ವಿಧಾನ ಪರಿಷತ್ ರದ್ದು: ಜಗನ್ ಸರ್ಕಾರದ ಮಹತ್ವದ ನಿರ್ಣಯ
Recommended Video
ಅಮರಾವತಿ, ಜನವರಿ 27: ವಿಧಾನಪರಿಷತ್ಅನ್ನು ರದ್ದುಗೊಳಿಸುವ ಮಹತ್ವದ ನಿರ್ಧಾರಕ್ಕೆ ಆಂಧ್ರಪ್ರದೇಶ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಪರಿಷತ್ನಲ್ಲಿ ಕಳೆದ ಎರಡು ದಿನ ನಡೆದ ಘಟನಾವಳಿಗಳ ಕುರಿತು ವಿಧಾನಸಭೆಯಲ್ಲಿ ಗುರುವಾರ ಚರ್ಚಿಸಲಾಗಿತ್ತು. ಪರಿಷತ್ ಅಸ್ತಿತ್ವವನ್ನು ಮುಂದುವರಿಸುವ ಅಗತ್ಯವಿದೆಯೇ ಅಥವಾ ಅದನ್ನು ರದ್ದುಗೊಳಿಸಬೇಕೇ ಎಂಬ ಬಗ್ಗೆ ಸೋಮವಾರ ಚರ್ಚೆ ನಡೆಸಲು ಅವಕಾಶ ನೀಡುವಂತೆ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸ್ಪೀಕರ್ಗೆ ಸೂಚಿಸಿದ್ದರು.
ಆಂಧ್ರ ಸಿಎಂ ಜಗನ್ ದ್ವೇಷದ ನಡೆಗೆ ಚಂದ್ರಬಾಬು ನಾಯ್ಡು ಹೈರಾಣ
ವಿಧಾನಪರಿಷತ್ಅನ್ನು ರದ್ದುಗೊಳಿಸುವ ಸರ್ಕಾರದ ನಿರ್ಧಾರವನ್ನು ಖಂಡಿಸಿರುವ ಟಿಡಿಪಿ ಸಂಸದ ಕನಕಮೇದಲ ರವೀಂದ್ರ ಕುಮಾರ್, ಆಂಧ್ರಪ್ರದೇಶ ಸರ್ಕಾರವು ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುತ್ತದೆ ಎಂದು ಭಾವಿಸಿದ್ದೆವು. ಆದರೆ ಅದು ಅಸಹಜ ನಿರ್ಧಾರವನ್ನು ತೆಗೆದುಕೊಂಡಿದೆ ಎಂದಿದ್ದಾರೆ.
ಪರಿಷತ್ ರದ್ದು ನಿರ್ಣಯಕ್ಕೆ ಕಾರಣವೇನು?
ಆಂಧ್ರಪ್ರದೇಶಕ್ಕೆ ಅಮರಾವತಿಯ ಜತೆಗೆ ವಿಶಾಖಪಟ್ಟಣ ಮತ್ತು ಕರ್ನೂಲ್ಗಳನ್ನೂ ರಾಜಧಾನಿಗಳನ್ನಾಗಿ ಮಾಡಿ ಒಟ್ಟು ಮೂರು ರಾಜಧಾನಿಗಳನ್ನು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಘೋಷಿಸಿದ್ದರು. ಈ ನಿರ್ಧಾರಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ ದೊರಕಿತ್ತು. ಆದರೆ ಇದಕ್ಕೆ ವಿಧಾನ ಪರಿಷತ್ ಅಡ್ಡಗಾಲು ಹಾಕಿತ್ತು. ಮೂರು ರಾಜಧಾನಿ ಮಸೂದೆಯನ್ನು ಪರಿಷತ್ ಅಧ್ಯಕ್ಷರು ತಮ್ಮ ವಿವೇಚನಾಧಿಕಾರ ಬಳಸಿಕೊಂಡು ಆಯ್ಕೆ ಸಮಿತಿಗೆ ವರ್ಗಾಯಿಸಲು ಶಿಫಾರಸು ಮಾಡಿದ್ದರು. ಇದರ ವಿರುದ್ಧ ಸಿಡಿದೆದ್ದಿರುವ ಜಗನ್, ಪರಿಷತ್ಅನ್ನೇ ತೆಗೆದುಹಾಕುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಪರಿಷತ್ನಲ್ಲಿ ಸಂಚು- ಸಚಿವ
