ನ್ಯಾಯಾಂಗ ನಿಂದನೆ ಪ್ರಕರಣ: ನಾಲ್ವರು ಐಎಎಸ್, ಓರ್ವ ನಿವೃತ್ತ ಅಧಿಕಾರಿಗೆ ಜೈಲು ಶಿಕ್ಷೆ
ಅಮರಾವತಿ, ಸೆಪ್ಟೆಂಬರ್ 3: ಫೆಬ್ರವರಿ 10, 2017ರ ನ್ಯಾಯಾಲಯದ ಆದೇಶಕ್ಕೆ "ಉದ್ದೇಶಪೂರ್ವಕ ಅಸಹಕಾರ' ಆರೋಪದಲ್ಲಿ ತಪ್ಪಿತಸ್ಥರೆಂದು ತಿಳಿಸಿದ ಆಂಧ್ರಪ್ರದೇಶ ಹೈಕೋರ್ಟ್ ಗುರುವಾರ ನಾಲ್ವರು ಐಎಎಸ್ ಅಧಿಕಾರಿಗಳಿಗೆ ಮತ್ತು ಒಬ್ಬ ನಿವೃತ್ತ ಅಧಿಕಾರಿಗೆ ಜೈಲು ಶಿಕ್ಷೆ ವಿಧಿಸಿದೆ.
ಮುಖ್ಯ ಕಾರ್ಯದರ್ಶಿ ಆದಿತ್ಯ ನಾಥ್ ದಾಸ್ ಸೇರಿದಂತೆ ಇತರ ಮೂವರು ಐಎಎಸ್ ಅಧಿಕಾರಿಗಳನ್ನು ಈ ಪ್ರಕರಣದಲ್ಲಿ ಬಿಡುಗಡೆ ಮಾಡಲಾಗಿದೆ. ಏಕೆಂದರೆ ಅವರ ಮೇಲಿನ ಆರೋಪವನ್ನು ವಜಾಗೊಳಿಸಲಾಗಿದೆ.
ಶಿಕ್ಷೆಗೊಳಗಾದ ಐಎಎಸ್ ಅಧಿಕಾರಿಗಳಲ್ಲಿ ಪ್ರಧಾನ ಹಣಕಾಸು ಕಾರ್ಯದರ್ಶಿ ಶಂಶೇರ್ ಸಿಂಗ್ ರಾವತ್, ಮುಖ್ಯಮಂತ್ರಿಯವರ ಹೆಚ್ಚುವರಿ ಕಾರ್ಯದರ್ಶಿ ರೇವು ಮುತ್ಯಾಲ ರಾಜು, ಎಸ್ಪಿಎಸ್ ನೆಲ್ಲೂರು ಜಿಲ್ಲಾಧಿಕಾರಿ ಕೆವಿಎನ್ ಚಕ್ರಧರ ಬಾಬು ಮತ್ತು ಮಾಜಿ ಕಲೆಕ್ಟರ್ ಎಂ. ವಿ. ಶೇಷಗಿರಿ ಬಾಬು ಸೇರಿದ್ದಾರೆ.
ಮುತ್ಯಾಲ ರಾಜು ಈ ಹಿಂದೆ ಎಸ್ಪಿಎಸ್ ನೆಲ್ಲೂರು ಜಿಲ್ಲೆಯ ಕಲೆಕ್ಟರ್ ಆಗಿಯೂ ಸೇವೆ ಸಲ್ಲಿಸಿದ್ದರು. 2017 ರಲ್ಲಿ ಆಗಿನ ಪ್ರಧಾನ ಕಾರ್ಯದರ್ಶಿ (ಕಂದಾಯ) ಆಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಮನಮೋಹನ್ ಸಿಂಗ್ ಕೂಡ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದಾರೆ.
ಹೈಕೋರ್ಟ್ ನ್ಯಾಯಮೂರ್ತಿ ಬಟ್ಟು ದೇವಾನಂದ್ ಎಸ್ಪಿಎಸ್ ನೆಲ್ಲೂರು ಜಿಲ್ಲೆಯ ಕೃಷಿಕ ತಲ್ಲಪಕ ಸಾವಿತ್ರಮ್ಮ ಸಲ್ಲಿಸಿದ ನ್ಯಾಯಾಂಗ ನಿಂದನೆ ಅರ್ಜಿಯ ಮೇಲೆ ಆದೇಶವನ್ನು ಪ್ರಕಟಿಸಿದರು. ರಾವತ್ ಮತ್ತು ಸಿಂಗ್ರಿಗೆ ಒಂದು ತಿಂಗಳ ಜೈಲು ಶಿಕ್ಷೆ ಹಾಗೂ ಇತರರಿಗೆ ಎರಡು ವಾರಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಪ್ರತಿಯೊಬ್ಬರಿಗೂ 1,000 ರೂ. ದಂಡವನ್ನು ವಿಧಿಸಲಾಗಿದೆ.
