ಆಂಧ್ರ ಕರಾವಳಿಗೆ ಅಸನಿ ಚಂಡಮಾರುತ; ಮಳೆಯಿಂದ ವಿಶಾಖಪಟ್ಟಣಂನಲ್ಲಿ ಎಲ್ಲಾ ವಿಮಾನಗಳ ಹಾರಾಟ ರದ್ದು
ಅಮರಾವತಿ, ಮೇ 11: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ 'ಅಸನಿ' ಚಂಡಮಾರುತ ಆಂಧ್ರಪ್ರದೇಶದ ಕರಾವಳಿ ಸಮೀಪಿಸುತ್ತಿದ್ದಂತೆ ತನ್ನ ಪಥವನ್ನು ಬದಲಾಯಿಸುತ್ತಿದ್ದು, ಬುಧವಾರ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಅಮೆರಿಕದ ಹವಾಮಾನ ವೀಕ್ಷಣ ಕೇಂದ್ರದ ಪ್ರಕಾರ, ಬುಧವಾರ ಸಂಜೆಯ ವೇಳೆಗೆ ಚಂಡಮಾರುತವು ಮಚಲಿಪಟ್ಟಣಂ ಬಳಿ ಕರಾವಳಿ ದಾಟಬಹುದು ಎಂದು ಅಂದಾಜಿಲಸಾಗಿದೆ. ಈ ಹಿನ್ನಲೆಯಲ್ಲಿ ಆಂಧ್ರ ಪ್ರದೇಶ ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಕರಾವಳಿಯನ್ನು ದಾಟಿದ ನಂತರ, ಚಂಡಮಾರುತವು ವಿಶಾಖಪಟ್ಟಣಂ ಬಳಿ ಬಂಗಾಳಕೊಲ್ಲಿಯಲ್ಲಿ ಮರುಕಳಿಸುವ ಸಾಧ್ಯತೆಯಿದೆ.
ಅಸಾನಿ ಚಂಡಮಾರುತದ ಎಫೆಕ್ಟ್: ಉತ್ತರದಲ್ಲಿ ಬಿಸಿಗಾಳಿ, ದಕ್ಷಿಣ, ವಾಯವ್ಯದಲ್ಲಿ ಮಳೆಯೋ ಮಳೆ
ಉತ್ತರ ಮತ್ತು ದಕ್ಷಿಣ ಕರಾವಳಿ ಆಂಧ್ರದ ಕೆಲವು ಭಾಗಗಳಲ್ಲಿ ಮಂಗಳವಾರ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ಮಚಲಿಪಟ್ಟಣಂನಲ್ಲಿಯೂ ಮಳೆ ಮತ್ತು ಬಿರುಗಾಳಿ ಬೀಸಿದೆ. ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಕೆಲವೆಡೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿದ್ದಾರೆ.
Recommended Video
ವಿಶಾಖಪಟ್ಟಣದಿಂದ ಎಲ್ಲಾ ವಿಮಾನಗಳು ರದ್ದು
ಅಸನಿ ಚಂಡಮಾರುತದ ಪರಿಣಾಮ ಮುಂಜಾಗ್ರತಾ ಕ್ರಮವಾಗಿ ವಿಶಾಖಪಟ್ಟಣದಿಂದ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ. "ಇಂದು ವಿಶಾಖಪಟ್ಟಣಂ ಒಳಗೆ ಮತ್ತು ಹೊರಗೆ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ನಾಳೆ VTZ ನಿಂದ ಹೊರಗಿರುವ ಎಲ್ಲಾ 6E ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ವಿಶಾಖಪಟ್ಟಣಂ ವಿಮಾನ ನಿಲ್ದಾಣದ ನಿರ್ದೇಶಕ ಶ್ರೀನಿವಾಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ ಅಸನಿ ಚಂಡಮಾರುತದಿಂದಾಗಿ ವಿಶಾಖಪಟ್ಟಣಂ ನಗರದಲ್ಲಿ ಮಳೆಯಾಗಿದೆ. ಚಂಡಮಾರುತದ ಪ್ರಭಾವದಿಂದ ನಗರ ಮತ್ತು ಜಿಲ್ಲೆಯ ಹಲವೆಡೆ ಬಲವಾದ ಗಾಳಿಯೊಂದಿಗೆ ಭಾರೀ ಮಳೆ ಸುರಿದಿದೆ. ಸತತ ಮಳೆಯಿಂದಾಗಿ ಹಲವೆಡೆ ಚರಂಡಿಗಳು ತುಂಬಿ ಹರಿಯುತ್ತಿದ್ದು, ರಸ್ತೆಗಳು ಜಲಾವೃತವಾಗಿವೆ.
ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ
ಕೃಷ್ಣಾ, ಗುಂಟೂರು, ಕಾಕಿನಾಡ, ಕೋನಸೀಮಾ, ಪಶ್ಚಿಮ ಗೋದಾವರಿ, ಪೂರ್ವ ಗೋದಾವರಿ ಮತ್ತು ವಿಶಾಖಪಟ್ಟಣಂ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಪ್ರದೇಶದಲ್ಲಿ ಗಂಟೆಗೆ 75 ರಿಂದ 95 ಕಿ. ಮೀ. ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಭಾರತೀಯ ಹವಾಮಾನ ಇಲಾಖೆಯು ಮೀನುಗಾರಿಕೆ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಸೂಚಿಸಿದೆ. ಮೇ 12ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ತಿಳಿಸಲಾಗಿದೆ.
ಕರಾವಳಿ ಮತ್ತು ತಗ್ಗು ಪ್ರದೇಶಗಳ ಜನರಿಗೆ ಎಚ್ಚರಿಕೆ
ಅಸನಿ ಚಂಡಮಾರುತ ಪ್ರಭಾವಿತವಾಗಿರುವ ಜಿಲ್ಲೆಗಳಲ್ಲಿ ಆಡಳಿತ ನಿಯಂತ್ರಣ ಕೊಠಡಿ ತೆರೆಯಲಾಗಿದೆ. ಕರಾವಳಿ ಮತ್ತು ತಗ್ಗು ಪ್ರದೇಶಗಳ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಖಗೋಳ ಉಬ್ಬರವಿಳಿತದಿಂದ ಸುಮಾರು 0.5 ಮೀ ಎತ್ತರದ ಚಂಡಮಾರುತದ ಉಲ್ಬಣವು ಕೃಷ್ಣಾ, ಪೂರ್ವ ಮತ್ತು ಪಶ್ಚಿಮ ಗೋದಾವರಿ ಮತ್ತು ವಿಶಾಖಪಟ್ಟಣಂ ಜಿಲ್ಲೆಗಳ ತಗ್ಗು ಪ್ರದೇಶಗಳನ್ನು ಮುಳುಗಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಬುಲೆಟಿನ್ ತಿಳಿಸಿದೆ.
ಕೃಷ್ಣಾ, ಪೂರ್ವ ಮತ್ತು ಪಶ್ಚಿಮ ಗೋದಾವರಿ ಮತ್ತು ವಿಶಾಖಪಟ್ಟಣಂ ಜಿಲ್ಲೆಗಳಲ್ಲಿ ಹುಲ್ಲಿನ ಗುಡಿಸಲುಗಳಿಗೆ ಹಾನಿ, ಕೊಂಬೆಗಳು ಮುರಿದು ವಿದ್ಯುತ್ ಮತ್ತು ಸಂಪರ್ಕ ಮಾರ್ಗಗಳಿಗೆ ಸಣ್ಣ ಹಾನಿ ಮತ್ತು ಪಕ್ಕಾ ರಸ್ತೆಗಳಿಗೆ ಸಣ್ಣ ಹಾನಿಯಾಗುವ ಸಾಧ್ಯತೆಯಿದೆ. ಭತ್ತದ ಬೆಳೆಗಳು, ಬಾಳೆ, ಪಪ್ಪಾಯಿ ಮರಗಳು ಮತ್ತು ತೋಟಗಳಿಗೆ ಸ್ವಲ್ಪ ಹಾನಿಯಾಗಲಿದೆ ಎಂದು ಅಂದಾಜಿಸಲಾಗಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ತನ್ನ ತಂಡಗಳನ್ನು ಪರ್ಯಾಯವಾಗಿ ನಿಯೋಜನೆ ಮಾಡಿದೆ. ಭಾರತೀಯ ನೌಕಾಪಡೆ ಕೂಡ ರಕ್ಷಣಾ ಮತ್ತು ಪರಿಹಾರಕ್ಕಾಗಿ ಸಿದ್ಧವಾಗಿದೆ. ವಿಶಾಖಪಟ್ಟಣಂನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಪೂರ್ವ ನೌಕಾ ಕಮಾಂಡ್ನ ಹಿರಿಯ ಅಧಿಕಾರಿಗಳು ಆಂಧ್ರಪ್ರದೇಶ ಮತ್ತು ಒಡಿಶಾದ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದಾರೆ.
ಅಸನಿ ಚಂಡಮಾರುತದ ಚಲನೆ ಹೇಗಿರಲಿದೆ?
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಚಂಡಮಾರುತವು ಕಾಕಿನಾಡದಿಂದ ಸುಮಾರು 210 ಕಿ. ಮೀ. ದಕ್ಷಿಣ-ಆಗ್ನೇಯ ಮತ್ತು ವಿಶಾಖಪಟ್ಟಣಂನಿಂದ 310 ಕಿ. ಮೀ. ದಕ್ಷಿಣ-ನೈಋತ್ಯದಲ್ಲಿ ಕೇಂದ್ರೀಕೃತವಾಗಿದೆ. ಇದು ಬಹುತೇಕ ವಾಯುವ್ಯ ದಿಕ್ಕಿನಲ್ಲಿ ಚಲಿಸುವ ಸಾಧ್ಯತೆಯಿದ್ದು, ಮೇ 11ರ ಬೆಳಗ್ಗೆ ಕಾಕಿನಾಡ-ವಿಶಾಖಪಟ್ಟಣಂ ಕರಾವಳಿಯ ಸಮೀಪ ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯನ್ನು ತಲುಪುವ ಸಾಧ್ಯತೆಯಿದೆ. ತದನಂತರ, ಇದು ನಿಧಾನವಾಗಿ ಉತ್ತರ-ಈಶಾನ್ಯ ಭಾಗಗಳಲ್ಲಿ ಮರುಕಳಿಸುವ ಸಾಧ್ಯತೆಯಿದೆ. ಕಾಕಿನಾಡ ಮತ್ತು ವಿಶಾಖಪಟ್ಟಣಂ ನಡುವೆ ಆಂಧ್ರ ಪ್ರದೇಶದ ಕರಾವಳಿಯಲ್ಲಿ ಚಲಿಸುತ್ತದೆ ಮತ್ತು ನಂತರ ಉತ್ತರ ಆಂಧ್ರ ಪ್ರದೇಶ ಮತ್ತು ಒಡಿಶಾ ಕರಾವಳಿಯಿಂದ ವಾಯುವ್ಯ ಬಂಗಾಳ ಕೊಲ್ಲಿಗೆ ಹೋಗುತ್ತದೆ. ಅಲ್ಲಿಂದ ಕ್ರಮೇಣ ಚಂಡಮಾರುತವು ದುರ್ಬಲಗೊಳ್ಳುವ ಸಾಧ್ಯತೆಯಿದೆ.