'ಎರಡು ಮಸೂದೆಗಳ ವಿಚಾರದಲ್ಲಿ ಸಂಚು ನಡೆದಿದೆ. ಆಂಧ್ರಪ್ರದೇಶ ಏಕೀಕರಣ ಮತ್ತು ಎಲ್ಲ ಪ್ರದೇಶಗಳ ಸಮಗ್ರ ಅಭಿವೃದ್ಧಿ ಮಸೂದೆ 2020 ಮತ್ತು ಆಂಧ್ರಪ್ರದೇಶ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಸಿಆರ್ಡಿಎ) ಕಾಯ್ದೆ (ರದ್ದು) ಮಸೂದೆಗಳನ್ನು ಪರಿಷತ್ ಅಧ್ಯಕ್ಷರು ಬುಧವಾರ ಆಯ್ಕೆ ಸಮಿತಿಗೆ ಕಳುಹಿಸಿದ್ದಾರೆ' ಎಂದು ಹಣಕಾಸು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬುಗ್ಗನ ರಾಜೇಂದ್ರನಾಥ್ ಹೇಳಿದ್ದಾರೆ.
ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿ, ಜಗನ್ ಮಹತ್ವ ಘೋಷಣೆ
ವಿಧಾನಸಭೆಯಲ್ಲಿ ಚರ್ಚೆ
ಪರಿಷತ್ ಅಧ್ಯಕ್ಷರ ನಿರ್ಧಾರದ ವಿರುದ್ಧ ಅಸಮಾಧಾನಗೊಂಡಿದ್ದ ಸರ್ಕಾರ, ಸೋಮವಾರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೇಲ್ಮನೆಯನ್ನು ರದ್ದುಗೊಳಿಸುವ ನಿರ್ಣಯ ಅಂಗೀಕರಿಸಿದೆ. ಈ ನಿರ್ಣಯವನ್ನು ಸೋಮವಾರವೇ ವಿಧಾನಸಭೆಯಲ್ಲಿ ಚರ್ಚೆಗೆ ಒಳಪಡಿಸಲಾಗುತ್ತಿದೆ.
ಪರಿಷತ್ನಿಂದ ಅನಗತ್ಯ ವೆಚ್ಚ
ಪರಿಷತ್ ರದ್ದತಿಯ ಕುರಿತು ಜಗನ್ ಅವರು ಗುರುವಾರವೇ ಸುಳಿವು ನೀಡಿದ್ದರು. ಸೋಮವಾರ ವಿಧಾನಸಭೆಯಲ್ಲಿ ಚರ್ಚೆಯ ಬಳಿಕ ವಿಧಾನ ಪರಿಷತ್ ರದ್ದುಗೊಳಿಸುವ ಮಸೂದೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ಹೆಚ್ಚಿನ ಸರ್ಕಾರಗಳಲ್ಲಿ ಪರಿಷತ್ ರದ್ದುಗೊಂಡಿದ್ದು, ಆರು ರಾಜ್ಯಗಳಲ್ಲಿ ಮಾತ್ರವೇ ಪರಿಷತ್ ಕಾರ್ಯನಿರ್ವಹಿಸುತ್ತಿವೆ. ಪರಿಷತ್ ನಿರ್ವಹಣೆಗೆ ಪ್ರತಿ ವರ್ಷ ಸುಮಾರು 60 ಕೋಟಿ ವ್ಯಯಿಸಲಾಗುತ್ತಿದೆ. ವಿಧಾನಸಭೆಯಲ್ಲಿ ಅಂಗೀಕಾರವಾಗುವ ಮಸೂದೆಗಳಿಗೆ ಅಡ್ಡಗಾಲು ಹಾಕುತ್ತಾ ಇದ್ದರೆ ಐದು ವರ್ಷದ ಪರಿಷತ್ ಅವಧಿಗೆ 300 ಕೋಟಿ ರೂ ವ್ಯರ್ಥವಾಗುತ್ತದೆ ಎಂದು ಜಗನ್ ಹೇಳಿದ್ದರು.