ನಾಯ್ಡುಗೆ ಆಘಾತ, ಇನ್ನಷ್ಟು ಟಿಡಿಪಿ ಶಾಸಕರು, ಸಂಸದರು ಬಿಜೆಪಿಗೆ?
ಅಮರಾವತಿ/ ನವದೆಹಲಿ, ಜೂನ್ 23: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ, ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರಿಗೆ ಮತ್ತೆ ಆಘಾತ ಎದುರಾಗಿದೆ. ಟಿಡಿಪಿಯ ನಾಲ್ವರು ರಾಜ್ಯಸಭಾ ಸದಸ್ಯರು ಬಿಜೆಪಿ ಸೇರಿದ ಬಳಿಕ ಇನ್ನಷ್ಟು ಮಂದಿ ಬಿಜೆಪಿ ಸೇರಲು ಸಜ್ಜಾಗಿದ್ದಾರೆ.
ಟಿಡಿಪಿಯ 9 ಮಂದಿ ಶಾಸಕರು ಬಿಜೆಪಿ ಸೇರಲು ಮುಂದಾಗಿದ್ದಾರೆ, ಆಂಧ್ರಪ್ರದೇಶ ಹಾಗೂ ತೆಲಂಗಾಣದ್ ಹಲವು ನಾಯಕರು, ಬಿಜೆಪಿ ಸೇರಲು ಉತ್ಸುಕರಾಗಿದ್ದಾರೆ. ಈ ಬಗ್ಗೆ ಮಾತುಕತೆ ಜಾರಿಯಲ್ಲಿದೆ ಎಂದು ಬಿಜೆಪಿ ರಾಜ್ಯಸಭಾ ಸಂಸದ ಜಿವಿಎಲ್ ನರಸಿಂಹ ರಾವ್ ಅವರು ಹೇಳಿದ್ದಾರೆ.
ಹಾಲಿ ಶಾಸಕರಲ್ಲದೆ, ಮಾಜಿ ಶಾಸಕರು, ರಾಜ್ಯ ಸಚಿವರು, ಕಡಿಮೆ ಅಂತರದಿಂದ ಕಳೆದ ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡವರು ಎಲ್ಲರೂ ಬಿಜೆಪಿಯತ್ತ ಮುಖ ಮಾಡಿದ್ದಾರೆ.
ಟಿಡಿಪಿ ಎಂಪಿಗಳು ಬಿಜೆಪಿಗೆ, ರಾಜ್ಯಸಭೆಯಲ್ಲಿ ಸಂಖ್ಯಾಬಲ ಹೆಚ್ಚಳ
ಬಿಜೆಪಿ ಜತೆ ಟಿಟಿಪಿ ಮೈತ್ರಿ ಮುರಿದುಕೊಂಡಿದ್ದು ದೊಡ್ಡ ತಪ್ಪು ಹೆಜ್ಜೆಯಾಗಿತ್ತು. ಈ ಬಗ್ಗೆ ನಾಯ್ಡು ಅವರು ಏಕಪಕ್ಷೀಯವಾಗಿ ನಿರ್ಣಯ ಕೈಗೊಂಡರು, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಮೇಲೆ ನಮಗೆ ಭರವಸೆ ಇದೆ ಎಂದು ಟಿಡಿಪಿ ನಾಯಕರೊಬ್ಬರು ಹೇಳಿದ್ದಾರೆ.
ಮೇಲ್ಮನೆ ಸಂಖ್ಯಾಬಲ : 245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸದ್ಯಕ್ಕೆ 106 ಸದಸ್ಯ ಬಲ ಹೊಂದಿದೆ(ಟಿಡಿಪಿ ಸಂಸದರನ್ನು ಸೇರಿಸಿ) ಆದರೂ ಬಹಮತಕ್ಕೆ ಇನ್ನೂ 18 ಸದಸ್ಯರು ಬೇಕು.
ಕಾಂಗ್ರೆಸ್ ನೇತೃತ್ವದ ಯುಪಿಎ ಒಟ್ಟು 66 ಸದಸ್ಯ ಬಲ ಹೊಂದಿದೆ. ಎನ್ಡಿಎ ಹಾಗೂ ಯುಪಿಎ ಎರಡಕ್ಕೂ ಸೇರದ ಸದಸ್ಯರ ಸಂಖ್ಯೆ ಕೂಡಾ 66 ರಷ್ಟಿದೆ. ಒಟ್ಟು 9 ಸ್ಥಾನಗಳು ಇನ್ನು ಖಾಲಿಯಿವೆ.
ತ್ರಿವಳಿ ತಲಾಕ್, ನಾಗರಿಕ ಕಾಯ್ದೆ 1955ಕ್ಕೆ ತಿದ್ದುಪಡಿ ಸೇರಿದಂತೆ ಅನೇಕ ಮಸೂದೆಗಳು ಮುಂಗಾರು ಅಧಿವೇಶನದಲ್ಲಿ ಮಂಡನೆಯಾಗಲಿದ್ದು, ವಿಧೇಯಕಗಳ ಅಂಗೀಕಾರ, ಬಹುಮತ ಗಳಿಸಲು ಮೇಲ್ಮನೆಯಲ್ಲಿ ಮೋದಿ ಸರ್ಕಾರಕ್ಕೆ ಇತರೆ ಪಕ್ಷಗಳ ನೆರವು ಅತ್ಯಗತ್ಯ.