ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡುಗೆ ಸಿಐಡಿ ನೋಟಿಸ್
ಅಮರಾವತಿ, ಮಾರ್ಚ್ 16: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರಿಗೆ ಆಂಧ್ರ ಅಪರಾಧ ತನಿಖಾ ದಳ (ಸಿಐಡಿ) ನೋಟಿಸ್ ನೀಡಿದೆ. ಅಮರಾವತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಭೂ ಹಗರಣದ ಕುರಿತು ವಿಚಾರಣೆಗೆ ಮಾರ್ಚ್ 23ರಂದು ವಿಜಯವಾಡದ ಕಚೇರಿಗೆ ಹಾಜರಾಗುವಂತೆ ನಾಯ್ಡು ಅವರಿಗೆ ಸೂಚಿಸಲಾಗಿದೆ. ಒಂದು ವೇಳೆ ನಾಯ್ಡು ವಿಚಾರಣೆಗೆ ಹಾಜರಾಗದೆ ಇದ್ದರೆ, ಅವರನ್ನು ಬಂಧಿಸುವ ಸಾಧ್ಯತೆ ಕೂಡ ಇದೆ.
ನಾಯ್ಡು ಅವರ ಟಿಡಿಪಿ ಸರ್ಕಾರದಲ್ಲಿ ಮುನಿಸಿಪಲ್ ಆಡಳಿತ ಮತ್ತು ನಗರಾಭಿವೃದ್ಧಿ ಸಚಿವರಾಗಿದ್ದ ಪಿ. ನಾರಾಯಣ ಅವರಿಗೂ ಸಿಐಡಿ ನೋಟಿಸ್ ನೀಡಿದೆ. ಹೈದರಾಬಾದ್ನಲ್ಲಿರುವ ನಾಯ್ಡು ಮನೆಗೆ ತೆರಳಿ ಸಿಐಡಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ವಿಜಯವಾಡದ ಸತ್ಯನಾರಾಯಣಪುರಂನಲ್ಲಿ ಮಾರ್ಚ್ 23ರಂದು ಸಿಐಡಿ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ.
ತಿರುಪತಿ ವಿಮಾನ ನಿಲ್ದಾಣದಲ್ಲಿ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬಂಧನ
ಮಂಗಳಗಿರಿಯ ವೈಎಸ್ಆರ್ ಕಾಂಗ್ರೆಸ್ ಶಾಸಕ ಶ್ರೀ ಅಲ್ಲಾ ರಾಮಕೃಷ್ಣ ರೆಡ್ಡಿ, ನಾಯ್ಡು ಅವರ ಸಹಚರರು ಜನಸಾಮಾನ್ಯರನ್ನು ಬೆದರಿಸಿ ಅವರ ಭೂಮಿಗಳನ್ನು ಅಕ್ರಮವಾಗಿ ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಐಪಿಸಿ ಸೆಕ್ಷನ್ಗಳಾದ 120 ಬಿ (ಸಂಚು) 166 (ಸಾರ್ವಜನಿಕ ಸೇವಕರಿಂದ ಕಾನೂನಿಗೆ ಅವಿಧೇಯತೆ) 167 (ಸಾರ್ವಜನಿಕ ಸೇವಕರು ಅಸಮರ್ಪಕ ದಾಖಲೆ ಸೃಷ್ಟಿಸುವುದು) ಮತ್ತು 217 (ಶಿಕ್ಷೆಯಿಂದ ವ್ಯಕ್ತಿಯನ್ನು ರಕ್ಷಿಸುವುದು ಅಥವಾ ಆಸ್ತಿ ಮುಟ್ಟುಗೋಲನ್ನು ತಪ್ಪಿಸುವುದು) ಅಡಿ ಸಿಬಿಐ ಎಫ್ಐಆರ್ ದಾಖಲಿಸಿತ್ತು.
ಅಕ್ರಮವಾಗಿ ಭೂಮಿ ವಶಪಡಿಸಿಕೊಂಡ ಆರೋಪದಡಿ ಕನಿಷ್ಠ 20 ಟಿಡಿಪಿ ಮುಖಂಡರು ಮತ್ತು ಟಿಡಿಪಿಗೆ ಹತ್ತಿರವಿದ್ದ ರಿಯಲ್ ಎಸ್ಟೇಟ್ ಉದ್ಯಮಿಗಳ ವಿರುದ್ಧ ಸಿಐಡಿ ಪ್ರಕರಣ ದಾಖಲಿಸಿಕೊಂಡಿದೆ.