ಕೊರೊನಾ ಬಂದಿದ್ದು ಚೀನಾದಿಂದ ಅಲ್ಲ... ಶಿವನಿಂದ, ನಾನೇ ಶಿವ!
ಚಿತ್ತೂರ್, ಜನವರಿ 27: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿ ಪಟ್ಟಣದ ಹೊರವಲಯದ ಶಿವನಗರದಲ್ಲಿ 'ಸತ್ಯಯುಗ'ದ ನಂಬಿಕೆಯೊಂದಿಗೆ ಇಬ್ಬರು ಹೆಣ್ಣುಮಕ್ಕಳನ್ನು ಬಲಿಕೊಡುವ ಮೂಲಕ ಆಘಾತಕಾರಿ ಕೃತ್ಯ ಎಸಗಿದ್ದ ತಾಯಿ ಅಸಂಬದ್ಧ ಪ್ರಲಾಪಗಳನ್ನು ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮದನಪಲ್ಲಿ ಪಟ್ಟಣದಲ್ಲಿನ ಐಐಟಿ ಟ್ಯಾಲೆಂಟ್ ಶಾಲೆಯ ಪ್ರಿನ್ಸಿಪಾಲ್ ಆಗಿರುವ ವಿ. ಪದ್ಮಜಾ ಅವರನ್ನು ಕೊರೊನಾ ವೈರಸ್ ಪರೀಕ್ಷೆಗಾಗಿ ತಾಲೂಕು ಆಸ್ಪತ್ರೆಗೆ ಕರೆದೊಯ್ದ ಸಂದರ್ಭದಲ್ಲಿ ಅತಿಯಾದ ದೈವ ಭಕ್ತಿ, ಮೂಢನಂಬಿಕೆಯಿಂದ ಆಕೆ ವರ್ತಿಸುತ್ತಿದ್ದ ರೀತಿ ಕಂಡು ಪೊಲೀಸರು ಪೇಚಿಗೀಡಾಗಿದ್ದಾರೆ.
ಪದ್ಮಜಾಳನ್ನು ಕೊರೊನಾ ವೈರಸ್ನ ಆರ್ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಲು ಮೂಗಿನ ಸ್ವಾಬ್ನ ಮಾದರಿಗಳನ್ನು ಸಂಗ್ರಹಿಸಲು ವೈದ್ಯಕೀಯ ಸಿಬ್ಬಂದಿ ಪ್ರಯತ್ನಿಸಿದಾಗ, 'ಕೊರೊನಾ ಚೀನಾದಿಂದ ಬಂದಿಲ್ಲ. ಅದು ಶಿವನಿಂದ ಬಂದಿದೆ. ನಾನೇ ಶಿವ. ಮಾರ್ಚ್ ವೇಳೆಗೆ ಕೊರೊನಾ ಹೋಗಲಿದೆ' ಎಂದು ಚಿತ್ರವಿಚಿತ್ರ ಹೇಳಿಕೆಗಳನ್ನು ನೀಡಿದ್ದಾರೆ.
ಮೂಢನಂಬಿಕೆಗೆ ಇಬ್ಬರು ಹೆಣ್ಣುಮಕ್ಕಳನ್ನು ಬಲಿಕೊಟ್ಟ ಮಾಜಿ ಪ್ರಾಂಶುಪಾಲ ತಂದೆ, ಗೋಲ್ಡ್ ಮೆಡಲಿಸ್ಟ್ ತಾಯಿ
ತಮ್ಮ ಇಬ್ಬರು ಹೆಣ್ಣುಮಕ್ಕಳು ಮತ್ತೆ ಹುಟ್ಟಿಬರುತ್ತಾರೆ ಎಂಬ ಕುರುಡು ನಂಬಿಕೆಯೊಂದಿಗೆ ಬರ್ಬರವಾಗಿ ಹತ್ಯೆ ಮಾಡಿದ್ದ ಪದ್ಮಜಾ ಮತ್ತು ಮದನಪಲ್ಲಿಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಉಪ ಪ್ರಾಂಶುಪಾಲ ಹಾಗೂ ರಸಾಯನ ವಿಜ್ಞಾನ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಆಕೆಯ ಪತಿ ಡಾ. ವಿ. ಪುರುಷೋತ್ತಮ್ ನಾಯ್ಡು ಅವರನ್ನು ಪೊಲೀಸರು ಬಂಧಿಸಿದ್ದರು. ಟೀಚರ್ಸ್ ಕಾಲೋನಿ ಪ್ರದೇಶದಲ್ಲಿನ ತಮ್ಮ ನಿವಾಸದಲ್ಲಿ ಜ. 24ರಂದು ಹೆಣ್ಣುಮಕ್ಕಳಾದ ಅಲೇಖ್ಯಾ (25) ಮತ್ತು ಸಾಯಿ ದಿವ್ಯಾ (22) ಅವರನ್ನು ಕ್ರೂರವಾಗಿ ಕೊಲೆ ಮಾಡಿದ್ದರು. ಮುಂದೆ ಓದಿ.
