ನೆಲ್ಲೂರಿನ ಆಯುರ್ವೇದ ಔಷಧಿಗೆ ಅಸ್ತು ಎಂದ ಆಂಧ್ರ ಸರ್ಕಾರ
ಅಮರಾವತಿ, ಮೇ 31: ಆಂಧ್ರದ ಕೃಷ್ಣಗಿರಿಯಲ್ಲಿ ಕೊರೊನಾ ಸೋಂಕಿಗೆ ನೀಡಲಾಗುತ್ತಿದ್ದ ಆಯುರ್ವೇದ ಔಷಧಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ಕೃಷ್ಣಗಿರಿಯ ನೆಲ್ಲೂರಿನಲ್ಲಿ ಕೊರೊನಾ ಸೋಂಕಿಗೆ ಸ್ಥಳೀಯ ಆಯುರ್ವೇದ ವೈದ್ಯ ಆನಂದಯ್ಯ ಆಯುರ್ವೇದದ ಮದ್ದನ್ನು ಉಚಿತವಾಗಿ ವಿತರಿಸುತ್ತಿದ್ದರು. ಈ ಔಷಧಿ ಪಡೆಯಲು ಸಾವಿರಾರು ಜನರು ದೌಡಾಯಿಸಿದ್ದು ಈಚೆಗೆ ಸುದ್ದಿಯಾಗಿತ್ತು.
ಕೊರೊನಾಗೆ ಆಯುರ್ವೇದ ಮದ್ದು; ನೆಲ್ಲೂರಿನಲ್ಲಿ ಸೇರಿದ ಸಾವಿರಾರು ಜನ
ಜನ ಸೇರಿದ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾಡಳಿತ ಔಷಧಿ ವಿತರಣೆ ಜಾಗಕ್ಕೆ ಬಂದು ಪರಿಶೀಲನೆ ನಡೆಸಿತ್ತು. ನಂತರ ಔಷಧಿಯ ಮಾದರಿಯನ್ನು ಪರೀಕ್ಷೆ ಮಾಡುವುದಾಗಿ ತಿಳಿಸಿತ್ತು. ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ಸ್ಟಿಟ್ಯೂಟ್ ಇನ್ ಆಯುರ್ವೇದಿಕ್ ಸೈನ್ಸಸ್ ವರದಿಯನ್ವಯ ಆಂಧ್ರ ಸರ್ಕಾರ ಇದೀಗ ಈ ಆಯುರ್ವೇದ ಔಷಧಿಗೆ ಅನುಮತಿ ನೀಡಿದೆ.
ಕಣ್ಣಿಗೆ ಬಿಡುವ ಔಷಧಿ ಹೊರತಾಗಿ ಬೇರೆ ಔಷಧಿಗಳನ್ನು ತೆಗೆದುಕೊಳ್ಳಲು ಅನುಮತಿ ನೀಡಿದೆ. ಇದುವರೆಗೂ ಸುಮಾರು ಇಪ್ಪತ್ತು ಸಾವಿರ ಜನರಿಗೆ ಆನಂದಯ್ಯ ಅವರು ಔಷಧಿ ವಿತರಿಸಿದ್ದು, ಇದೀಗ ಸಾವಿರಾರು ಸಂಖ್ಯೆಯಲ್ಲಿ ಔಷಧಿಗಾಗಿ ಕೃಷ್ಣಗಿರಿಗೆ ಬರುತ್ತಿದ್ದಾರೆ.
ಈ ವೇಳೆ ಕೊರೊನಾ ನಿಯಮ ಉಲ್ಲಂಘನೆ ಆರೋಪಗಳೂ ಕೇಳಿಬಂದಿವೆ.
ಆಂಧ್ರ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 13,400 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯ ಸರ್ಕಾರ ಜೂನ್ 10ರವರೆಗೂ ಲಾಕ್ಡೌನ್ ವಿಸ್ತರಿಸಿದೆ.