ಸಿಎಂ ಜಗನ್ಗೆ ಹಿನ್ನಡೆ, ಟಿಟಿಡಿ ಸದಸ್ಯರ ನೇಮಕಾತಿಗೆ ಹೈಕೋರ್ಟ್ ತಡೆ
ಅಮರಾವತಿ, ಸೆಪ್ಟೆಂಬರ್ 23: ದೇಶದ ಶ್ರೀಮಂತ ದೇವಾಲಯ ತಿರುಮಲ ತಿರುಪತಿ ತಿಮ್ಮಪ್ಪ ದೇವಸ್ಥಾನಂ (ಟಿಟಿಡಿ) ಹೊಸ ಸಮಿತಿಗೆ ಸದಸ್ಯರ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಆಂಧ್ರಪ್ರದೇಶ ಹೈಕೋರ್ಟ್ ಮಾನ್ಯ ಮಾಡಿದ್ದು, ಸದಸ್ಯರ ನೇಮಕಕ್ಕೆ ತಡೆಯಾಜ್ಞೆ ನೀಡಿದೆ.
ಭಾರತೀಯ ಜನತಾ ಪಕ್ಷದ ಮುಖಂಡ ಜಿ ಭಾನುಪ್ರಕಾಶ್ ರೆಡ್ಡಿ, ತೆಲುಗುದೇಶಂ ಪಾರ್ಟಿ ಮುಖಂಡ ಎಂ ಉಮಾ ಮಹೇಶ್ವರ ನಾಯ್ದು, ಹಿಂದು ಜನಸಕ್ತಿ ಸಂಕ್ಷೇಮ ಸಂಘಂ ಸ್ಥಾಪಕ ಕೆ ಲಲಿತ್ ಕುಮಾರ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಮಧ್ಯಂತರ ಆದೇಶ ನೀಡಿ, ಜಗನ್ ಮೋಹನ್ ರೆಡ್ಡಿ ಸರ್ಕಾರ ನೀಡಿದ್ದ ಆದೇಶಕ್ಕೆ ತಡೆ ನೀಡಿದೆ. ಸರ್ಕಾರಿ ಆದೇಶ ಸಂಖ್ಯೆ 568ರಂತೆ 50 ಮಂದಿ ಆಹ್ವಾನಿತ ಸದಸ್ಯರು ಹಾಗೂ ಆದೇಶ ಸಂಖ್ಯೆ 569ರಂತೆ ನೇಮಿಸಲಾಗಿರುವ ಎಕ್ಸ್ ಆಫಿಸಿಯೋ ಸದಸ್ಯರ ನೇಮಕಕ್ಕೂ ತಡೆ ನೀಡಲಾಗಿದೆ.
ಟಿಟಿಡಿ ಹೊಸ ಸಮಿತಿಗೆ ಕರ್ನಾಟಕದಿಂದ ಶಾಸಕ ವಿಶ್ವನಾಥ್ ಸೇರ್ಪಡೆ
''ಟಿಟಿಡಿ ನಿಯಮಾವಳಿಯನ್ನು ಗಾಳಿಗೆ ತೂರಿ ಅಕ್ರಮವಾಗಿ ನೇಮಕಾತಿ ನಡೆಸಲಾಗಿದೆ, ಆಂಧ್ರಪ್ರದೇಶ ಧಾರ್ಮಿಕ ದತ್ತಿ ಹಾಗೂ ಹಿಂದೂ ಧಾರ್ಮಿಕ ಸಂಸ್ಥೆ ಹಾಗೂ ದತ್ತಿ ಕಾಯ್ದೆ 1987ರ ಸೆಕ್ಷನ್ 96ರ ಸ್ಪಷ್ಟ ಉಲ್ಲಂಘನೆಯಾಗಿದೆ, ಸಂವಿಧಾನದ ಪರಿಚ್ಛೇದ 26ರ ಉಲ್ಲಂಘನೆ ಮಾಡಲಾಗಿದೆ'' ಎಂದು ಮಾಜಿ ಟಿಟಿಡಿ ಸದಸ್ಯ ಭಾನುಪ್ರಕಾಶ್ ರೆಡ್ಡಿ ಹೇಳಿದ್ದಾರೆ.
1987ರ ಹಿಂದು ಧಾರ್ಮಿಕ ಸಂಸ್ಥೆ ಹಾಗೂ ಮುಜರಾಯಿ ಕಾಯ್ದೆ ಅನ್ವಯ ಟಿಟಿಡಿ ಚೇರ್ಮನ್ ಆಗಿ ಸುಬ್ಬಾರೆಡ್ಡಿರನ್ನು ನೇಮಿಸಲಾಗಿದೆ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜಿ ವಾಣಿ ಮೋಹನ್ ಅವರು ಆದೇಶ ಹೊರಡಿಸಿದ್ದಾರೆ. ಶೀಘ್ರದಲ್ಲೇ ಟಿಟಿಡಿ ಹೊಸ ಸಮಿತಿಯನ್ನು ಪುನರ್ ರಚನೆ ಮಾಡಲಾಗಿದೆ.
