ವಿಪಕ್ಷ ಶಾಸಕರನ್ನು ಗೃಹ ಬಂಧನದಲ್ಲಿರಿಸಿದ ಸಿಎಂ ಜಗನ್
ಅಮರಾವತಿ, ಡಿಸೆಂಬರ್ 27: ರೈತರ ಪ್ರತಿಭಟನೆಯಲ್ಲಿ ಭಾಗಿಯಾಗದಂತೆ ತಡೆಯಲು ಟಿಡಿಪಿ ಪಕ್ಷದ ಇಬ್ಬರು ಶಾಸಕರನ್ನು ಜಗನ್ ಮೋಹನ್ ರೆಡ್ಡಿ ಸರ್ಕಾರ ಗೃಹ ಬಂಧನದಲ್ಲಿರಿಸಿದೆ.
ಇಂದು ಜಗನ್ ನೇತೃತ್ವದಲ್ಲಿ ಸಂಪುಟ ಸಭೆ ನಡೆಯಲಿದ್ದು ಆಂಧ್ರಕ್ಕೆ ಮೂರು ರಾಜಧಾನಿ ಮಾಡುವ ನಿರ್ಣಯ ಅಂಗೀಕರಿಸುವ ಸಾಧ್ಯತೆ ಇದೆ. ಮೂರು ರಾಜಧಾನಿಯಲ್ಲಿ ಅಮರಾವತಿ ನಗರ ಸೇರಿಲ್ಲವಾದ್ದರಿಂದ ಅಮರಾವತಿ ನಿರ್ಮಾಣಕ್ಕೆ ಭೂಮಿ ಕೊಟ್ಟಿದ್ದ ರೈತರು ಇದರ ವಿರುದ್ಧವಾಗಿ ಕೆಲವು ರೈತರು ಪ್ರತಿಭಟನೆ ಮಾಡುತ್ತಿದ್ದಾರೆ.
ರೈತರು ಮಾಡುತ್ತಿರುವ ಪ್ರತಿಭಟನೆಯಲ್ಲಿ ಟಿಡಿಪಿ ಶಾಸಕರು ಭಾಗವಹಿಸುವುದನ್ನು ತಡೆಯಬೇಕೆಂಬ ಕಾರಣದಿಂದ ವಿಜಯವಾಡದ ಶಾಸಕರಾದ ಕೆಸಿನೇನಿ ಶ್ರೀನಿವಾಸ್, ಶಾಸಕ ಬುದ್ಧ ವೆಂಕನ್ನ ಅವರನ್ನು ಗೃಹ ಬಂಧನದಲ್ಲಿ ಇಡಲಾಗಿದೆ.
ಈ ಹಿಂದೆ ಟಿಡಿಪಿ ಸರ್ಕಾರ ಅಧಿಕಾರದಲ್ಲಿದ್ದಾಗ ರೈತರಿಂದ ಜಮೀನು ಪಡೆದು ಅಮರಾವತಿ ನಗರ ನಿರ್ಮಾಣ ಮಾಡಿತ್ತು. ಇದನ್ನೇ ಆಂಧ್ರಪ್ರದೇಶದ ರಾಜಾಧಾನಿಯನ್ನಾಗಿ ಮಾಡಲು ನಿಶ್ಚಯಿಸಿತ್ತು. ಆದರೆ ಚುನಾವಣೆ ನಂತರ ಬಂದ ವೈಎಸ್ಆರ್ಕಾಂಗ್ರೆಸ್ನ ಜಗನ್ ಸರ್ಕಾರ, ಅಮರಾವತಿಯನ್ನು ಕೈಬಿಟ್ಟು ಮೂರು ರಾಜಧಾನಿಯನ್ನು ಮಾಡಲು ಹೊರಟಿದೆ, ಇದು ಅಮರಾವತಿಗೆ ಜಮೀನು ನೀಡಿದ್ದ ರೈತರನ್ನು ಕೆರಳಿಸಿದೆ.
'ರಾಜಧಾನಿ ಪರಿರಕ್ಷಣಾ ಸಮಿತಿ' ಹೆಸರಿನಲ್ಲಿ ಟಿಡಿಪಿ ಪ್ರತಿಭಟನೆಗೆ ಇಳಿದಿದ್ದು, ರೈತರೊಂದಿಗೆ ಕೈಜೋಡಿಸಿ ಪ್ರತಿಭಟನೆಗೆ ಉಗ್ರರೂಪ ನೀಡುತ್ತಿದೆ. ಇದು ಜಗನ್ ಸರ್ಕಾರವನ್ನು ಚಿಂತೆಗೀಡು ಮಾಡಿರುವ ಕಾರಣ, ಪ್ರತಿಭಟನೆಯನ್ನು ಹತ್ತಿಕ್ಕಲು ಟಿಡಿಪಿ ಶಾಸಕರಿಗೆ ಗೃಹ ಬಂಧನ ವಿಧಿಸಲಾಗಿದೆ.
ಜಗನ್ ಸರ್ಕಾರದ ಈ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಚಂದ್ರಬಾಬು ನಾಯ್ಡು, 'ಏಕಪಕ್ಷೀಯ, ಸರ್ವಾಧಿಕಾರಿ ಮತ್ತು ದಮನಿಸುವ ಪ್ರವೃತ್ತಿಯನ್ನು ಸರ್ಕಾರ ಪ್ರದರ್ಶಿಸುತ್ತಿದೆ' ಎಂದಿದ್ದಾರೆ.
ಇಂದು ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿದ್ದು, ಆಂಧ್ರದ ಮೂರು ಜಿಲ್ಲೆಗಳನ್ನು ರಾಜ್ಯದ ರಾಜಧಾನಿಯನ್ನಾಗಿ ಪ್ರಕಟಿಸಲಿದ್ದಾರೆ.