ಕೊವಿಡ್-19ಗೆ ಬಲಿಯಾದವರ ಅಂತ್ಯಕ್ರಿಯೆಗೆ 15000 ರೂ. ಘೋಷಿಸಿದ ಸರ್ಕಾರ!
ಅಮರಾವತಿ, ಜುಲೈ.15: ಕೊರೊನಾವೈರಸ್ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ನೆರವೇರಿಸುವುದೇ ಸರ್ಕಾರಗಳಿಗೆ ಮತ್ತು ಕೊರೊನಾ ವಾರಿಯರ್ಸ್ ಗೆ ದೊಡ್ಡ ಸವಾಲಿನ ಕೆಲಸದಂತೆ ಆಗಿ ಬಿಟ್ಟಿದೆ. ಈ ಸಮಸ್ಯೆಗೆ ಆಂಧ್ರ ಪ್ರದೇಶ ಸರ್ಕಾರ ಹೊಸ ಮಾರ್ಗವನ್ನು ಕಂಡುಕೊಂಡಿದೆ.
ಆಂಧ್ರ ಪ್ರದೇಶದಲ್ಲಿ ಕೊವಿಡ್-19 ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರವು 15,000 ರೂಪಾಯಿ ಸಹಾಯಧನ ನೀಡುವುದಾಗಿ ಘೋಷಿಸಿದೆ.
ಕರ್ನಾಟಕದಿಂದ ಆಂಧ್ರಕ್ಕೆ ಸಂಚರಿಸಲು ಹೊಸ ಮಾರ್ಗಸೂಚಿ
ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿತರ ಸಾವಿನ ಪ್ರಮಾಣವನ್ನು ಗಮನದಲ್ಲಿ ಇಟ್ಟುಕೊಂಡು ಸರ್ಕಾರವು ಈ ಆದೇಶವನ್ನು ಹೊರಡಿಸಿದೆ. ಮಂಗಳವಾರದಿಂದಲೇ ಸರ್ಕಾರದ ಹೊಸ ಆದೇಶವು ಜಾರಿಗೆ ಬರಲಿದೆ ಎಂದು ಸಿಎಂ ಜಗನ್ ಮೋಹನ್ ರೆಡ್ಡಿ ತಿಳಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ ಸರ್ಕಾರ
ಕೊರೊನಾವೈರಸ್ ಸೋಂಕಿತರಿಗೆ ಮತ್ತು ಸೋಂಕಿನ ಲಕ್ಷಣ ಕಂಡು ಬಂದವರಿಗೆ ಚಿಕಿತ್ಸೆ ನೀಡುವುದಕ್ಕೆ ಯಾವುದೇ ವೈದ್ಯರು ಮತ್ತು ಖಾಸಗಿ ಆಸ್ಪತ್ರೆಗಳು ತಿರಸ್ಕರಿಸುವಂತಿಲ್ಲ ಎಂದು ಕಟ್ಟುನಿಟ್ಟಿದ ಆದೇಶವನ್ನು ಹೊರಡಿಸಲಾಗಿದೆ. ಖಾಸಗಿ ಆಸ್ಪತ್ರೆಗಳು ಕೊವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡಲು ಒಪ್ಪದಿದ್ದಲ್ಲಿ ಅಥವಾ ಹಿಂದೇಟು ಹಾಕಿದ್ದಲ್ಲಿ ಅಂಥ ಆಸ್ಪತ್ರೆಗಳಿಗೆ ನೀಡಿದ ಪರವಾನಗಿಯನ್ನು ಹಿಂಪಡೆಯಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಆಂಧ್ರ ಪ್ರದೇಶದಲ್ಲಿ ಕೊವಿಡ್-19 ನಿಯಂತ್ರಣಕ್ಕೆ ಕ್ರಮ
ರಾಜ್ಯದಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಹಿರಿಯ ಆರೋಗ್ಯಾಧಿಕಾರಿಗಳ ಜೊತೆಗೆ ಸಿಎಂ ಜಗನ್ ಮೋಹನ್ ರೆಡ್ಡಿ ಪರಿಶೀಲನಾ ಸಭೆ ನಡೆಸಿದರು. ಈ ವೇಳೆ ಕೊವಿಡ್ ಕೇರ್ ಸೆಂಟರ್ ನಲ್ಲಿರುವ ಪರಿಸ್ಥಿತಿ, ಆಸ್ಪತ್ರೆ ಮತ್ತು ಕ್ವಾರೆಂಟೈನ್ ಸೆಂಟರ್ ಗಳಲ್ಲಿ ಸೋಂಕಿತರಿಗೆ ಮತ್ತು ಕ್ವಾರೆಂಟೈನ್ ನಲ್ಲಿ ಇರುವವರಿಗೆ ಯಾವ ರೀತಿ ಚಿಕಿತ್ಸೆ ಮತ್ತು ಸೌಲಭ್ಯವನ್ನು ನೀಡುವುದಕ್ಕೆ ಸಾಧ್ಯ ಎನ್ನುವುದರ ಕುರಿತು ಚರ್ಚೆ ನಡೆಸಲಾಯಿತು. ಇದರ ಜೊತೆಗೆ ಗುಣಮಟ್ಟದ ಆಹಾರ ಮತ್ತು ಕೊವಿಡ್ ಸೆಂಟರ್ ಗಳಿಗೆ ಸ್ಯಾನಿಟೈಸ್ ಮಾಡುವ ಬಗ್ಗೆ ಚರ್ಚಿಸಲಾಯಿತು.
