬ ಮಗಳ ಆರೋಗ್ಯ ತೀರಾ ಹದಗೆಟ್ಟಿದೆ. ಅವರನ್ನು ಪೌಷ್ಟಿಕಾಂಶ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ.