ಆಸ್ತಿ ಮಾರಾಟ ಮಾಡುವ ಟಿಟಿಡಿ ನಿರ್ಧಾರ ತಡೆದ ಆಂಧ್ರ ಸರ್ಕಾರ!
ತಿರುಪತಿ, ಮೇ 25 : ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿ ತಮಿಳುನಾಡಿನಲ್ಲಿರುವ ಕೆಲವು ಆಸ್ತಿಗಳನ್ನು ಮಾರಾಟ ಮಾಡಲು ಮುಂದಾಗಿರುವ ಸುದ್ದಿ ಸಂಚಲನ ಉಂಟು ಮಾಡಿತ್ತು. ಆಂಧ್ರಪ್ರದೇಶ ಸರ್ಕಾರ ಟಿಟಿಡಿಯ ತೀರ್ಮಾನಕ್ಕೆ ತಡೆ ನೀಡಿದೆ.
ಹಲವಾರು ಹಿಂದೂ ಸಂಘಟನೆಗಳು ಟಿಟಿಡಿಯ ತೀರ್ಮಾನವನ್ನು ಖಂಡಿಸಿದ್ದರು. ಆಂಧ್ರಪ್ರದೇಶ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದಾಗಿ ಸರ್ಕಾರ ಸೋಮವಾರ ಟಿಟಿಡಿ ತೀರ್ಮಾನಕ್ಕೆ ತಡೆ ನೀಡಿದ ಆದೇಶ ಹೊರಡಿಸಿದೆ.
ಭಕ್ತರು ದರ್ಶನಕ್ಕೆ ಬಾರದಿದ್ದರೂ ತಿಮ್ಮಪ್ಪನಿಗೆ ಕಾಣಿಕೆ ತಪ್ಪಿಲ್ಲ!
ಟಿಟಿಡಿ ತಮಿಳುನಾಡು ರಾಜ್ಯದ ವಿವಿಧ ಜಿಲ್ಲೆಯಲ್ಲಿ ದೇವಸ್ಥಾನದ ಹೆಸರಿನಲ್ಲಿರುವ 23 ಆಸ್ತಿ ಮಾರಾಟ ಮಾಡಲು ಹೊರಟಿತ್ತು. ಇದರಲ್ಲಿ ಮನೆ, ನಿವೇಶನ, ಕೃಷಿ ಭೂಮಿ ಸೇರಿತ್ತು. ಟಿಟಿಡಿ ಈ ಭೂಮಿಗೆ ಬೆಲೆ ನಿಗದಿ ಮಾಡಿತ್ತು. ಸಾರ್ವಜನಿಕ ಹರಾಜು ಮೂಲಕ ಮಾರಾಟ ಮಾಡಲು 8 ಅಧಿಕಾರಿಗಳ ಎರಡು ಸಮಿತಿ ರಚಿಸಿತ್ತು.
ಮೇ 25ರಿಂದ ಪ್ರಮುಖ ನಗರಗಳಲ್ಲಿ ತಿರುಪತಿ ಲಡ್ಡು ಮಾರಾಟ
ತಮಿಳುನಾಡು, ಆಂಧ್ರಪ್ರದೇಶ, ಉತ್ತರಾಖಂಡ್ ಸೇರಿದಂತೆ ವಿವಿಧ ರಾಜ್ಯದಲ್ಲಿ ತಿರುಪತಿ ದೇವಾಲಯಕ್ಕೆ ಸೇರಿದ ಹಲವು ಆಸ್ತಿಗಳಿವೆ. ಇವುಗಳಲ್ಲಿ ತಮಿಳುನಾಡಿನಲ್ಲಿರುವ 23 ಆಸ್ತಿ ಮಾರಾಟ ಮಾಡುವ ತೀರ್ಮಾನ ಕೈಗೊಂಡಿತ್ತು. ಆಂಧ್ರ ಸರ್ಕಾರ ಇಂತಹ ತೀರ್ಮಾನ ಕೈಗೊಳ್ಳುವ ಮುನ್ನ ಸರ್ಕಾರದ ಜೊತೆ ಸಮಾಲೋಚನೆ ನಡೆಸಿ ಎಂದು ಸಲಹೆ ನೀಡಿದೆ.
ತಮಿಳುನಾಡಿನಲ್ಲಿ 23 ಆಸ್ತಿ ಮಾರಾಟಕ್ಕೆ ಮುಂದಾದ ಟಿಟಿಡಿ
ದೇವಾಲಯದ ಭೂ ವ್ಯವಹಾರ ನೋಡಿಕೊಳ್ಳುವ ವಿ. ದೇವೇಂದ್ರ ರೆಡ್ಡಿ, "ಟಿಟಿಡಿ ಆಡಳಿತ ಮಂಡಳಿ ಫೆಬ್ರವರಿಯಲ್ಲಿ ಸಭೆ ಸೇರಿದಾಗ ಆಸ್ತಿ ಮಾರಾಟದ ತೀರ್ಮಾನ ಕೈಗೊಳ್ಳಲಾಗಿತ್ತು. ಭಕ್ತರು ದೇವಾಲಯಕ್ಕೆ ಕಾಣಿಕೆಯಾಗಿ ನೀಡಿದ ಆಸ್ತಿ ಮಾರಾಟ ಮಾಡಲಾಗುತ್ತಿದೆ" ಎಂದು ಹೇಳಿದ್ದರು.
ಲಾಕ್ ಡೌನ್ ಪರಿಣಾಮ ತಿರುಪತಿಗೆ ಭಕ್ತರು ಎರಡು ತಿಂಗಳಿನಿಂದ ಭೇಟಿ ನೀಡುತ್ತಿಲ್ಲ. ಇದರಿಂದಾಗಿ ದೇವಾಲಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂಬ ವರದಿಗಳು ಬಂದಿದ್ದವು. ಕಾರ್ಮಿಕರಿಗೆ ಸಂಬಳ ನೀಡಲು ಕಷ್ಟವಾಗಿದೆ ಎಂಬ ಸುದ್ದಿಯೂ ಬಂದಿತ್ತು.
ದೇವಾಲಯದ ಬಗ್ಗೆ ಬಂದಿದ್ದ ಸುದ್ದಿಗಳನ್ನು ಟಿಟಿಡಿ ಬೋರ್ಡ್ ಮುಖ್ಯಸ್ಥ ವೈ. ವಿ. ಸುಬ್ಬಾರೆಡ್ಡಿ ತಳ್ಳಿ ಹಾಕಿದ್ದರು. "ದೇವಾಲಯಕ್ಕೆ ಯಾವುದೇ ಆರ್ಥಿಕ ಸಂಕಷ್ಟ ಇಲ್ಲ.ಮೇ ತಿಂಗಳ ವೇತನ ನೀಡಲು ಹಣದ ಕೊರತೆ ಎದುರಾಗಿಲ್ಲ. ದರ್ಶನ ಪಡೆಯಲು ಭಕ್ತರು ಆಗಮಿಸದಿದ್ದರೂ 2 ಕೋಟಿಯಷ್ಟು ಕಾಣಿಕೆ ಇ-ಹುಂಡಿ ಮೂಲಕ ಬಂದಿದೆ" ಎಂದು ಹೇಳಿದ್ದರು.