ವಿಷಾನಿಲ: ಆಗ ಯುನಿಯನ್ ಕಾರ್ಬೈಡ್, ಈಗ ಎಲ್ಜಿ ಪಾಲಿಮರ್
ವಿಶಾಖಪಟ್ಟಣಂ, ಮೇ 7: ಕೊರೊನಾ ಹಾವಳಿಯಿಂದ ದೇಶ ತತ್ತರಿಸಿರುವ ನಡುವೆಯೇ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ವಿಷಕಾರಿ ಅನಿಲ ಸೋರಿಕೆಯಿಂದ ಮತ್ತೊಂದು ಆಘಾತ ಎದುರಾಗಿದೆ.
ವಿಶಾಖಪಟ್ಟಣಂ ಹೊರವಲಯದ ಆರ್ ಆರ್ ವೆಂಕಟಾಪುರಂ ಬಳಿಯ ಎಲ್ ಜಿ ಪಾಲಿಮರ್ಸ್ ಎಂಬ ಎಂಎನ್ಸಿ ಕಂಪೆನಿಯ ಕಾರ್ಖಾನೆಯಲ್ಲಿ ಮಹಾ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಇದುವರೆಗೆ 11 ಜನ ಮೃತಪಟ್ಟಿದ್ದು, 800 ಕ್ಕೂ ಹೆಚ್ಚು ಜನ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. 5000 ಜನಕ್ಕೆ ನೇರವಾಗಿ ವಿಷಾನಿಲ ತಟ್ಟಿದೆ.
ವಿಶಾಖಪಟ್ಟಣಂ ಫ್ಯಾಕ್ಟರಿಯಲ್ಲಿ ಸೋರಿಕೆಯಾಗಿದ್ದು ಡೆಡ್ಲಿ ಸ್ಟಿರಿನ್ ಗ್ಯಾಸ್!
ಭಾರತದ ಇತಿಹಾಸದಲ್ಲಿ ಅತಿದೊಡ್ಡ ಕಪ್ಪು ಚುಕ್ಕೆಯಾದ ಭೂಪಾಲ್ ಅನಿಲ ದುರಂತವನ್ನು ಇಂದಿನ ಘಟನೆ ನೆನಪಿಸುತ್ತಿದೆ. 1984 ರಲ್ಲಿ ಭೂಪಾಲ್ನ ಯುನಿಯನ್ ಕಾರ್ಬೈಡ್ ಘಟಕದಲ್ಲಿ ಅನಿಲ ಸೋರಿಕೆಯಾಗಿ 3500 ಜನ ಮೃತಪಟ್ಟಿದ್ದರು. ಯುನಿಯನ್ ಕಾರ್ಬೈಡ್ ಅಮೆರಿಕ ಮೂಲದ ಕಂಪೆನಿಯಾಗಿತ್ತು. ಈಗ ಇಡೀ ದೇಶವನ್ನು ಬೆಚ್ಚಿ ಬಿಳ್ಳಿಸಿರುವ ಎಲ್ಜಿ ಪಾಲಿಮರ್ಸ್ ಘಟಕದ ವಿಷಾನಿಲ (ಸ್ಟಿರಿನ್ ಗ್ಯಾಸ್) ಸೋರಿಕೆಗೆ ಕಾರಣವಾದ ದಕ್ಷಿಣಾ ಕೊರಿಯಾ ಮೂಲದ ಎಲ್ಜಿ ಪಾಲಿಮರ್ ಕಂಪೆನಿ ಬಗ್ಗೆ ವ್ಯಾಪಕ ಚರ್ಚೆ ಆಗುತ್ತಿದೆ. ಕಂಪೆನಿ ಬಗ್ಗೆ ಮಾಹಿತಿ ಮುಂದೆ ಓದಿ...
