ಸಂತ್ರಸ್ತರಿಗೆ ಉದ್ಯೋಗ: ಆಂಧ್ರ ಸಿಎಂ ಜಗನ್ ರೆಡ್ಡಿ ಮಹತ್ವದ ಆದೇಶ
ಅಮರಾವತಿ, ಫೆಬ್ರವರಿ 5: ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಗುರುವಾರ ಮಹತ್ವದ ಆದೇಶವೊಂದನ್ನು ಹೊರಡಿಸಿದ್ದಾರೆ. ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದ ಸಂತ್ರಸ್ತರ ಕುಟುಂಬದವರಿಗೆ ಉದ್ಯೋಗ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕಿರಿಕುಳಕ್ಕೆ ಒಳಗಾದ ಸಂತ್ರಸ್ತರಿಗೆ ಆರ್ಥಿಕ ನೆರವು ನೀಡುವುದನ್ನು ರಾಜ್ಯ ಸರ್ಕಾರ ಮುಂದುವರಿಸಲಿದೆ ಎಂದಿರುವ ಜಗನ್, ಈ ಸಮುದಾಯಗಳ ಸಂತ್ರಸ್ತರಿಗೆ ಭೂಮಿ ಮಂಜೂರು ಮಾಡುವ ಕ್ರಮ ಕೂಡ ತೆಗೆದುಕೊಳ್ಳಬೇಕು. ಭೂಮಿ ಲಭ್ಯವಾಗದ ಸಂದರ್ಭಗಳಲ್ಲಿ ಅದಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಸಂತ್ರಸ್ತರಗೆ ಹಂಚಿಕೆ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.
ಸಿಜೆಗಳ ವರ್ಗಾವಣೆಯಿಂದ ಜಗನ್ ಮೋಹನ್ಗೆ ಅನುಕೂಲ: ಆಂಧ್ರ ಹೈಕೋರ್ಟ್ ಅಸಮಾಧಾನ
ಉನ್ನತ ಮಟ್ಟದ ಎಸ್ಸಿ ಮತ್ತು ಎಸ್ಟಿ ನಿಗಾ ಹಾಗೂ ಪರಿಶೀಲನಾ ಸಮಿತಿ ಮುಖ್ಯಸ್ಥರಾಗಿರುವ ಜಗನ್, ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಗಳ ಮೇಲಿನ ದೌರ್ಜನ್ಯಗಳ ಬಾಕಿ ಉಳಿದಿರುವ ಪ್ರಕರಣಗಳ ವಿಚಾರಣೆಯನ್ನು ತ್ವರಿತಗೊಳಿಸುವಂತೆ ಸೂಚಿಸಿದರು. 2013ರಿಂದಲೂ ಈ ಸಮಿತಿ ಸಭೆಗಳು ನಡೆದಿರಲಿಲ್ಲ. ಹಿಂದಿನ ಸರ್ಕಾರವು ಕಾನೂನು ಜಾರಿಯಲ್ಲಿ, ಅದರಲ್ಲಿಯೂ ಎಸ್ಸಿ ಮತ್ತು ಎಸ್ಟಿಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಗಮನ ಹರಿಸಿರಲಿಲ್ಲ ಎಂದು ಜಗನ್ ಆರೋಪಿಸಿದ್ದಾರೆ. ಮುಂದೆ ಓದಿ.
