ಜಗನ್ ವಿದ್ಯಾ ದೀವೆನ ಯೋಜನೆಯಿಂದ 10.82 ಲಕ್ಷ ವಿದ್ಯಾರ್ಥಿಗಳಿಗೆ ನೆರವು
ಅಮರಾವತಿ, ಮೇ. 05: ವಿದ್ಯಾರ್ಥಿಗಳ ವ್ಯಾಸಂಗಕ್ಕೆ ನೆರವಾಗುವ 'ಜಗನ್ನಾ ವಿದ್ಯಾ ದೀವೆನ' ಯೋಜನೆಗೆ ಮೂರನೇ ತ್ರೈ ಮಾಸಿಕ ಕಂತು 709 ಕೋಟಿ ರೂ. ಹಣವನ್ನು ಆಂಧ್ರ ಪ್ರದೇಶ ಸಿಎಂ ವೈ. ಎಸ್. ಜಗನ್ ಮೋಹನ್ ರೆಡ್ಡಿ ಬಿಡುಗಡೆ ಮಾಡಿದರು.
ತಿರುಪತಿಯ ತಾರಕರಾಮ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಜಗನ್ 2020-21ನೇ ಸಾಲಿನ ಜಗನ್ ವಿದ್ಯಾ ದೀವೆನಾ ಯೋಜನೆಗೆ ಮೂರನೇ ತ್ರೈಮಾಸಿಕ ಕಂತನ್ನು ಬಿಡುಗಡೆ ಮಾಡಿದರು. 10.82 ಲಕ್ಷ ವಿದ್ಯಾರ್ಥಿಗಳು ಈ ಯೋಜನೆಯಡಿ ಶಿಕ್ಷಣ ಪಡೆಯುತ್ತಿರುವುದನ್ನು ನೆನೆದು ಜಗನ್ ಸಂತಸ ವ್ಯಕ್ತಪಡಿಸಿದರು.
ಅನುದಾನ ಬಿಡುಗಡೆ ಮಾಡಿ ಮಾತನಾಡಿದ ಜಗನ್ ಮೋಹನ್ ರೆಡ್ಡಿ, "ಶಿಕ್ಷಣ ಒಬ್ಬ ವ್ಯಕ್ತಿಯನ್ನು ಪೂರ್ಣವಾಗಿ ಬದಲಿಸಲಿದೆ. ಮಾತ್ರವಲ್ಲ, ಅವನ ಕುಟುಂಬ, ಅವನ ಸಮಾಜ, ಅವನ ರಾಜ್ಯದ ಜತೆಗೆ ದೇಶದ ಇತಿಹಾಸವನ್ನೇ ಬದಲಿಸುತ್ತದೆ. ಶಿಕ್ಷಣದ ಮೂಲಕವಷ್ಟೇ ಬಡತನ ತೊಲಗಿಸಿ ಉತ್ತಮ ಜೀವನ ಕಲ್ಪಿಸಲು ಸಾಧ್ಯ. ಶಿಕ್ಷಣ ಎಂಬುದು ನಿಮ್ಮಿಂದ ಯಾರೂ ಕದಿಯಲಾಗದ ಸಂಪತ್ತು. ಶಿಕ್ಷಣ ಮಾತ್ರವೇ ಜನರ ಹಣೆ ಬರಹ ಬದಲಿಸುವ ಏಕೈಕ ಅಸ್ತ್ರ" ಎಂದು ಅಭಿಪ್ರಾಯಪಟ್ಟರು.
ವೈಎಸ್ಆರ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಜಗನ್ನ ವಿದ್ಯಾ ದೀವನ ಹಾಗೂ ವಸತಿ ದೀವನ ಯೋಜನೆಗಳಿಗೆ ಈವರೆಗೂ 9274 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಇದೇ ವೇಳೆ ಹೇಳಿದರು.