ಎಲ್ಜಿ ಪಾಲಿಮರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್
ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಎಲ್ಜಿ ಪಾಲಿಮರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಪ್ಲಾಸ್ಟಿಕ್, ರಬ್ಬರ್ ಮತ್ತು ಸಂಶ್ಲೇಷಿತ ಫೈಬರ್ ಉತ್ಪಾದನಾ ಘಟಕವಾಗಿದೆ. ಎಲ್ಜಿ ಪಾಲಿಮರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ದಕ್ಷಿಣ ಕೊರಿಯಾ ಮೂಲದ ಒಂದು ಕಂಪೆನಿಯಾಗಿದೆ. ಕೆಮಿಕಲ್, ಪಾಲಿಮರ್, ಅದರ ಅಭಿವೃದ್ಧಿ, ಉತ್ಪಾದನೆ ಮತ್ತು ಆ ಬಗೆಗಿನ ಸೇವೆಗಳಲ್ಲಿ ಈ ಕಂಪೆನಿ ವ್ಯವಹರಿಸುತ್ತದೆ.
1997 ರಲ್ಲಿ ಭಾರತಕ್ಕೆ ಪ್ರವೇಶ
1961 ರಲ್ಲಿ ಸ್ಥಾಪಿಸಲಾಗಿದ್ದ್ ಹಿಂದೂಸ್ತಾನ್ ಪಾಲಿಮರ್ ಕಂಪೆನಿಯನ್ನು ದಕ್ಷಿಣ ಕೊರಿಯಾದ ಎಲ್ಜಿ ಪಾಲಿಮರ್ ಕಂಪೆನಿ 1997 ರಲ್ಲಿ ಖರೀದಿಸಿತ್ತು. ವಿಶಾಖಪಟ್ಟಣಂನಲ್ಲಿ ಪಾಲಿಸ್ಟೈರೀನ್ ಮತ್ತು ಅದರ ಸಹ-ಪಾಲಿಮರ್ಗಳನ್ನು ಈ ಕಂಪೆನಿ ತಯಾರಿಸುತ್ತಿದೆ. ಎಲ್ಜಿಯು ದಕ್ಷಿಣ ಕೊರಿಯಾದಲ್ಲಿ ಕೆಮಿಕಲ್ ಆಧಾರಿತ ಬ್ಯಾಟರಿ ತಯಾರಕ ದೊಡ್ಡ ಕಂಪೆನಿಯಾಗಿದೆ.
ಲಾಕ್ಡೌನ್ ನಿಂದ ಸಂಗ್ರಹವಾಗಿದ್ದ ರಸಾಯಿನಿಕ
ಎಲ್ಜಿ ಪಾಲಿಮರ್ ಆಟಿಕೆ ಮತ್ತು ವಿವಿಧ ರೀರಿಯ ಪ್ಲಾಸ್ಟಿಕ್ ಮತ್ತು ಪೈಬರ್ ಉತ್ಪನ್ನಗಳನ್ನು ತಯಾರಿಸಲು ಬಳಸುವ ಬಹುಮುಖ ಪ್ಲಾಸ್ಟಿಕ್ ಉತ್ಪಾದನೆ ಮಾಡುತ್ತದೆ. ಇದೇ ಕಾರಣಕ್ಕೆ ಈ ಕಾರ್ಖಾನೆಯಲ್ಲಿ ಭಾರೀ ಪ್ರಮಾಣದಲ್ಲಿ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಸದ್ಯ ಲಾಕ್ಡೌನ್ ಪರಿಣಾಮವಾಗಿ ಬಳಕೆಯಾಗದೇ ಸಂಗ್ರಹಿಸಿಟ್ಟಿದ್ದ ಸುಮಾರು 5 ಸಾವಿರ ಟನ್ ರಾಸಾಯನಿಕದಿಂದ ವಿಷಾನಿಲ ಸೋರಿಕೆಯಾಗಿದೆ ಎಂದು ಅಂದಾಜಿಸಲಾಗಿದೆ.
ಕಂಪೆನಿ ಮೇಲೆ ಎಫ್ಐಆರ್
ದೇಶವನ್ನು ಬೆಚ್ಚಿ ಬೀಳಿಸಿರುವ ವಿಶಾಖಪಟ್ಟಣಂ ಅನಿಲ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಜಿ ಪಾಲಿಮರ್ ಕಂಪೆನಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವಿಶಾಖಪಟ್ಟಣಂ ಪೊಲೀಸ್ರು ನರಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.