ಅರ್ಜಿದಾರರ ವಕೀಲ ಸಿ. ವಾಣಿ ರೆಡ್ಡಿ ಪ್ರಕಾರ, ನ್ಯಾಯಾಧೀಶರಾದ ದೇವಾನಂದ್, ಶಿಕ್ಷೆಗೊಳಗಾದವರಿಗೆ ಮೇಲ್ಮನವಿ ಸಲ್ಲಿಸಲು ಒಂದು ತಿಂಗಳ ಕಾಲ ಶಿಕ್ಷೆಯನ್ನು ಸ್ಥಗಿತಗೊಳಿಸುವಂತೆ ಆದೇಶಿಸಿದರು.
ತಲ್ಲಪಕ ಸಾವಿತ್ರಮ್ಮ 2017ರಲ್ಲಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಮೂರು ಎಕರೆ ಅಳತೆಯ ಭೂಮಿಯನ್ನು ಕಂದಾಯ ಅಧಿಕಾರಿಗಳು ಯಾವುದೇ ಸೂಚನೆ ಅಥವಾ ಪರಿಹಾರ ಪಾವತಿಯಿಲ್ಲದೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಂಸ್ಥೆಗೆ ಮಂಜೂರು ಮಾಡಿದ್ದಾರೆ.
ಡಿಸೆಂಬರ್ 2016ರಲ್ಲಿ ಕಂದಾಯ ಅಧಿಕಾರಿಗಳು ಭೂಮಿಗೆ ಪರಿಹಾರವನ್ನು ನೀಡುವುದಾಗಿ ಭರವಸೆ ನೀಡಿದರು ಮತ್ತು ಅದನ್ನು ಲೋಕಾಯುಕ್ತಕ್ಕೆ ವರದಿ ಮಾಡಲಾಯಿತು ಎಂದು ಅವರು ಹೇಳಿದರು.
ಹೈಕೋರ್ಟ್ನ ನ್ಯಾಯಮೂರ್ತಿ ಎ.ರಾಜಶೇಖರ್ ರೆಡ್ಡಿ, ಫೆಬ್ರವರಿ 10, 2017 ರಂದು ಅರ್ಜಿದಾರರ ಪರವಾಗಿ ತೀರ್ಪು ನೀಡಿದ್ದರು ಮತ್ತು ಮೂರು ತಿಂಗಳಲ್ಲಿ ಆಕೆಗೆ ಪರಿಹಾರವನ್ನು ಪಾವತಿಸುವಂತೆ ಸಂಬಂಧಿಸಿದ ಕಂದಾಯ ಅಧಿಕಾರಿಗಳಿಗೆ ಸೂಚಿಸಿದ್ದರು.
2018ರಲ್ಲಿ ಕಂದಾಯ ಅಧಿಕಾರಿಗಳು ನ್ಯಾಯಾಲಯದ ಆದೇಶವನ್ನು ಅನುಷ್ಠಾನಗೊಳಿಸದ ಕಾರಣ ತಲ್ಲಪಕ ಸಾವಿತ್ರಮ್ಮ ಆಂಧ್ರಪ್ರದೇಶ ಹೈಕೋರ್ಟ್ನಲ್ಲಿ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಿದ್ದಾರೆ. ಈ ವರ್ಷ ಜೂನ್ನಲ್ಲಿ ನ್ಯಾಯಮೂರ್ತಿ ದೇವಾನಂದ್ ಅವಹೇಳನ ಪ್ರಕರಣವನ್ನು ಆಲಿಸುವಾಗ, ದಾಖಲೆಗಳಲ್ಲಿ ಲಭ್ಯವಿರುವ ವಸ್ತುಗಳಿಂದ ಕಂದಾಯ ವಿಭಾಗೀಯ ಅಧಿಕಾರಿಯು ಜುಲೈ 6, 2020 ರಂದು ಖಾತೆಗಳಿಗೆ ಬಿಲ್ಗಳನ್ನು ಸಲ್ಲಿಸಿದ್ದನ್ನು ಗಮನಿಸಿದರು. ಆದರೆ ಅವುಗಳನ್ನು ಮಾರ್ಚ್ 30, 2021ರವರೆಗೆ ತೆರವುಗೊಳಿಸಲಾಗಿರಲಿಲ್ಲ.
ಯಾಯಾಲಯದ ಅಭಿಪ್ರಾಯದಲ್ಲಿ ಬಿಲ್ಗಳನ್ನು ತೆರವುಗೊಳಿಸಲು ಮತ್ತು ಅರ್ಜಿದಾರರಿಗೆ ಪರಿಹಾರವನ್ನು ಪಾವತಿಸಲು ಪ್ರಧಾನ ಲೆಕ್ಕಾಧಿಕಾರಿಗಳ ಕಚೇರಿಯಲ್ಲಿ ಸುಮಾರು ಎಂಟು ತಿಂಗಳು ವಿಳಂಬವಾಯಿತು ಎಂದು ನ್ಯಾಯಾಧೀಶರು ಗಮನಿಸಿದರು. ಆಗಸ್ಟ್ನಲ್ಲಿ ನ್ಯಾಯಾಧೀಶರು ಪ್ರತಿವಾದಿಗಳ ವಾದಗಳನ್ನು ಆಲಿಸಿದ ನಂತರ ತೀರ್ಪನ್ನು ಕಾಯ್ದಿರಿಸಿದ್ದರು. ನಿನ್ನೆ (ಗುರುವಾರ) ಶಿಕ್ಷೆ ವಿಧಿಸಿ ತೀರ್ಪು ನೀಡಿದರು.