ಕಾನೂನಿಗಿಂತ ಯಾರೂ ದೊಡ್ಡವರಲ್ಲ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾನೂನು ಜಾರಿಯ ನಿರಂತರ ಪರಾಮರ್ಶನ ನಡೆಯಲಿದೆ. ರಾಜ್ಯ ಮತ್ತು ಜಿಲ್ಲಾ ಮಟ್ಟಗಳಲ್ಲಿ ಎರಡೂ ಕಡೆ ಈ ಸಭೆಗಳು ನಡೆಯಬೇಕು ಎಂದು ನಿರ್ದೇಶಿಸಿದ್ದಾರೆ. ಎಸ್ಸಿ ಮತ್ತು ಎಸ್ಟಿ ಪ್ರಕರಣಗಳಲ್ಲಿ ತಪ್ಪಿತಸ್ಥರೆಂದು ಕಂಡುಬಂದ ಪೊಲೀಸ್ ಅಧಿಕಾರಿಗಳ ವಿರುದ್ಧ ಸಹ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂಬ ಸಂದೇಶ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಚಂದ್ರಬಾಬು ನಾಯ್ಡು ವಿರುದ್ಧ ಕ್ರೈಸ್ತ ಮುಖಂಡರ ಪ್ರತಿಭಟನೆ, ಟಿಡಿಪಿಗೆ ರಾಜೀನಾಮೆ
ಉಸ್ತುವಾರಿ ಸಚಿವರಿಗೆ ಹೊಣೆ
ಜಿಲ್ಲೆಗಳಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಹಿರಿಯ ಅಧಿಕಾರಿಗಳು ಮತ್ತು ಇತರೆ ಪ್ರಮುಖರನ್ನು ಒಳಗೊಂಡಂತೆ ಜಿಲ್ಲಾ ಉಸ್ತುವಾರಿ ಸಚಿವರು ಎಸ್ಸಿ ಮತ್ತು ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯ ಜಾರಿಯ ಪರಾಮರ್ಶೆ ನಡೆಸಬೇಕು ಎಂದು ಜಗನ್ ಆದೇಶಿಸಿದ್ದಾರೆ.
ಸಿಐಡಿಗೆ ಸೂಚನೆ
ಕಾಯ್ದೆಯ ಪರಿಣಾಮಕಾರಿ ಅನುಷ್ಟಾನಕ್ಕಾಗಿ ಮತ್ತು ಕಾನೂನು ಜಾರಿಗಾಗಿ ಎಸ್ಒಪಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಅಪರಾಧ ತನಿಖಾ ಇಲಾಖೆಯ (ಸಿಐಡಿ) ಎಸ್ಸಿ ಮತ್ತು ಎಸ್ಟಿ ಪ್ರಕರಣಗಳ ತನಿಖಾ ಘಟಕವು ಇದನ್ನು ನಿರಂತರವಾಗಿ ಪರಿಶೀಲನೆ ನಡೆಸುತ್ತಿರಬೇಕು ಎಂದಿದ್ದಾರೆ.
ರಾಜಕೀಯ ತ್ಯಜಿಸುತ್ತೇನೆ: ಜಗನ್ಗೆ ಚಂದ್ರಬಾಬು ನಾಯ್ಡು ಸವಾಲು
ಪ್ರಕರಣಗಳಲ್ಲಿ ಭಾರಿ ಇಳಿಕೆ
ರಾಜ್ಯದಲ್ಲಿ ಎಸ್ಸಿ ಮತ್ತು ಎಸ್ಟಿ ದೌರ್ಜನ್ಯಗಳ ಪ್ರಕರಣಗಳು 2020ರಲ್ಲಿ ಶೇ 11ರಷ್ಟು ಕಡಿಮೆಯಾಗಿದೆ. ಇದು ಆರು ವರ್ಷಗಳಲ್ಲಿಯೇ ಅತ್ಯಂತ ಕಡಿಮೆ. ಎಸ್ಸಿ ಮತ್ತು ಎಸ್ಟಿ ಕೊಲೆ ಪ್ರಕರಣಗಳಲ್ಲಿ ಶೇ 36ರಷ್ಟು ಹಾಗೂ ಅತ್ಯಾಚಾರ ಪ್ರಕರಣಗಳಲ್ಲಿ ಶೇ 17ರಷ್ಟು ಇಳಿಕೆಯಾಗಿದೆ. 2017ರಲ್ಲಿ ಪ್ರತಿ ಪ್ರಕರಣದ ವಿಚಾರಣೆಯ ಸರಾಸರಿ ಸಮಯ 264 ದಿನಗಳಿದ್ದರೆ, 2020ರಲ್ಲಿ ಅದು 50 ದಿನಗಳಿಗೆ ಇಳಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.