ಯೋಗಿ ಆದಿತ್ಯನಾಥ ನ್ಯಾಯಾಧೀಶರಾಗಲು ಹೊರಟಿದ್ದಾರೆ: ಒವೈಸಿ
ಅಹಮದಾಬಾದ್, ಜೂ.13: ಪ್ರಯಾಗ್ರಾಜ್ನಲ್ಲಿ ಹಿಂಸಾಚಾರ ಪ್ರಕರಣದಲ್ಲಿ ಆರೋಪಿ ಎನ್ನಲಾದ ಜಾವೇದ್ ಮೊಹಮ್ಮದ್ ಮನೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮೇಲೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಅವರು ವಾಗ್ದಾಳಿ ನಡೆಸಿದ್ದಾರೆ.
ಗುಜರಾತ್ನ ಕಚ್ನಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಒವೈಸಿ, ಯೋಗಿ ಆದಿತ್ಯನಾಥ ಅಲಹಾಬಾದ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಂತೆ ವರ್ತಿಸುತ್ತಿದ್ದಾರೆ. ಯೋಗಿ ಉತ್ತರ ಪ್ರದೇಶದಲ್ಲಿ ಯಾರನ್ನಾದರೂ ಗುರುತಿಸುತ್ತಾರೆ, ಅವರ ಮನೆಯನ್ನು ಹೊಡೆದು ಹಾಕಿಸುತ್ತಾರೆ ಎಂದು ಟೀಕೆ ಮಾಡಿದರು.
ಪ್ರಯಾಗ್ರಾಜ್ನಲ್ಲಿ ಜೂನ್ 10 ರಂದು ನಡೆದ ಹಿಂಸಾಚಾರದ ಸಂಚುಕೋರ ಎನ್ನಲಾದ ಜಾವೇದ್ ಮೊಹಮ್ಮದ್ ಅಲಿಯಾಸ್ ಪಂಪ್ ಅವರ ಮನೆಯನ್ನು ಭಾರೀ ಪೊಲೀಸ್ ನಿಯೋಜನೆಯ ನಡುವೆ ಪ್ರಯಾಗ್ರಾಜ್ ಅಭಿವೃದ್ಧಿ ಪ್ರಾಧಿಕಾರ ಭಾನುವಾರ ನೆಲಸಮಗೊಳಿಸಿತ್ತು ಈ ಹಿನ್ನೆಲೆಯಲ್ಲಿ ಒವೈಸಿ ಹೇಳಿದ್ದರು. ಧ್ವಂಸಕ್ಕೂ ಮುನ್ನ ಭಾನುವಾರ ಬೆಳಗ್ಗೆ ಅವರ ಮನೆಯಲ್ಲಿ ಶೋಧ ನಡೆಸಲಾಗಿತ್ತು. ಆರೋಪಿಯ ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರಗಳು ಮತ್ತು ಆಕ್ಷೇಪಾರ್ಹ ಪೋಸ್ಟರ್ಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
12 ಪಿಸ್ತೂಲ್, 315 ಬೋರ್ ಪಿಸ್ತೂಲ್ ವಶ
ನಾವು ಆರೋಪಿಯ ಮನೆ ಶೋಧ ಸಮಯದಲ್ಲಿ 12 ಅಕ್ರಮ ಪಿಸ್ತೂಲ್ ಮತ್ತು 315 ಬೋರ್ ಪಿಸ್ತೂಲ್ ಮತ್ತು ಕಾಟ್ರಿಡ್ಜ್ಗಳು ಮತ್ತು ನ್ಯಾಯಾಲಯದ ವಿರುದ್ಧ ಆಕ್ಷೇಪಾರ್ಹ ಕಾಮೆಂಟ್ಗಳನ್ನು ತೋರಿಸುವ ಕೆಲವು ದಾಖಲೆಗಳನ್ನು ಪತ್ತೆಹಚ್ಚಿದ್ದೇವೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಯಾಗ್ರಾಜ್ ಅಜಯ್ ಕುಮಾರ್ ಹೇಳಿದ್ದಾರೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೋಟಿಸ್ ಅಂಟಿಸಿದ ಗಂಟೆಗಳ ಕ್ರಮ
ಮೊಹಮ್ಮದ್ ಅವರ ಮನೆ ನೆಲ ಮತ್ತು ಮೊದಲ ಮಹಡಿಯನ್ನು ಅಕ್ರಮವಾಗಿ ನಿರ್ಮಾಣವಾಗಿದೆ ಎಂದು ಆರೋಪಿಸಿ ಅವರ ಮನೆಯ ಹೊರಗೆ ನೋಟಿಸ್ ಅಂಟಿಸಿದ ಗಂಟೆಗಳ ನಂತರ ಈ ಕ್ರಮ ಕೈಗೊಂಡಿದೆ. ಮೇ ತಿಂಗಳಲ್ಲಿ ತನಗೆ ಕಳುಹಿಸಲಾದ ನೋಟಿಸ್ ಪತ್ರಕ್ಕೆ ಉತ್ತರಿಸಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಾವೇದ್ ಮೊಹಮ್ಮದ್ ಅವರ ಮನೆ ಕೆಡವಿರುವುದು ಕಾನೂನುಬಾಹಿರ ಎಂದು ವಕೀಲರ ಗುಂಪು ಅಲಹಾಬಾದ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದೆ.