ಹೇಳಲು ಏನೂ ಇಲ್ಲ ಎಂದ ಅಪ್ಪ
ಮಂಗಳವಾರ ಇಬ್ಬರನ್ನೂ ಬಂಧಿಸಿದ ಕೂಡಲೇ ಕೊರೊನಾ ವೈರಸ್ ಪರೀಕ್ಷೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಮಾದರಿಗಳನ್ನು ನೀಡಲು ಪದ್ಮಜಾ ಪ್ರತಿರೋಧ ತೋರಿಸಿದರೆ, ನಾಯ್ಡು ಯಾವ ತಕರಾರೂ ಇಲ್ಲದೆ ಸುಮ್ಮನಿದ್ದರು. ತಮ್ಮ ಹೆಣ್ಣುಮಕ್ಕಳನ್ನು ಹತ್ಯೆ ಮಾಡಲು ಕಾರಣವಾದ ಘಟನೆಗಳ ಬಗ್ಗೆ ಪ್ರಶ್ನಿಸಿದರೆ, 'ಹೇಳಲು ನನ್ನ ಬಳಿ ಏನೂ ಇಲ್ಲ' ಎಂದಷ್ಟೇ ಪ್ರತಿಕ್ರಿಯೆ ನೀಡಿದ್ದಾರೆ.
ಪುರಾವೆಗಳ ಅಧ್ಯಯನ
ಮಂಗಳವಾರ ಸಂಜೆ ಇಬ್ಬರೂ ಆರೋಪಿಗಳನ್ನು ಸಿವಿಲ್ ನ್ಯಾಯಾಧೀಶರ ನಿವಾಸದಲ್ಲಿ ಹಾಜರುಪಡಿಸಲಾಯಿತು. ಯಾವುದೇ ನೋವು, ಭಯವಿಲ್ಲದೆ ಅವರು ನಡೆದುಕೊಂಡು ಹೋದರು. ಇಬ್ಬರನ್ನೂ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮುನೇಶ್ವರ ಸ್ವಾಮಿ ವಿಗ್ರಹದ ಕೈಯಲ್ಲಿದ್ದ ಖಡ್ಗ ಹೊತ್ತೊಯ್ದ ಭೂಪ!
ಆರೋಪಿ ಪೋಷಕರು ಹಾಗೂ ಅವರನ್ನು ಬಲ್ಲ ಜನರು ನೀಡಿದ ಹೇಳಿಕೆಗಳನ್ನು ಆಧರಿಸಿ ಇಡೀ ಘಟನೆಯ ಚಿತ್ರಣವನ್ನು ಕಂಡುಕೊಳ್ಳಲು ಮದನಪಲ್ಲಿ ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ನಾಯ್ಡು ಅವರ ಮನೆಯಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ಕಾರಣವಾದ ಅಂಶಗಳು, ಅಲ್ಲಿ ದೊರಕಿರುವ ಪುರಾವೆಗಳನ್ನು ಪೊಲೀಸರು ಅಧ್ಯಯನ ಮಾಡುತ್ತಿದ್ದಾರೆ.
ಮೂಢನಂಬಿಕೆಯ ಫಲಿತಾಂಶ
'ಯಾವುದೋ ಅತಿಯಾದ ಧಾರ್ಮಿಕ ನಂಬಿಕೆಯೊಳಗೆ ಇಡೀ ಕುಟುಂಬ ಸೇರಿಕೊಂಡಿತ್ತು. ಈ ಹತ್ಯೆಗಳು ಅದರ ಫಲಿತಾಂಶ' ಎಂದು ಮದನಪಲ್ಲಿ ತಾಲ್ಲೂಕು ಡಿಎಸ್ಪಿ ರವಿ ಮನೋಹರ್ ಆಚಾರಿ ಹೇಳಿದ್ದಾರೆ.
