ಚುನಾವಣೆಗೆ ಟಿಕೆಟ್ ನಿರಾಕರಣೆ; ಆತ್ಮಹತ್ಯೆಗೆ ಯತ್ನಿಸಿದ ಶಾಸಕ
ಅಮರಾವತಿ (ಆಂಧ್ರಪ್ರದೇಶ), ಮಾರ್ಚ್ 17: ಪಕ್ಷದಿಂದ ಟಿಕೆಟ್ ನೀಡಿಲ್ಲ ಎಂಬ ಕಾರಣಕ್ಕೆ ಹಾಲಿ ಶಾಸಕರೊಬ್ಬರು ಬ್ಲೇಡ್ ನಿಂದ ಮಣಿಕಟ್ಟು ಕುಯ್ದುಕೊಂಡ ಘಟನೆ ನಡೆದಿದೆ. ಆಂಧ್ರಪ್ರದೇಶದ ಪುಥಲ್ ಪಟ್ಟು ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ, ವೃತ್ತಿಯಿಂದ ವೈದ್ಯರಾದ ಎಂ.ಸುನೀಲ್ ಕುಮಾರ್ ಅವರಿಗೆ ವೈಎಸ್ ಆರ್ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನಿರಾಕರಿಸಲಾಗಿದೆ.
ಬ್ಲೇಡ್ ನಿಂದ ಕೈ ಕುಯ್ದುಕೊಂಡ ಸುನೀಲ್ ಕುಮಾರ್, ತಾನೇ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಆ ನಂತರ ವಿಡಿಯೋವನ್ನು ಪಕ್ಷದ ಮುಖ್ಯಸ್ಥ ಜಗನ್ಮೋಹನ್ ರೆಡ್ಡಿಗೆ ಕಳುಹಿಸಿದ್ದಾರೆ. ಐದು ನಿಮಿಷಗಳ ವಿಡಿಯೋದಲ್ಲಿ ಐವತ್ತು ವರ್ಷದ ಸುನೀಲ್ ಕಣ್ಣೀರಿಡುತ್ತಾ ಮಾತನಾಡಿದ್ದಾರೆ.
ಜಗನ್ ಚಿಕ್ಕಪ್ಪನನ್ನು ಕೊಂದವರಾರು, ಜಗನ್ ಬೊಟ್ಟು ಯಾಕೆ ಚಂದ್ರಬಾಬು ನಾಯ್ಡು ಕಡೆಗೆ?
ಜಗನ್ ಸರ್, ನನಗೆ ನಿಮ್ಮ ಮೇಲೆ ತುಂಬಾ ಪ್ರೀತಿ. ಐದು ವರ್ಷ ನಿಮ್ಮದೇ ಹೆಜ್ಜೆಯಲ್ಲಿ ಸಾಗಿದ ನನಗೆ ಪಕ್ಷದೊಳಗೆ ಟಿಕೆಟ್ ನಿರಾಕರಿಸಿದ್ದರಿಂದ ನನ್ನ ಬದುಕು ಕೊನೆ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ. ನನ್ನ ಸಾವಿಗೆ ಮುನ್ನ ನಿಮಗೆ ಈ ವಿಡಿಯೋ ಕಳಿಸುತ್ತಿದ್ದೇನೆ ಎಂದು ಸುನೀಲ್ ಹೇಳಿದ್ದಾರೆ.
ಆತ್ಮಹತ್ಯೆಗೆ ಪ್ರಯತ್ನಿಸಿದ ನಂತರ ಸುನೀಲ್ ಅವರನ್ನು ಮದನಪಲ್ಲಿಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸದ್ಯಕ್ಕೆ ಅವರು ಅಪಾಯದಿಂದ ಪಾರಾಗಿದ್ದಾರೆ. ಶಾಸಕರ ಪತ್ನಿ ಮಾತನಾಡಿ, ಅವರ ರಾಜಕೀಯ ಭವಿಷ್ಯದ ವಿಚಾರವಾಗಿ ಪಕ್ಷದೊಳಗೆ ಪ್ರತಿಕೂಲ ಬೆಳವಣಿಗೆಗಳು ನಡೆದಿದ್ದರಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡು ಹೀಗೆ ಮಾಡಿದ್ದಾರೆ ಎಂದಿದ್ದಾರೆ.
ಮೂರು ವರ್ಷದ ಹಿಂದೆ ಸುನೀಲ್ ಸೇರಿ ಇಪ್ಪತ್ಮೂರು ಶಾಸಕರು ವೈಎಸ್ ಆರ್ ಕಾಂಗ್ರೆಸ್ ತೊರೆದು, ಟಿಡಿಪಿ ಸೇರಲು ಪ್ರಯತ್ನಿಸಿದ್ದರು. ಆ ಪ್ರಯತ್ನವನ್ನು ಪಕ್ಷದ ಹಿರಿಯರು ವಿಫಲಗೊಳಿಸಿದ್ದರು. ಆ ಘಟನೆ ನಂತರ ಸುನೀಲ್ ರ ಮೇಲೆ ನಂಬಿಕೆ ಕಡಿಮೆಯಾಗಿ, ಪಕ್ಷದೊಳಗೆ ಮೂಲೆಗುಂಪಾಗುತ್ತಾ ಬಂದಿದ್ದರು.
ದಿನಾಂಕ ಘೋಷಣೆ ಬೆನ್ನಲ್ಲೇ ವೈಎಸ್ಆರ್ ಪಕ್ಷ ಸೇರಿದ ಖ್ಯಾತ ತೆಲುಗು ನಟ
ಮೊದಲ ಬಾರಿಗೆ ಶಾಸಕರಾಗಿದ್ದ ಸುನೀಲ್, ಮೀಸಲು ಕ್ಷೇತ್ರದಿಂದ ವೈಎಸ್ ಆರ್ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧಿಸಿದ್ದರು. ಈ ಬಾರಿ ವಿಧಾನಸಭಾ ಟಿಕೆಟ್ ಹಂಚಿಕೆ ವೇಳೆ ಸುನೀಲ್ ಕುಮಾರ್ ಬದಲು ಬೇರೆಯರಿಗೆ ಟಿಕೆಟ್ ನೀಡಲು ಪಕ್ಷದ ವರಿಷ್ಠರು ತೀರ್ಮಾನಿಸಿದ್ದರು.