ಅಧಿಕಾರಿಗಳು ನಿಯಮಗಳನ್ನು ಪಾಲಿಸಿಲ್ಲ
ಧ್ವಂಸಕ್ಕೆ ಬಂದ ಅಧಿಕಾರಿಗಳು ನಿಯಮಗಳನ್ನು ಪಾಲಿಸಿಲ್ಲ. ಅಲ್ಲದೆ ಮನೆ ಕೆಡವಿರುವುದು ಕಾನೂನುಬಾಹಿರ ಎಂದು ಆರೋಪಿಸಿದರು. ಮನೆ ಜಾವೇದ್ ಮೊಹಮ್ಮದ್ ಅವರ ಪತ್ನಿ ಹೆಸರಲ್ಲಿದ್ದು, ಅಕ್ರಮ ನಿರ್ಮಾಣದ ಬಗ್ಗೆ ಯಾವುದೇ ನೋಟಿಸ್ ಅವರಿಗೆ ಬಂದಿಲ್ಲ ಎಂದು ವಕೀಲರು ತಿಳಿಸಿದ್ದಾರೆ. ಪ್ರವಾದಿ ಮೊಹಮ್ಮದ್ ಅವರ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆಗಳನ್ನು ನೀಡಿದ ಹಿನ್ನೆಲೆಯಲ್ಲಿ ಅಮಾನತುಗೊಂಡಿರುವ ಬಿಜೆಪಿ ವಕ್ತಾರ ನೂಪುರ್ ಶರ್ಮಾ ಅವರ ವಿರುದ್ಧ ಶುಕ್ರವಾರದ ಪ್ರಾರ್ಥನೆಯ ನಂತರ ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಬೃಹತ್ ಪ್ರತಿಭಟನೆಗಳು ನಡೆದಿದ್ದವು.
Recommended Video
ಹಿಂಸಾತ್ಮಕ ಗಲಭೆಗಳು ಮತ್ತು ಕಲ್ಲು ತೂರಾಟಗಳು
ಶನಿವಾರ ನಗರಸಭೆ ಆಡಳಿತದ ಅಧಿಕಾರಿಗಳು, ಪೊಲೀಸರೊಂದಿಗೆ ಸಹರನ್ಪುರದಲ್ಲಿ ಹಿಂಸಾಚಾರ ನಡೆಸಿದ ಇಬ್ಬರು ಆರೋಪಿಗಳ ಮನೆಗಳನ್ನು ಅವುಗಳು ಅಕ್ರಮ ನಿರ್ಮಾಣಗಳು ಎಂದು ನೆಲಸಮಗೊಳಿಸಿದ್ದರು. ಜೂನ್ 3 ರಂದು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಹಿಂಸಾತ್ಮಕ ಗಲಭೆಗಳು ಮತ್ತು ಕಲ್ಲು ತೂರಾಟಗಳು ನಡೆದ ಕಾನ್ಪುರದಲ್ಲೂ ಸಹ ಮನೆಗಳ ಧ್ವಂಸ ಕಾರ್ಯ ನಡೆದಿದೆ. ಪ್ರತಿಭಟನೆ ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ರಾಜ್ಯದ ವಿವಿಧ ಜಿಲ್ಲೆಗಳಿಂದ 300ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಸಮಾಜದ ವಾತಾವರಣವನ್ನು ಹಾಳುಮಾಡಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನು ಮುಖ್ಯಮಂ ಯೋಗಿ ಆದಿತ್ಯನಾಥ್ ನೀಡಿದ್ದಾರೆ.