ಹಾಲಿನ ಘಟಕದಲ್ಲಿ ಅನಿಲ ಸೋರಿಕೆಯಿಂದ 14 ಕಾರ್ಮಿಕರು ಅಸ್ವಸ್ಥ
ಅಮರಾವತಿ, ಆಗಸ್ಟ್.21: ಹಾಲಿನ ಡೈರಿ ಘಟಕದಲ್ಲಿ ಅಮೋನಿಯಾ ಅನಿಲ ಸೋರಿಕೆ ಸಂಭವಿಸಿದ್ದು, 14 ಮಂದಿ ತೀವ್ರವಾಗಿ ಅಸ್ವಸ್ಥಗೊಂಡಿರುವ ಘಟನೆ ಆಂಧ್ರ ಪ್ರದೇಶ ಪುಟಲಪಟ್ಟು ಮಂಡಲದ ಬಂದಪಲ್ಲಿಯಲ್ಲಿ ನಡೆದಿದೆ.
ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಪುಟಲಪಟ್ಟು ಹಾಲಿನ ಡೈರಿಯಲ್ಲಿ ಅನಿಲ ಸೋರಿಕೆ ಸಂಭವಿಸಿರುವ ಬಗ್ಗೆ ಹ್ಯಾಟ್ಸನ್ ಕಂಪನಿಯಿಂದ ಮಾಹಿತಿ ಬಂದಿತ್ತು. ಸಂಜೆಯ ಶಿಫ್ಟ್ ನಲ್ಲಿ 14 ಮಂದಿ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದು, ಅಸ್ವಸ್ಥಗೊಂಡವರನ್ನು ಚಿತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಮೂವರ ಸ್ಥಿತಿ ಗಂಭೀರವಾಗಿದ್ದು, ತಿರುಪತಿಯ ಎಸ್ ವಿ ಐಎಂಎಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ಚಿತ್ತೂರ್ ಜಿಲ್ಲಾಧಿಕಾರಿ ಡಾ.ನಾರಾಯಣ್ ಭರತ್ ಗುಪ್ತಾ ಮಾಹಿತಿ ನೀಡಿದ್ದಾರೆ.
ಕೊಚ್ಚಿ-ಮಂಗಳೂರು ಗ್ಯಾಸ್ ಪೈಪ್ಲೈನ್ ಆಗಸ್ಟ್ನಲ್ಲಿ ಪೂರ್ಣ
ಅನಿಲ ಸೋರಿಕೆಯಲ್ಲಿ ಅಸ್ವಸ್ಥಗೊಂಡರೆಲ್ಲ ಮಹಿಳೆ ಕಾರ್ಮಿಕರು ಎನ್ನಲಾಗಿದೆ. ಇನ್ನು, ಘಟನೆಗೆ ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಿರ್ಲಕ್ಷ್ಯದಿಂದ ಈ ಅನಿಲ ಸೋರಿಕೆ ಘಟನೆ ನಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಅಧಿಕಾರಿಗಳಿಂದ ಪರಿಸ್ಥಿತಿ ಪರಿಶೀಲನೆ:
ಕೈಗಾರಿಕಾ ಇಲಾಖೆಯ ಜನರಲ್ ಮ್ಯಾನೇಜರ್ ಮತ್ತು ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಪುಟಲಪಟ್ಟು ಸಬ್ ಇನ್ಸ್ ಪೆಕ್ಟರ್ ಚಿತ್ತೂರ್ ಜಿಲ್ಲಾಡಳಿತಕ್ಕೆ ಈ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಸಚಿವ ಪೆಡ್ಡಿರೆಡ್ಡಿ ರಾಮಚಂದ್ರ ರೆಡ್ಡಿ ಅವರು ಘಟನೆಯ ಕುರಿತು ಜಿಲ್ಲಾಡಳಿತದ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದ್ದಾರೆ. ಹಾಲಿನ ಡೈರಿಯಲ್ಲಿ ನಡೆದ ಅನಿಲ ಸೋರಿಕೆ ಸಂಬಂಧ ಸೂಕ್ತ ತನಿಖೆ ನಡೆಸಬೇಕು. ಅಸ್ವಸ್ಥಗೊಂಡ ಕಾರ್ಮಿಕರಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡುವಂತೆ ಸಚಿವರು ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.