ಕುಟುಂಬದವರ ಸ್ನೇಹಿತರು ಹಾಗೂ ಆಪ್ತರು ಕೂಡ ಇದೇ ರೀತಿಯ ಅಭಿಪ್ರಾಯ ತಿಳಿಸಿದ್ದಾರೆ. ಆದರೆ ಮನೆಯಲ್ಲಿ ನಡೆಯುತ್ತಿದ್ದ ಈ ಅತಿಯಾದ ಮೂಢನಂಬಿಕೆ ಚಟುವಟಿಕೆಗಳಿಗೆ ಪೋಷಕರು ಅಥವಾ ಮಕ್ಕಳು ಕಾರಣವೇ ಎಂಬ ಬಗ್ಗೆ ವಿಭಿನ್ನ ಅಭಿಪ್ರಾಯ ತಿಳಿಸಿದ್ದಾರೆ.
ಆಗಸ್ಟ್ನಲ್ಲಿ ಹೊಸ ಮನೆ
ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿಷ್ಟೇ ಈ ಕುಟುಂಬ ಮೂರು ಅಂತಸ್ತಿನ ಭವ್ಯ ಮನೆಗೆ ಸ್ಥಳಾಂತರಗೊಂಡಿತ್ತು. ಮನೆಯ ಸುತ್ತಲೂ ಧಾರ್ಮಿಕ ಆಚರಣೆಗೆ ಸಂಬಂಧಿಸಿದ ನಿಂಬೆಹಣ್ಣು ಮತ್ತು ಲೋಳೆಸರದ ತುಣುಕುಗಳು ಪೊಲೀಸರಿಗೆ ದೊರೆತಿವೆ. ಇಬ್ಬರೂ ಆರೋಪಿಗಳ ಜತೆ ಕೆಲಸ ಮಾಡಿರುವ ಜನರು ಮತ್ತು ಅವರನ್ನು ಬಲ್ಲವರು, ಇದನ್ನು ನಂಬುವುದು ಸಾಧ್ಯವೇ ಇಲ್ಲ ಎಂದಿದ್ದಾರೆ.
ಘಟನೆ ನಂಬದ ಆಪ್ತರು
'ಮಾಸ್ಟರ್ ಮೈಂಡ್ಸ್ ಶಾಲೆಯ ಪ್ರಿನ್ಸಿಪಾಲ್ ನನಗೆ 25 ವರ್ಷಗಳಿಂದ ಗೊತ್ತು. ಆಕೆ ಹೀಗೆ ಮಾಡಿದ್ದಾರೆ ಎಂದು ನಾನು ನಂಬಲಾರೆ' ಎಂದು ಶಾಲೆಯ ಕೆಲಸಗಾರರೊಬ್ಬರು ತಿಳಿಸಿದ್ದಾರೆ. 'ಅವರು ಬಹಳ ತಿಳಿವಳಿಕೆಯ ಜನರು. ಕೋವಿಡ್ ಬಗ್ಗೆ ಕೋವಿಡ್ ಮತ್ತು ಇತರೆ ವಿಚಾರಗಳ ಬಗ್ಗೆ ಬಹಳ ವಿಚಾರ ತಿಳಿದುಕೊಂಡಿದ್ದರು. ಅವರು ಧಾರ್ಮಿಕ ವ್ಯಕ್ತಿಗಳು. ಆದರೆ ಅದು ಅತಿಯಾಗಿ ಇರಲಿಲ್ಲ' ಎಂದು ಪದ್ಮಜಾರ ಸಂಬಂಧಿಯೊಬ್ಬರು ತಿಳಿಸಿದ್ದಾರೆ.
ಇಬ್ಬರು ಹೆಣ್ಣುಮಕ್ಕಳ ಪೈಕಿ ಒಬ್ಬಾಕೆ ಮಿತಿಮೀರಿದ ಧಾರ್ಮಿಕ ನಂಬಿಕೆ ಹೊಂದಿದ್ದಳು. ಆಕೆ ತಾನೇ ದೇವರು ಎಂದು ಅನೇಕ ಬಾರಿ ಕೂರುತ್ತಿದ್ದಳು. ಆಕೆಯ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ವಿಚಿತ್ರ ಬರಹಗಳನ್ನು ಹಾಕಿಕೊಳ್ಳುತ್ತಿದ್ದಳು ಎಂದು ಅನೇಕರು ತಿಳಿಸಿದ್ದಾರೆ.