ಆಂಧ್ರದಲ್ಲಿ ಲಾರಿ ಹರಿದು ನಾಲ್ಕು ಮಕ್ಕಳ ದುರ್ಮರಣ; 12 ಮಂದಿಗೆ ಗಾಯ
ಹೈದರಾಬಾದ್, ಡಿಸೆಂಬರ್ 15: ಪ್ರಾರ್ಥನಾ ಮೆರವಣಿಗೆಯಲ್ಲಿ ತೆರಳುತ್ತಿದ್ದ ಸಂದರ್ಭ ಲಾರಿ ಹರಿದು ನಾಲ್ಕು ಮಕ್ಕಳು ಮೃತಪಟ್ಟು ಹನ್ನೆರಡು ಮಂದಿ ಗಾಯಗೊಂಡಿರುವ ಘಟನೆ ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.
ಹೈದರಾಬಾದ್-ಕಡಪಾ ರಾಷ್ಟ್ರೀಯ ಹೆದ್ದಾರಿ ಸಮೀಪದ ಯರಂಗುಂಟ್ಲಾ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ಘಟನೆ ನಡೆದಿದೆ. ಸಾವನ್ನಪ್ಪಿದ ಮಕ್ಕಳು 8 ರಿಂದ 15 ವಯಸ್ಸಿನವರು ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಹನ್ನೆರಡು ಮಂದಿ ಗಾಯಗೊಂಡಿದ್ದು, ಐದು ಮಂದಿಯನ್ನು ಕರ್ನೂಲ್ ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದವರನ್ನು ನಂದ್ಯಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಹನ್ನೆರಡು ಮಂದಿಯಲ್ಲಿ ಎಂಟು ಮಕ್ಕಳು ಇದ್ದಾರೆ ಎಂದು ಡಿಸಿ ವೀರಪಾಂಡಿಯನ್ ತಿಳಿಸಿದ್ದಾರೆ.
ಕ್ರಿಸ್ ಮಸ್ ಪ್ರಯುಕ್ತ 40 ಮಂದಿ ಹೆದ್ದಾರಿಯ ಬದಿಯಲ್ಲಿ ಪ್ರಾರ್ಥನಾ ಮೆರವಣಿಗೆ ಹೊರಟಿದ್ದು, ಹೈದರಾಬಾದ್ ನಿಂದ ಕಡಪಾ ಜಿಲ್ಲೆಗೆ ಹೋಗುತ್ತಿದ್ದ ಲಾರಿ ನಿಯಂತ್ರಣ ಕಳೆದುಕೊಂಡು ಮೆರವಣಿಗೆಯಲ್ಲಿದ್ದವರ ಮೇಲೆ ನುಗ್ಗಿದೆ. ಮೂರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಆಸ್ಪತ್ರೆಗೆ ದಾಖಲಾದ ಗಂಟೆಯ ನಂತರ ಒಂದು ಮಗು ಸಾವನ್ನಪ್ಪಿದೆ.
ಅಪಘಾತ ನಡೆದ ನಂತರ ಲಾರಿ ಚಾಲಕ ಲಾರಿಯನ್ನು ನಿಲ್ಲಿಸದೇ ತೆರಳಿದ್ದಾನೆ. ಸ್ಥಳೀಯರ ಸಹಾಯದೊಂದಿಗೆ ಪೊಲೀಸರು ಆತನನ್ನು ಬಾತಲೂರು ಬಳಿ ಹಿಡಿದಿದ್ದಾರೆ. ಘಟನೆ ಕುರಿತು ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಆಘಾತ ವ್ಯಕ್ತಪಡಿಸಿದ್ದಾರೆ. ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ. ಗಾಯಗೊಂಡವರಿಗೆ ಚಿಕಿತ್ಸೆ ನೀಡುವ ಕುರಿತು ನಿಗಾವಹಿಸಲು ಪೊಲೀಸರನ್ನು ನಿಯೋಜಿಸಿರುವುದಾಗಿ ಡಿಸಿ ತಿಳಿಸಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವೆರಸಲಾಗಿದೆ.