ಆಂಧ್ರ ಪ್ರದೇಶದಲ್ಲಿ ಆಮ್ಲಜನಕ ಪೂರೈಕೆ ವಿಳಂಬದಿಂದ 11 ಮಂದಿ ಸಾವು!
ತಿರುಪತಿ, ಮೇ 11: ವೈದ್ಯಕೀಯ ಆಮ್ಲಜನಕ ಪೂರೈಕೆಯಲ್ಲಿ ಆಗಿರುವ ವಿಳಂಬದಿಂದ 11 ಮಂದಿ ಕೊರೊನಾವೈರಸ್ ಸೋಂಕಿತರು ಪ್ರಾಣ ಬಿಟ್ಟಿರುವ ಘಟನೆ ಆಂಧ್ರ ಪ್ರದೇಶ ಚಿತ್ತೋರ್ ಜಿಲ್ಲೆಯ ತಿರುಪತಿಯಲ್ಲಿ ಇರುವ ಆಸ್ಪತ್ರೆಯಲ್ಲಿ ನಡೆದಿದೆ.
ತಿರುಪತಿಯ ರುಯಾ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ತುರ್ತು ನಿಗಾ ಘಟಕದಲ್ಲಿ ದಾಖಲಾದ ಕೊವಿಡ್-19 ರೋಗಿಗಳಿಗೆ ಸೂಕ್ತ ಸಮಯದಲ್ಲಿ ವೈದ್ಯಕೀಯ ಆಕ್ಸಿಜನ್ ಪೂರೈಸಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆ 11 ರೋಗಿಗಳು ಚಿಕಿತ್ಸೆ ಸಿಗದೇ ಪ್ರಾಣ ಬಿಟ್ಟಿದ್ದಾರೆ ಎಂದು ಚಿತ್ತೂರ್ ಜಿಲ್ಲಾಧಿಕಾರಿ ಎಂ ಹರಿ ನಾರಾಯಣ್ ತಿಳಿಸಿದ್ದಾರೆ.
ಯುವಕರಲ್ಲಿ ಕೊರೊನಾ ಹೆಚ್ಚಾಗಲು ಕಾರಣವೇ ಈ ಹೊಸ ತಳಿ!
ವೈದ್ಯಕೀಯ ಆಮ್ಲಜನಕದ ಸಿಲಿಂಡರ್ ಅನ್ನು ರಿ-ಲೋಡ್ ಮಾಡುವ ಸಂದರ್ಭದಲ್ಲಿ 5 ನಿಮಿಷಗಳ ಕಾಲ ವಿಳಂಬವಾಗಿದೆ. ಈ ವೇಳೆ ಒತ್ತಡ ಹೆಚ್ಚಾದ ಹಿನ್ನೆಲೆ ಸಾವು ಸಂಭವಿಸಿದೆ. ಈ ಹಿನ್ನೆಲೆ ಹೆಚ್ಚಿನ ಅಪಾಯವನ್ನು ತಪ್ಪಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ. ಪ್ರಸ್ತುತ ಐದು ನಿಮಿಷಗಳಲ್ಲೇ ಆಕ್ಸಿಜನ್ ಸಿಲಿಂಡರ್ ರಿ-ಲೋಡ್ ಮಾಡಲಾಗುತ್ತಿದ್ದು, ಪರಿಸ್ಥಿತಿ ಹತೋಟಿಗೆ ಬಂದಿದೆ. ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಕೊರೊನಾ ರೋಗಿಗಳ ಚಿಕಿತ್ಸೆಗೆ ದಿಢೀರ್ 30 ವೈದ್ಯರು:
ವೈದ್ಯಕೀಯ ಆಮ್ಲಜನಕ ಪೂರೈಕೆ ವಿಳಂಬದಿಂದ 11 ಮಂದಿ ಮೃತಪಡುತ್ತಿದ್ದಂತೆ ವೈದ್ಯರು ಎಚ್ಚೆತ್ತುಕೊಂಡಿದ್ದಾರೆ. ತುರ್ತು ನಿಗಾ ಘಟಕದ ರೋಗಿಗಳ ಚಿಕಿತ್ಸೆಗೆ ಏಕಕಾಲದಲ್ಲಿ 30ಕ್ಕೂ ಹೆಚ್ಚು ವೈದ್ಯರು ಧಾವಿಸಿದ್ದಾರೆ. ರುಯಾ ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆಯಲ್ಲಿ ಯಾವುದೇ ಕೊರತೆಯಿಲ್ಲ, ಸೂಕ್ತ ಸಮಯದಲ್ಲಿ ಎಲ್ಲವೂ ಸರಬರಾಜು ಆಗುತ್ತಿದೆ. ಇದೇ ಆಸ್ಪತ್ರೆಯ ಐಸಿಯು ಮತ್ತು ಆಮ್ಲಜನಕ ಸಹಿತ ಹಾಸಿಗೆಗಳಲ್ಲಿ 700 ಕೊವಿಡ್-19 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, 300 ಸೋಂಕಿತರಿಗೆ ಸಾಮಾನ್ಯ ವಾರ್ಡ್ ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ ಹರಿ ನಾರಾಯಣ್ ಹೇಳಿದ್ದಾರೆ.
ಸಿಎಂ ಜಗನ್ ಮೋಹನ್ ರೆಡ್ಡಿ ಖಡಕ್ ನಿರ್ದೇಶನ:
ತಿರುಪತಿಯ ರುಯಾ ಆಸ್ಪತ್ರೆಯಲ್ಲಿ ನಡೆದ 11 ಕೊವಿಡ್-19 ರೋಗಿಗಳ ಸಾವಿನ ಸಿಎಂ ಜಗನ್ ಮೋಹನ್ ರೆಡ್ಡಿ ಸಂತಾಪ ಸೂಚಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸಂಪೂರ್ಣ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿರುವ ಮುಖ್ಯಮಂತ್ರಿ ಜಗನ್, ಇಂಥ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.