ಬಿಗ್ಬಾಸ್ ಶೋ ಬಗ್ಗೆ ಹೈಕೋರ್ಟ್ ಹೇಳಿದ್ದೇನು?
ಅಮರಾವತಿ, ಮೇ 05: ಟಿವಿಗಳಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋನಲ್ಲಿ ಸಾಕಷ್ಟು ಜನಪ್ರಿಯವಾಗಿರುವುದು ಬಿಗ್ಬಾಸ್. ಅದರಲ್ಲೂ ತೆಲಗು ಭಾಷೆಯ ಬಿಗ್ಬಾಸ್ ಶೋ ವಿಚಾರ ಹೈಕೋರ್ಟ್ ಮೆಟ್ಟಿಲೇರಿದೆ.
ಈ ಶೋನಲ್ಲಿ ಹಿಂಸಾಚಾರ ಹಾಗೂ ಅಶ್ಲೀಲ ಬಿಟ್ಟರೆ ಹೊರತಾಗಿ ಬೇರೆ ಏನು ಇದೆ? ಎಂದು ಆಂಧ್ರಪ್ರದೇಶದ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಈ ಮೂಲಕ ಜನಪ್ರಿಯ ಕಾರ್ಯಕ್ರಮದಲ್ಲಿನ ವಸ್ತು, ವಿಚಾರದ ಬಗ್ಗೆ ಪ್ರಶ್ನೆ ಎತ್ತಿದೆ.
ಬಿಗ್ಬಾಸ್ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಅಶ್ಲೀಲ ವಿಷಯಗಳನ್ನು ತೋರಿಸಲಾಗುತ್ತಿದೆ. ಈ ರೀತಿ ದೃಶ್ಯಗಳು ಪ್ರಸಾರವಾದ ಸಮಯದಲ್ಲಿ ಯಾರು ಕಣ್ಣು ಮುಚ್ಚಿಕೊಳ್ಳುವುದಿಲ್ಲ. ಹಿಂಸಾಚಾರ, ಅಶ್ಲೀಲ ವಿಚಾರಗಳ ಪ್ರಸಾರ ನಿಲ್ಲಿಸಬೇಕು ಎಂದು ಕೋರ್ಟ್ ಸೂಚನೆ ನೀಡಿದೆ.
ರಿಯಾಲಿಟಿ ಶೋ ಕಾರ್ಯಕ್ರಮ ವಸ್ತುವನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್ ಬಿಗ್ಬಾಸ್ ಕಾರ್ಯಕ್ರಮದಲ್ಲಿ ಎಂಥಹ ವಿಚಾರ ಪ್ರಸಾರವಾಗುತ್ತದೆ ಎಂದು ಎಲ್ಲರಿಗೂ ತಿಳಿದಿದೆ ಎಂದು ವಿಚಾರಣೆ ವೇಳೆ ಅಭಿಪ್ರಾಯಪಟ್ಟಿದೆ.
ಯುವಪಿಳಿಗೆಯನ್ನು ಗುರಿಯಾಗಿಸಿಕೊಂಡಿರುವ ಬಿಗ್ಬಾಸ್ ರಿಯಾಲಿಟಿಯ ಶೋ ಸಾಕಷ್ಟು ಜನಪ್ರಿಯವಾಗಿದೆ. ಕಾರ್ಯಕ್ರಮದಲ್ಲಿ ಅಶ್ಲೀಲ ದೃಶ್ಯಗಳನ್ನು ಪ್ರಚಾರ ಮಾಡುವ ಮೂಲಕ ಯುವಕರನ್ನು ಹಾಳು ಮಾಡಲಾಗುತ್ತಿದೆ ಎಂದು ಆಂಧ್ರಪ್ರದೇಶ ಹೈಕೋರ್ಟ್ಗೆ ಜಗದೇಶ್ವರ ರೆಡ್ಡಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸದ್ದರು.
ಅರ್ಜಿದಾರರ ಪರ ವಕೀಲರಾದ ಜಿ. ಶಿವಪ್ರಸಾದ್ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸುವಂತೆ ಕೋರಿದ್ದರು. ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ನ್ಯಾಯಮೂರ್ತಿ ಎಸ್. ಸುಬ್ಬಾ ರೆಡ್ಡಿ ಅವರಿದ್ದ ಪೀಠವು ಇಂತಹ ಕಾರ್ಯಕ್ರಮದಲ್ಲಿ ಹಿಂಸೆ ಉತ್ತೇಜಿಸುವುದು ಸರಿಯಲ್ಲ. ಇವುಗಳು ನಮ್ಮ ಸಂಸ್ಕೃತಿಯ ಭಾಗವಲ್ಲ ಎಂದು ವಿಚಾರಣೆ ವೇಳೆ ಹೇಳಿತು.
ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್ಸಿ) ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಿ. ವಿ. ಮೋಹನ್ ರೆಡ್ಡಿ ಅರ್ಜಿದಾರರು ಈ ಹಿಂದೆ ತೆಲಂಗಾಣ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು ಮತ್ತು ನಂತರ ಅದನ್ನು ಹಿಂಪಡೆದಿದ್ದಾರೆ. ಅರ್ಜಿದಾರರು ಈಗ ಮುಖ್ಯ ನ್ಯಾಯಮೂರ್ತಿ ಪೀಠದ ಮುಂದೆ ಇದೇ ಅರ್ಜಿ ಸಲ್ಲಿಸಿದ್ದಾರೆ ಎಂದು ವಾದಿಸಿದರು.
ಮುಖ್ಯ ನ್ಯಾಯಮೂರ್ತಿ ಪೀಠದ ಮುಂದೆ ಅರ್ಜಿ ಸಲ್ಲಿಸಿರುವುದನ್ನು ಒಪ್ಪಿಕೊಂಡ ವಕೀಲ ಜಿ. ಶಿವಪ್ರಸಾದ್ ಉಸ್ತುವಾರಿ ಪೀಠದ ಮುಂದೆಯೂ ಅದನ್ನು ನಮೂದಿಸುವ ಹಕ್ಕಿದೆ ಎಂದು ವಾದಿಸಿದರು. ಪ್ರಕರಣವನ್ನು ಕೈಗೆತ್ತಿಕೊಳ್ಳುವ ಮೊದಲು ಈ ಬಗ್ಗೆ ತಮಗೆ ಮೊದಲೇ ಮಾಹಿತಿ ನೀಡದ ಕಾರಣ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.