ಒಂದೇ ದಿನ 28,498 ಕೇಸ್, ಭಾರತದಲ್ಲಿ 9 ಲಕ್ಷ ಗಡಿ ದಾಟಿದ ಕೊರೊನಾ
ಕೊವಿಡ್ ಸೆಂಟರ್ ಶಾಶ್ವತ ನಿರ್ಮಾಣಕ್ಕೆ ಸಿಎಂ ಆದೇಶ
ತಾತ್ಕಾಲಿಕ ಕೊವಿಡ್ ಸೆಂಟರ್ ಗಳನ್ನು ತೆರೆಯುವುದಕ್ಕಿಂತ ಶಾಶ್ವತವಾದ ಕೊವಿಡ್ ಕೇಂದ್ರಗಳನ್ನು ಸ್ಥಾಪಿಸುವುದಕ್ಕೆ ಸಿಎಂ ಆದೇಶಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಹಾಯವಾಣಿ ಮತ್ತು ಅಗತ್ಯ ಕ್ರಮಗಳ ಕುರಿತು ಪಟ್ಟಿಯೊಂದಿಗೆ ಆಗಮಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಅಗತ್ಯತೆ ಬಗ್ಗೆ ಪ್ರಸ್ತಾಪ
ರಾಜ್ಯದಲ್ಲಿ ಕೊರೊನಾವೈರಸ್ ಸೋಂಕು ನಿಭಾಯಿಸುವುದಕ್ಕೆ ಮತ್ತು ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ವೈದ್ಯಕೀಯ ಸಿಬ್ಬಂದಿ ಕೊರತೆ ಎದ್ದು ತೋರುತ್ತಿದೆ. 17,000 ವೈದ್ಯರು ಮತ್ತು 12,000 ನರ್ಸ್ ಗಳನ್ನು ನೇಮಕ ಮಾಡಿಕೊಳ್ಳುವ ಅಗತ್ಯತೆಯಿದೆ ಎಂದು ಹಿರಿಯ ಅಧಿಕಾರಿಗಳು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರಿಗೆ ಸಲಹೆ ನೀಡಿದ್ದಾರೆ.
ಕೊರೊನಾವೈರಸ್ ಅಟ್ಟಹಾಸಕ್ಕೆ ತತ್ತರಿಸಿರುವ ಆಂಧ್ರ ಪ್ರದೇಶ
ಆಂಧ್ರ ಪ್ರದೇಶದಲ್ಲಿ ಒಂದೇ ದಿನ 1916 ಮಂದಿಗೆ ಕೊರೊನಾವೈರಸ್ ಸೋಂಕು ತಗಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 33,019ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 43 ಮಂದಿ ಕೊವಿಡ್-19ನಿಂದ ಸಾವಿನ ಮನೆ ಸೇರಿದ್ದು, ಒಟ್ಟು ಮೃತರ ಸಂಖ್ಯೆ 408ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಈವರೆಗೂ 17467 ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದು, ಬಾಕಿ ಉಳಿದ 15144 ಸೋಂಕಿತರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.