ನಿರುದ್ಯೋಗಿ ಬ್ರಾಹ್ಮಣರಿಗೆ ಕಾರು ಖರೀದಿಗೆ ನಾಯ್ಡು ಸರಕಾರದಿಂದ 2 ಲಕ್ಷ ಸಬ್ಸಿಡಿ
ಅಮರಾವತಿ, ಜನವರಿ 4: ಇನ್ನೇನು ಲೋಕಸಭಾ ಚುನಾವಣೆ ಹತ್ತಿರದಲ್ಲಿ ಇರುವಂತೆಯೇ ವಿವಿಧ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಪಕ್ಷಗಳು ನಾನಾ ಯೋಜನೆಗಳನ್ನು ಘೋಷಿಸುತ್ತಿವೆ. ಇದೀಗ ಆಂಧ್ರಪ್ರದೇಶದಲ್ಲಿ ಅಧಿಕಾರದಲ್ಲಿರುವ ತೆಲುಗು ದೇಶಂ ಪಾರ್ಟಿ ಆಸಕ್ತಿಕರವಾದ ಯೋಜನೆಯೊಂದನ್ನು ಘೋಷಣೆ ಮಾಡಿದೆ.
ಅದರ ಮೊದಲ ಭಾಗವಾಗಿ ಶುಕ್ರವಾರದಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮೂವತ್ತು ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರುಗಳನ್ನು ನಿರುದ್ಯೋಗಿ ಬ್ರಾಹ್ಮಣ ಯುವಕರಿಗೆ ವಿತರಿಸಿದ್ದಾರೆ. ಇದು ಸ್ವಯಂ ಉದ್ಯೋಗ ಯೋಜನೆ ಅಡಿ ಮಾಡಿರುವ ವಿತರಣೆ. ಈ ಕಾರು ಪಡೆದ ನಿರುದ್ಯೋಗಿಗಳಿಗೆ ಸಬ್ಸಿಡಿ ಎರಡು ಲಕ್ಷ ರುಪಾಯಿ ದೊರೆಯುತ್ತದೆ.
ಬ್ರಾಹ್ಮಣರ ಕೆಣಕಿದ ಟ್ವಿಟ್ಟರ್ ಸಿಇಒಗೆ ಓದುಗರಿಂದ 'ಮಹಾಮಂಗಳಾರತಿ!'
ಕಾರಿನ ಬೆಲೆಯ ಹತ್ತು ಪರ್ಸೆಂಟ್ ಮೊತ್ತವನ್ನು ಫಲಾನುಭವಿಗಳು ಪಾವತಿಸಿದರೆ ಸಾಕು. ಬಾಕಿ ಮೊತ್ತವನ್ನು ಆಂಧ್ರಪ್ರದೇಶ ಬ್ರಾಹ್ಮಣ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಇಎಂಐನಂತೆ ತೀರಿಸಲು ಸಾಲ ನೀಡುತ್ತದೆ. ಮೊದಲ ಹಂತವಾಗಿ ಐವತ್ತು ಕಾರುಗಳನ್ನು ವಿತರಿಸಲಾಗುವುದು.
ಬ್ರಾಹ್ಮಣ ಪ್ರಾಧಿಕಾರವು ಆರಂಭವಾಗಿ, ಈವರೆಗೆ ಒಂದೂವರೆ ಲಕ್ಷ ಮಂದಿ ಇದರಿಂದ ಅನುಕೂಲ ಪಡೆದಿದ್ದಾರೆ. ಈ ಕಾರುಗಳ ಮೂಲಕ ಸ್ವತಃ ಚಾಲಕರಾಗಿ ವೃತ್ತಿ ಆರಂಭಿಸಬಹುದು. ಅಥವಾ ಓಲಾ, ಉಬರ್ ನಂಥ ಕಡೆ ಸೇರಿ ಕಾರ್ಯ ನಿರ್ವಹಿಸಬಹುದು. ಇದಕ್ಕೂ ಮುನ್ನ ಒಂದು ಕೋಟಿ ನಲವತ್ತು ಲಕ್ಷ ಸ್ಮಾರ್ಟ್ ಫೋನ್ ವಿತರಣೆ ಮಾಡುವ ಬಗ್ಗೆ ಘೋಷಣೆ ಮಾಡಲಾಗಿತ್ತು.