ಆಂಧ್ರದಲ್ಲಿ 400 ವರ್ಷದ ಪುರಾತನ ರಾಮನ ವಿಗ್ರಹ ಧ್ವಂಸಗೊಳಿಸಿದ ದುಷ್ಕರ್ಮಿಗಳು
ಅಮರಾವತಿ, ಡಿಸೆಂಬರ್ 31: ಆಂಧ್ರಪ್ರದೇಶದ ವಿಜಿಯಾನಗರದಲ್ಲಿನ ರಾಮತೀರ್ಥ ದೇವಸ್ಥಾನದಲ್ಲಿ 400 ವರ್ಷಗಳ ಪುರಾತನ ರಾಮನ ವಿಗ್ರಹವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿರುವ ಘಟನೆ ನಡೆದಿದ್ದು, ಘಟನೆಗೆ ವೈಎಸ್ಆರ್ ಸಿಪಿ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಭಾರೀ ಆಕ್ರೋಶ ವ್ಯಕ್ತಪಡಿಸಿವೆ.
ಮಂಗಳವಾರ ದೇವಸ್ಥಾನದಲ್ಲಿ ದುಷ್ಕರ್ಮಿಗಳು ರಾಮನ ವಿಗ್ರಹವನ್ನು ಭಗ್ನಗೊಳಿಸಿ ಬಿಸಾಡಿದ್ದರು. ದೇವಸ್ಥಾನದ ಕೊಳದಲ್ಲಿ ವಿಗ್ರಹದ ಭಾಗಗಳು ಪತ್ತೆಯಾಗಿದ್ದವು. ಈ ಘಟನೆಗೆ ರಾಜ್ಯ ಸರ್ಕಾರದ ಬೇಜವಾಬ್ದಾರಿಯೇ ಹೊಣೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
ಪಾಕಿಸ್ತಾನದಲ್ಲಿ ಹಿಂದೂ ದೇವಾಲಯ ಧ್ವಂಸಗೊಳಿಸಿದ ಕಿಡಿಗೇಡಿಗಳು
"ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಇದೇ ಸಮಯ ಇಲ್ಲಿ ರಾಮನ ವಿಗ್ರಹವನ್ನು ಧ್ವಂಸಗೊಳಿಸಲಾಗಿದೆ. ರಾಜ್ಯ ಸರ್ಕಾರ ಪಿತಾಪುರಂ, ಕೊಂಡಾ ಬಿಟ್ರಗುಂಟ ಮತ್ತು ಅಂತರ್ವೇದಿ ಘಟನೆಗಳ ಬಗ್ಗೆ ಗಂಭೀರತೆ ತೋರಿಲ್ಲ. ಹೀಗಾಗಿಯೇ ಈಗ ಐತಿಹಾಸಿಕ ರಾಮನ ದೇಗುಲದಲ್ಲೂ ದುಷ್ಕೃತ್ಯ ಎಸಗಲಾಗಿದೆ. ಅಂತರ್ವೇದಿಯಲ್ಲಿನ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯದ ರಥ ಸುಟ್ಟು ಹಾಕಿದ ಆರೋಪಿಗಳನ್ನು ಇನ್ನೂ ಪತ್ತೆ ಹಚ್ಚಲಾಗಿಲ್ಲ" ಎಂದು ಜನಸೇನಾ ಮುಖ್ಯಸ್ಥ ಹಾಗೂ ನಟ ಪವನ್ ಕಲ್ಯಾಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ವೈಎಸ್ ಜಗನ್ ಸರ್ಕಾರದಲ್ಲಿ ಜನರಿಗೆ ಮಾತ್ರವಲ್ಲ, ದೇಗುಲದಲ್ಲಿರುವ ದೇವರ ವಿಗ್ರಹಗಳಿಗೂ ಭದ್ರತೆಯಿಲ್ಲ. ಮೂಕ ಪ್ರೇಕ್ಷಕನಂತೆ ಆಂಧ್ರ ಸಿಎಂ ಈ ಘಟನೆಗಳನ್ನು ನೋಡಿಕೊಂಡು ಕುಳಿತಿದ್ದಾರೆ ಎಂದು ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.
ಆಂಧ್ರದಲ್ಲಿ ಕಳೆದ ಒಂದೂವರೆ ವರ್ಷಗಳಿಂದ ದೇವಾಲಯಗಳ ಮೇಲಿನ ದಾಳಿ, ವಿಗ್ರಹಗಳ ಧ್ವಂಸ, ದೇಗುಲ ರಥಗಳ ಹಾನಿಯಂಥ ಸರಣಿ ಕೃತ್ಯಗಳು ನಡೆಯುತ್ತಿದ್ದು, ಇದರ ಬಗ್ಗೆ ನಿಗಾ ಇಡಬೇಕು. ಘಟನೆಗಳ ಕುರಿತು ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಕೇಂದ್ರ ಗೃಹ ಸಚಿವಾಲಯಕ್ಕೆ ಪವನ್ ಕಲ್ಯಾಣ್ ಮನವಿ ಮಾಡಿದ್ದಾರೆ.
"ಕಳೆದ 19 ತಿಂಗಳಿನಲ್ಲಿ ದೇಗುಲಗಳ ಮೇಲೆ ಸುಮಾರು 120 ದಾಳಿ ಪ್ರಕರಣಗಳು ನಡೆದಿವೆ. ಈ ಎಲ್ಲವನ್ನೂ ಪೂರ್ವನಿಯೋಜಿತವಾಗಿ ಮಾಡಲಾಗುತ್ತಿದೆ. ಪೀತಾಪುರಂನ ಆರು ದೇಗುಲಗಳಲ್ಲಿ 23 ವಿಗ್ರಹಗಳನ್ನು ಧ್ವಂಸಗೊಳಿಸಲಾಗಿದೆ. ಗುಂಟೂರಿನ ದುರ್ಗಮ್ಮ ದೇವಸ್ಥಾನವನ್ನೂ ಹೀಗೇ ಮಾಡಿಲಾಗಿದೆ. ಈಗ ರಾಮತೀರ್ಥ ದೇಗುಲದಲ್ಲಿ ಈ ಕೃತ್ಯ ನಡೆದಿದೆ. ಈ ಪ್ರಕರಣದ ಕುರಿತು ಕ್ರಮ ತೆಗೆದುಕೊಳ್ಳಬೇಕು" ಎಂದು ಆಗ್ರಹಿಸಿದರು.
ಬಿಜೆಪಿ ಕೂಡ ಈ ಘಟನೆಗೆ ಸಂಬಂಧಿಸಿದಂತೆ ಆಡಳಿತ ಪಕ್ಷದ ವಿರುದ್ಧ ಹರಿಹಾಯ್ದಿದೆ. ರಾಜ್ಯ ಬಿಜೆಪಿ ಕಾರ್ಯದರ್ಶಿ ಸುನಿಲ್ ದಿಯೋದರ್, "ಉತ್ತರಾಂಧ್ರ ಅಯೋಧ್ಯೆ ಎಂದು ಕರೆಸಿಕೊಂಡಿರುವ ಈ ಸ್ಥಳದಲ್ಲಿ ದಾಳಿ ನಡೆದಿರುವುದು ಖಂಡನೀಯ. ಘಟನೆಗೆ ಸಂಬಂಧಿಸಿದಂತೆ ಆಡಳಿತ ಯಾರನ್ನೂ ಬಂಧಿಸಿಲ್ಲ" ಎಂದು ದೂರಿದ್ದಾರೆ.
ಸದ್ಯಕ್ಕೆ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಐದು ತಂಡಗಳನ್ನು ರಚಿಸಿ ತನಿಖೆ ಕೈಗೊಂಡಿದ್ದಾರೆ.