ಪಿಂಚಣಿ ಹಣಕ್ಕೆ ಕಿತ್ತಾಟ: ಪತ್ನಿಯನ್ನು ಕೊಂದ 92ರ ವೃದ್ಧ
ಅಮರಾವತಿ, ನವೆಂಬರ್ 3: ಆಂಧ್ರಪ್ರದೇಶ ಪೊಲೀಸರು ಪಿಂಚಣಿ ಹಣದ ಆಸೆಗಾಗಿ ಪತ್ನಿಯನ್ನು ಕೊಲೆ ಮಾಡಿದ ಆರೋಪದಲ್ಲಿ 92 ವರ್ಷದ ವೃದ್ಧನನ್ನು ಬಂಧಿಸಿದ್ದಾರೆ.
2,250 ರೂ. ಮೊತ್ತದ ಪಿಂಚಣಿ ಹಣವನ್ನು ಹಂಚಿಕೊಳ್ಳುವ ವಿಚಾರವಾಗಿ 90 ವರ್ಷದ ಪತ್ನಿ ಅಪ್ರಯಮ್ಮ ಜತೆಗೆ ವಾಗ್ವಾದ ನಡೆಸಿದ್ದ ಎಂ. ಸಾಮ್ಯುಯೆಲ್ ಎಂಬ ವೃದ್ಧ ಆಕೆಯ ಹತ್ಯೆ ಮಾಡಿದ್ದಾನೆ. ಗುಂಟೂರು ಜಿಲ್ಲೆಯ ಅಮೃತಲೂರು ಬ್ಲಾಕ್ನಲ್ಲಿರುವ ಯಲವರ್ರು ಎಂಬ ಹಳ್ಳಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
ಕಲಬುರಗಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯನ ಕೊಲೆ
ಆಂಧ್ರಪ್ರದೇಶ ಸರ್ಕಾರದ ನಿಯಮಾವಳಿಗಳ ಪ್ರಕಾರ ಪ್ರತಿ ಕುಟುಂಬದಲ್ಲಿನ ಒಬ್ಬ ಹಿರಿಯ ವ್ಯಕ್ತಿಯು ವೃದ್ಧಾಪ್ಯ ವೇತನವಾಗಿ ಪಿಂಚಣಿ ಪಡೆದುಕೊಳ್ಳಲು ಅರ್ಹರಾಗಿದ್ದಾರೆ. ಇದರಂತೆ ಸಾಮ್ಯುಯೆಲ್ನ ಪತ್ನಿ ಅಪ್ರಯಮ್ಮ ಅವರ ಹೆಸರನ್ನು ಪ್ರತಿ ತಿಂಗಳ ಮೊದಲ ದಿನ 2,250 ರೂ ಹಣ ಪಡೆದುಕೊಳ್ಳಲು ಸಾಧ್ಯವಾಗುವಂತೆ ನೋಂದಣಿ ಮಾಡಿಸಲಾಗಿತ್ತು.
ಆದರೆ ಸೋಮವಾರ ಸಾಮ್ಯುಯೆಲ್ ಮತ್ತು ಅಪ್ರಯಮ್ಮ ನಡುವೆ ಹಣದ ವಿಚಾರವಾಗಿ ಜಗಳ ನಡೆದಿದೆ. ಇವರಿಬ್ಬರೂ ಕಳೆದ ಹತ್ತು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಆದರೆ ಕಾನೂನಿನ ಪ್ರಕಾರ ವಿಚ್ಛೇದನ ಪಡೆದಿಲ್ಲ.
ನವೆಂಬರ್ 1ರಂದು ಅಪ್ರಯಮ್ಮನನ್ನು ಭೇಟಿ ಮಾಡಿ ತನ್ನ ಪಾಲಿನ ಹಣವನ್ನು ತೆಗೆದುಕೊಳ್ಳಲು ಸಾಮ್ಯುಯೆಲ್ ತೆರಳಿದ್ದ. ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಅಲ್ಲಿಂದ ಕೋಪದಿಂದ ಹೋಗಿದ್ದ ಸಾಮ್ಯುಯೆಲ್, ಮರುದಿನ ಬೆಳಿಗ್ಗೆ ಪುನಃ ಬಂದು ಹೆಂಡತಿಯ ಮುಖಕ್ಕೆ ವಾಕಿಂಗ್ ಸ್ಟಿಕ್ನಿಂದ ಬಾರಿಸಿದ್ದಾನೆ. ಆಕೆ ಸತ್ತಿರುವುದನ್ನು ಖಾತರಿಪಡಿಸಿಕೊಂಡಿದ್ದಾನೆ.
ದಾವಣಗೆರೆ; ಪತ್ನಿ, ಆಕೆಯ ಪ್ರಿಯಕರನನ್ನು ಕೊಂದ ಶಿಕ್ಷಕ ಅರೆಸ್ಟ್
ಕೆಲವು ಸಮಯದ ಬಳಿಕ ಸಾಮ್ಯುಯೆಲ್, ಹೆಂಡತಿಯನ್ನು ಕೊಂದಿರುವುದಾಗಿ ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ತಿಳಿಸಿದ್ದಾನೆ. ಆರಂಭದಲ್ಲಿ ಯಾರೂ ಆತನ ಮಾತನ್ನು ನಂಬಿರಲಿಲ್ಲ. ನೆರೆಯ ಮನೆಯವರು ಅಪ್ರಯಮ್ಮ ರಕ್ತದ ಮಡುವಿನಲ್ಲಿ ಸತ್ತುಬಿದ್ದಿರುವುದನ್ನು ಕಂಡಾಗ ಇಡೀ ಹಳ್ಳಿ ಆಘಾತಕೊಂಡಿದೆ. ಮಕ್ಕಳು ನೀಡಿದ ದೂರಿನ ಅನ್ವಯ ಸಾಮ್ಯುಯೆಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಲಾಗಿದೆ.