ಗೋದಾವರಿ ದೋಣಿ ದುರಂತ: ಸಾವಿನ ಸಂಖ್ಯೆ 39 ಕ್ಕೆ ಏರಿಕೆ?
ಅಮರಾವತಿ, ಸೆಪ್ಟೆಂಬರ್ 16: ಆಂಧ್ರ ಪ್ರದೇಶದ ಗೋದಾವರಿ ನದಿಯಲ್ಲಿ ಶ್ರೀ ವಸಿಷ್ಠ ಎಂಬ ದೋಣಿ ಮುಳುಗಿದ ಪರಿಣಾಮ ಸಾವಿಗೀಡಾದವರ ಸಂಖ್ಯೆ 39 ಕ್ಕೇರಿದೆ ಎಂದು ಕೆಲವು ಮೂಲಗಳು ತಿಳಿಸಿವೆ.
62 ಪ್ರಯಾಣಿಕರನ್ನು ಹೊತ್ತಿದ್ದ ಎರಡು ಅಂತಸ್ತಿನ ದೋಣಿ ಭಾನುವಾರ ಬೆಳಿಗ್ಗೆ ಸುಮಾರು 10:30 ರ ಹೊತ್ತಿಗೆ ಮುಳುಗಿತ್ತು. ಈ ಪೈಕಿ 12 ಜನರ ಮೃತದೇಹ ಪತ್ತೆಯಾಗಿದ್ದು, 26 ಜನರನ್ನು ರಕ್ಷಿಸಲಾಗಿದೆ. ಒಟ್ಟು 39 ಜನ ಸಾವಿಗೀಡಾಗಿರಬಹುದು ಎಂದು ಅಂದಾಜಿಸಲಾಗಿದ್ದು, ನಾಪತ್ತೆಯಾದವರ ಶೋಧ ಕಾರ್ಯ ನಡೆಯುತ್ತಿದೆ.
ಗೋದಾವರಿ ನದಿಯಲ್ಲಿ ದೋಣಿ ಮುಳುಗಿ ಕನಿಷ್ಠ 7 ಮಂದಿ ಸಾವು
ದೋಣಿ ದಡದ ಸಮೀಪ ಬಂದರೂ ಚಾಲಕ ಇದ್ದಕ್ಕಿದ್ದಂತೆ ದೋಣಿಯನ್ನು ನದಿಯ ಮಧ್ಯಕ್ಕೆ ಒಯ್ದು ಅಲೆಯ ವಿರುದ್ಧ ದಿಕ್ಕಿನತ್ತ ಹೊರಟಿದ್ದರ ಪರಿಣಾಮ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಚಾಲಕ ಇದ್ದಕ್ಕಿದ್ದಂತೆ ದೋಣಿಯನ್ನು ನದಿಯ ನಡುಭಾಗಕ್ಕೆ ಕೊಂಡೊಯ್ದಿದ್ದು ಏಕೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ದೋಣಿಯಲ್ಲಿ ಜೀವರಕ್ಷಣ ಜಾಕೆಟ್ ಗಳನ್ನು ತೊಟ್ಟವರು ಬದುಕುಳಿದಿದ್ದು, ಕೆಲವು ಜಾಕೆಟ್ ಗಳನ್ನು ಧರಿಸಿರಲಿಲ್ಲ ಎನ್ನಲಾಗಿದೆ. ಜೊತೆಗೆ ಬಂದರು ಪ್ರಾಧಿಕಾರದ ಪರವಾನಗಿಯನ್ನು ದೋಣಿ ಹೊಂದಿರಲಿಲ್ಲ ಎಂಬ ಅಂಶವೂ ಪತ್ತೆಯಾಗಿದೆ.
ಘಟನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರು ಸಂತಾಪ ಸೂಚಿಸಿದ್ದರೆ ಆಂಧ್ರಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.