ಮಾಜಿ ಸಂಸದ ಸುಬ್ಬಾರೆಡ್ಡಿ ಅವರು ಎರಡು ವರ್ಷಗಳ ಅವಧಿ ಟಿಟಿಡಿ ಚೇರ್ಮನ್ ಆಗಿ ಕಾರ್ಯ ನಿರ್ವಹಿಸಿ ಜೂನ್ ತಿಂಗಳು ಸ್ಥಾನದಿಂದ ಕೆಳಗಿಳಿಯಲು ಮುಂದಾಗಿದ್ದರು. ಮುಂದಿನ ವರ್ಷ ರಾಜ್ಯಸಭೆಗೆ ಅಥವಾ ವಿಧಾನಪರಿಷತ್ ಮೂಲಕ ಆಯ್ಕೆ ಮಾಡಿ, ಸಂಪುಟಕ್ಕೆ ಸೇರಿಸಿಕೊಳ್ಳಲು ಜಗನ್ ಮುಂದಾಗಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಮತ್ತೊಂದು ಅವಧಿಗೆ ಟಿಟಿಡಿ ಚೇರ್ಮನ್ ಆಗಿ ನೇಮಿಸಿದ್ದಾರೆ.
ತೆಲಂಗಾಣದಿಂದ ನಾಲ್ವರು, ತಮಿಳುನಾಡಿನಿಂದ ಮೂವರು, ಕರ್ನಾಟಕದಿಂದ ಇಬ್ಬರು, ಪಶ್ಚಿಮ ಬಂಗಾಳ ಹಾಗೂ ಮಹಾರಾಷ್ಟ್ರದಿಂದ ತಲಾ ಒಬ್ಬರು ಸಮಿತಿಗೆ ಆಯ್ಕೆಯಾಗಿದ್ದಾರೆ. ಮಿಕ್ಕ ಸದಸ್ಯರೆಲ್ಲರೂ ಆಂಧ್ರಪ್ರದೇಶದವರಾಗಿದ್ದಾರೆ. ವೈಎಸ್ಸಾರ್ ಕಾಂಗ್ರೆಸ್ ಶಾಸಕರಾದ ಭೂಮನಾ ಕರುಣಾಕರ್ ರೆಡ್ಡಿ ಪದನಿಮಿತ್ತ ಸದಸ್ಯ ಹಾಗೂ ಚೆವಿರೆಡ್ಡಿ ಭಾಕರ್ ರೆಡ್ಡಿ ಎಕ್ಸ್ ಆಫಿಸಿಯೋ ಸದಸ್ಯರಾಗಿ ಮುಂದುವರೆಯಲಿದ್ದಾರೆ.
ಉದ್ಯಮಿ ಮೈ ಹೋಂ ಗ್ರೂಪಿನ ಜೂಪಲ್ಲಿ ರಾಮೇಶ್ವರ ರಾವ್, ಹೆಟೆರೋ ಗ್ರೂಪಿನ ಪಾರ್ಥಸಾರಥಿ ರೆಡ್ಡಿ, ಮುರಂಸೆಟ್ಟಿ ರಾಮುಲು, ವೆಮಿರೆಡ್ಡಿ ಪ್ರಶಾಂತಿ ರೆಡ್ಡಿ, ರಾಜೇಶ್ ಶರ್ಮ ಹಾಗೂ ಇಂಡಿಯಾ ಸಿಮೆಂಟ್ಸ್ ಮುಖ್ಯಸ್ಥ ಎನ್ ಶ್ರೀನಿವಾಸನ್ ಮತ್ತೊಂದು ಅವಧಿಗೆ ಮುಂದುವರೆಯಲಿದ್ದಾರೆ. ಮಿಕ್ಕಂತೆ ಉದ್ಯಮಿ ಮಾರುತಿ, ಆಡಿಟರ್ ಸನತ್, ಎಂಎಸ್ಎಸ್ ಲ್ಯಾಬ್ಸ್ ಎಂಡಿ ಮನ್ನೆ ಜೀವನ್ ರೆಡ್ಡಿ, ಮಹಾರಾಷ್ಟ್ರದ ಸಿಎಂ ಠಾಕ್ರೆ ಅವರ ಶಿಫಾರಸಿನ ಮೇರೆಗೆ, ಶಿವಸೇನಾ ಕಾರ್ಯದರ್ಶಿಯಾಗಿರುವ ಮಿಲಿಂದ್ ಅವರನ್ನು ಟಿಟಿಡಿ ಮಂಡಳಿಯಲ್ಲಿ ಅಂತಿಮಗೊಳಿಸಲಾಗಿದೆ.
ತಮಿಳುನಾಡಿನ ಸಿಎಂ ಸ್ಟಾಲಿನ್ ಶಿಫಾರಸಿನ ಮೇರೆಗೆ ಶಾಸಕರಾದ ನಂದ ಕುಮಾರ್, ಕನ್ನಯ್ಯ, ಜೀವನ್ ರೆಡ್ಡಿ, ಸೌರಭ್ ಮತ್ತು ರಾಜೇಶ್ ಶರ್ಮಾ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಉಳಿದ 50 ಜನರನ್ನು ವಿಶೇಷ ಆಹ್ವಾನಿತರಾಗಿ ಸರ್ಕಾರ ವಿಸ್ತರಿಸುತ್ತದೆ. ಪುದುಚೇರಿಯ ಮಾಜಿ ಸಚಿವ ಮಲ್ಲಾಡಿ ಕೃಷ್ಣರಾವ್, ಪೊಕಲಾ ಅಶೋಕ್ ಕುಮಾರ್, ಗೊರ್ಲಾ ಬಾಬು ರಾವ್, ಬುರಾ ಮಧುಸೂದನ್, ಕತ್ಸನಿ ರಾಮಭೂಪಾಲ್ ರೆಡ್ಡಿ, ಕಲ್ವಕುರ್ತಿ ವಿದ್ಯಾಸಾಗರ್ ರಾವ್, ಲಕ್ಷ್ಮಿನಾರಾಯಣ, ಶಾಸಕ ನಂದ ಕುಮಾರ್, ಕನ್ನಯ್ಯ(ತಮಿಳುನಾಡು).