ಮಕ್ಕಳಲ್ಲಿ ಹೆಚ್ಚುತ್ತಿದೆ ಕೊರೊನಾ ಪ್ರಕರಣ: ಆಂಧ್ರ ಸರ್ಕಾರಕ್ಕೆ ಹೆಚ್ಚಾದ ಆತಂಕ
ಅಮರಾವತಿ, ಜೂನ್ 8: ಕೊರೊನಾವೈರಸ್ ಅತ್ಯಂತ ಕೆಟ್ಟ ಪರಿಣಾಮವನ್ನು ಬೀರಿದ ರಾಜ್ಯಗಳಲ್ಲಿ ಆಂಧ್ರಪ್ರದೇಶ ಕೂಡ ಒಂದು. ಈಗ ನಿತ್ಯವೂ ದಾಖಲಾಗುವ ಪ್ರಕರಣಗಳ ಸಂಖ್ಯೆಯಲ್ಲಿ ಹಾಗೂ ಪಾಸಿಟಿವಿಟಿ ಪ್ರಮಾಣದಲ್ಲಿ ಸತತವಾಗಿ ಇಳಿಕೆಯಾಗುತ್ತಿದೆ. ಆದರೆ ಆಂಧ್ರಪ್ರದೇಶ ಸರ್ಕಾರಕ್ಕೆ ಈಗ ಹೊಸ ಆತಂಕ ಆರಂಭವಾಗಿದೆ. ಕಳೆದ ಕೆಲ ದಿನಗಳಿಂದ ಮಕ್ಕಳಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದೆ.
ಚಿತ್ತೂರು ಜಿಲ್ಲೆಯ ತಿರುಪತಿಯ ರುಯಾ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ನಾಲ್ಕು ವರ್ಷದಿಂದ ಹತ್ತು ವರ್ಷದ 9 ಮಕ್ಕಳು ಕೊರೊನಾ ವೈರಸ್ನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿರುವುದು ಆಡಳಿತವನ್ನು ಎಚ್ಚರಿಸುವಂತೆ ಮಾಡಿದೆ. 9 ಮಕ್ಕಳ ಪೈಕಿ ಮೂವರು ಐಸಿಯುನಲ್ಲಿದ್ದು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ಎಲ್ಲಾ ವಯಸ್ಕರಿಗೂ ಲಸಿಕೆ ನೀಡಿದ ದೇಶದ ಮೊದಲ ಹಳ್ಳಿ ಇದು...
ಚಿತ್ತೂರು ಜಿಲ್ಲೆ ಮೊದಲ ಹಾಗೂ ಎರಡನೇ ಅಲೆಯಲ್ಲಿ ಕೊರೊನಾವೈರಸ್ನಿಂದ ಸಾಕಷ್ಟು ನಲುಗಿತ್ತು. ರಾಯಲಸೀಮೆ ಭಾಗದಲ್ಲಿ ಎಸ್ವಿಆರ್ ರುಯಾ ಆಸ್ಪತ್ರೆ ದೊಡ್ಡ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗಳಲ್ಲಿ ಒಂದಾಗಿದೆ. ಕೊರೊನಾವೈರಸ್ನ ಈ ಸಂದರ್ಭದಲ್ಲಿ ಕೊರೊನಾ ರೋಗಿಗಳ ಆರೈಕೆಗೆ ಇಲ್ಲಿ ವಿಶೇಷ ವಾರ್ಡ್ಅನ್ನು ತೆರೆದಿದೆ.
ಈ ಮಧ್ಯೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ಮೋಹನ್ ರೆಡ್ಡಿ ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಉಂಟಾಗಬಹುದಾದ ಪರಿಣಾಮ ತೀವ್ರತೆಯ ಬಗ್ಗೆ ಪೋಷಕರಲ್ಲಿ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಮಕ್ಕಳ ರೋಗಲಕ್ಷಣಗಳನ್ನು ಗುರುತಿಸಲು ಆಶಾ ಮತ್ತು ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಲು ಆಂಧ್ರಪ್ರದೇಶ ಸರ್ಕಾರ ನಿರ್ಧಾರವನ್ನು ತೆಗೆದುಕೊಂಡಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸ್ಥಳೀಯ ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಚಿಕಿತ್ಸೆಯನ್ನು ನೀಡಲು ಬೇಕಾದ ಸಿದ್ಧತೆಗಳನ್ನು ಆಂಧ್ರಪ್ರದೇಶ ಸರ್ಕಾರ ಆರಂಭಿಸಿದೆ. ವಿಶಾಖಪಟ್ಟಣಂ, ತಿರುಪತಿ ಹಾಗೂ ಕೃಷ್ಣಾ-ಗುಂಟೂರು ಭಾಗದಲ್ಲಿ ಮೂರು ಮಕ್ಕಳ ಆರೈಕೆ ಕೇಂದ್ರಗಳನ್ನು ಈಗ ಸ್ಥಾಪನೆ ಮಾಡಲಾಗುತ್ತಿದೆ.
ಸದ್ಯ ಆಂಧ್ರಪ್ರದೇಶದಲ್ಲಿ ಕೊರೊನಾ ವೈರಸ್ನ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಕಳೆದ ಮೇ 16ರಂದು 25.56 ಶೇಕಡಾ ಇದ್ದ ಪಾಸಿಟಿವಿಟಿ ದರ ಈಗ 10.73ಕ್ಕೆ ಇಳಿಕೆಯಾಗಿದೆ. ಮೇ 17 ರಂದು 2.11 ಲಕ್ಷ ಇದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ ಈಗ 1.23 ಲಕ್ಷಕ್ಕೆ ಇಳಿಕೆಯಾಗಿದೆ. ಚೇತರಿಕೆ ಕಂಡವರ ಪ್ರಮಾಣ 92.33ಕ್ಕೆ ಏರಿಕೆಯಾಗಿದೆ. ಈ ಮಧ್ಯೆ ಆಂಧ್ರಪ್ರದೇಶದಲ್ಲಿ 1551 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿದ್ದು 98 ಜನರು ಮೃತಪಟ್ಟಿದ್ದರೆ ಉಳಿದವರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ.