ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿ, ಜಗನ್ ಮಹತ್ವ ಘೋಷಣೆ
Recommended Video
ಅಮರಾವತಿ, ಜನವರಿ 20: ಆಂಧ್ರಪ್ರದೇಶಕ್ಕೆ ಐವರು ಉಪ ಮುಖ್ಯಮಂತ್ರಿಗಳನ್ನು ಹೆಸರಿಸಿ ಅಚ್ಚರಿ ಮೂಡಿಸಿದ್ದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಇಂದು ಮತ್ತೊಂದು ಮಹತ್ವದ ನಿರ್ಣಯವನ್ನು ಪ್ರಕಟಿಸಿದ್ದಾರೆ. ಆಂಧ್ರಪ್ರದೇಶಕ್ಕೆ ಅಮರಾವತಿ ಅಲ್ಲದೆ ಇನ್ನೆರಡು ರಾಜಧಾನಿಗಳನ್ನು ಹೆಸರಿಸಲಾಗಿದೆ. ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿ ಹೊಂದುವ ನಿರ್ಣಯಕ್ಕೆ ಸಚಿವ ಸಂಪುಟದಲ್ಲಿ ಸೋಮವಾರದಂದು ಒಮ್ಮತ ಸಿಕ್ಕಿದೆ.
ಜಗನ್ ಮೋಹನ್ ರೆಡ್ಡಿ ಸರ್ಕಾರವು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಕ್ಕೊಂದು ಎಂಬಂತೆ ಮೂರು ರಾಜಧಾನಿಗಳನ್ನು ರಾಜ್ಯಕ್ಕೆ ನೀಡುತ್ತಿದೆ. ಅಮರಾವತಿ ರಾಜಧಾನಿಯಾಗಿ ಅಭಿವೃದ್ಧಿ ಹೊಂದುತ್ತಿದೆ ಜೊತೆಗೆ ವಿಶಾಖಪಟ್ಟಣಂ ಹಾಗೂ ಕರ್ನೂಲ್ ಕೂಡಾ ಅಧಿಕೃತ ರಾಜಧಾನಿಯಾಗಲಿದೆ.
ಸರ್ಕಾರಿ ಕಚೇರಿಗಳು, ಸಿಎಂ ಕಚೇರಿ ಇನ್ಮುಂದೆ ವಿಶಾಖಪಟ್ಟಣಂನಿಂದ ಕಾರ್ಯನಿರ್ವಹಿಸಿದೆ. ಹೈಕೋರ್ಟ್ ಕರ್ನೂಲ್ ಪಾಲಾಗಿದೆ. ಎಪಿಸಿಆರ್ ಡಿಎ 2020ಕಾಯ್ದೆಗೆ ಅನುಮತಿ ಸಿಕ್ಕಿದ್ದು, ಅಮರಾವತಿ ಮೆಟ್ರೋಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ಚಾಲನೆ ಸಿಕ್ಕಿದೆ.
ಈ ನಡುವೆ ತೆಲುಗು ದೇಶಂ ಪಾರ್ಟಿ ಬೆಂಬಲಿತ ರೈತ ಮುಖಂಡರು, ಕಾರ್ಯಕರ್ತರು ಚಲೋ ಅಸೆಂಬ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ಅಮರಾವತಿ ಜೊತೆಗೆ ಇನ್ನೆರಡು ರಾಜಧಾನಿಯಾಗುವುದನ್ನು ವಿರೋಧಿಸಿದ್ದಾರೆ.
ಇತ್ತೀಚೆಗೆ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಅವರಿಗೆ ಅಧಿಕೃತವಾಗಿ ಮನವಿ ಪತ್ರ ಕಳಿಸಿದ್ದ ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಅಮರಾವತಿ ಮೇಲೆ 50000 ಕೋಟಿ ಹೂಡಿಕೆಯಾಗಿದೆ, ಇದನ್ನು ಹಿಂಪಡೆಯುವ ಆತಂಕ ಎದುರಾಗಲಿದೆ, ರೈತರಿಗೆ ಅನ್ಯಾಯವಾಗಲಿದೆ ಎಂದಿದ್ದರು. ಆದರೆ, ಸರಣಿ ಪ್ರತಿಭಟನೆ ನಡುವೆಯೂ ಮೂರು ರಾಜಧಾನಿಗಳನ್ನು ಹೊಂದುವ ವಿಧೇಯಕಕ್ಕೆ ಕ್ಯಾಬಿನೆಟ್ ಅಸ್ತು ಎಂದಿದ್ದು, ರಾಜಧಾನಿ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.