'ಸೊಹ್ರಾಬುದ್ದಿನ್ ಎನ್ ಕೌಂಟರ್ ಆಗದಿದ್ದರೆ ಮೋದಿ ಹತ್ಯೆಯಾಗುತ್ತಿತ್ತು'
ಅಹ್ಮದಾಬಾದ್, ಡಿಸೆಂಬರ್ 22 : ಅಕಸ್ಮಾತ್ ಸೊಹ್ರಾಬುದ್ದಿನ್ ಶೇಖ್ ಎನ್ ಕೌಂಟರ್ ಆಗದೆ ಇದ್ದಿದ್ದರೆ ನರೇಂದ್ರ ಮೋದಿ ಅವರ ಹತ್ಯೆಯಾಗುತ್ತಿತ್ತು ಎಂದು ನಿವೃತ್ತ ಐಪಿಎಸ್ ಅಧಿಕಾರಿ ಡಿಜಿ ವಂಝಾರಾ ಹೇಳಿದ್ದಾರೆ.
ಸೊಹ್ರಾಬುದ್ದಿನ್ ಎನ್ ಕೌಂಟರ್ ಗೆ ಸಂಬಂಧಿಸಿದಂತೆ ಶುಕ್ರವಾರ ಸಿಬಿಐ ವಿಶೇಷ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಎಲ್ಲಾ 22 ಆರೋಪಿಗಳನ್ನೂ ಖುಲಾಸೆಗೊಳಿಸಿತ್ತು. ಹತ್ಯೆಗೀಡಾದವರ ಸಾವಿನಿಂದ ಬೇಜಾರಾಗಿದೆ, ಸಾಕ್ಷ್ಯವಿಲ್ಲದಿದ್ದರಿಂದ ಎಲ್ಲ ಆರೋಪಿಗಳನ್ನು ಖುಲಾಸೆ ಮಾಡಬೇಕಾಯಿತು ಎಂದು ನ್ಯಾಯಾಧೀಶ ಎಸ್ ಜೆ ಶರ್ಮಾ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಈ ಬೆಳವಣಿಗೆಯ ನಂತರ ಪ್ರತಿಕ್ರಿಯೆ ನೀಡಿದ ವಂಝಾರಾ, ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಸೊಹ್ರಾಬುದ್ದಿನ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯೂ ಆಗಿದ್ದ ವಂಝಾರಾ, ಗುಜರಾತಿನ ವಿವಾದಾತ್ಮಕ ಐಪಿಎಸ್ ಅಧಿಕಾರಿಯಾಗಿದ್ದರು.
ಸೊಹ್ರಾಬುದ್ದಿನ್ ಕೇಸ್: ಎಲ್ಲಾ 22 ಆರೋಪಿಗಳು ಖುಲಾಸೆ
ರಾಜಸ್ಥಾನ ಮತ್ತು ಗುಜರಾತ್ ನ ಜಂಟಿ ಪೊಲೀಸ್ ತಂಡ ಸೊಹ್ರಾಬುದ್ದಿನ್ ನನ್ನು 2005ರ ನವೆಂಬರ್ 26ರಂದು ಮತ್ತು ಆತನ ಹತ್ತಿರದ ಸಹಚರ ತುಳಸಿರಾಮ್ ಪ್ರಜಾಪತಿಯನ್ನು 2006ರ ಡಿಸೆಂಬರ್ 26ರಂದು ಎನ್ಕೌಂಟರ್ ಮಾಡಿ ಸಾಯಿಸಿತ್ತು. ಈವೆರಡೂ ಎನ್ಕೌಂಟರ್ ಗಳು ನಕಲಿ ಎಂದು ಆರೋಪಿಸಲಾಗಿತ್ತು.
ಮೋದಿ ಹತ್ಯೆಯಾಗುತ್ತಿತ್ತು
ಸೊಹ್ರಾಬುದ್ದಿನ್ ಎನ್ ಕೌಂಟರ್ ಮಾಡದೆ ಬೇರೆ ವಿಧಿ ಇರಲಿಲ್ಲ. ಸೊಹ್ರಾಬುದ್ದಿನ್ ಹತ್ಯೆಯಾಗದೆ ಇದ್ದಿದ್ದರೆ ಅಂದಿನ ಗುಜರಾತ್ ಮುಖ್ಯಮಂತ್ರಿ ಮತ್ತು ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಯಾಗುತ್ತಿತ್ತು. ಅದಕ್ಕೆ ಪಾಕಿಸ್ತಾನ ಸಂಚು ರೂಪಿಸಿತ್ತು ಎಂದು ಅವರು ಹೇಳಿಕೆ ನೀಡಿದ್ದರು.
ಸೊಹ್ರಾಬುದ್ದಿನ್ ಎನ್ ಕೌಂಟರ್ ತನಿಖೆ ನಡೆಸುತ್ತಿದ್ದ ಐಪಿಎಸ್ ಅಮಾನತು
ರಾಜಕೀಯದಿಂದ ಪೊಲೀಸರು ಬಲಿಪಶು
ಗುಜರಾತ್, ರಾಜಸ್ಥಾನ ಮತ್ತು ಆಂಧ್ರಪ್ರದೇಶ ಪೊಲೀಸರನ್ನು ಸೊಹ್ರಾಬುದ್ದಿನ್ ಎನ್ ಕೌಂಟರ್ ಪ್ರಕರಣದಲ್ಲಿ ಬಲಿಪಶುಗಳನ್ನಾಗಿ ಮಾಡಲಾಯ್ತು. ಆಗಿನ ಗುಜರಾತ್ ಬಿಜೆಪಿ ಸರ್ಕಾರ ಮತ್ತು ಕೇಂದ್ರದ ಯುಪಿಎ ಸರ್ಕಾರದ ರಾಜಕೀಯದಲ್ಲಿ ನಾವು ಬಲಿಪಶುವಾದೆವು ಎಂದು ಎಂದು ಅವರು ದೂರಿದ್ದಾರೆ.
ನಕಲಿ ಎಂಬುದು ಸುಳ್ಳು
ಮೋದಿಜೀ ಅವರನ್ನು ಕೊಲ್ಲಲು ಪಾಕಿಸ್ತಾನವೇ ಕೆಲವರಿಗೆ ಸ್ಪಾನ್ಸರ್ ಮಾಡುತ್ತಿತ್ತು. ಅದನ್ನು ತಿಳಿದೇ ನಾವು ಕೆಲವು ಎನ್ ಕೌಂಟರ್ ನಡೆಸಬೇಕಾಯ್ತು. ಆದರೆ ನಂತರ ಅದು ರಾಜಕೀಯವಾಗಿ ಬದಲಾಯ್ತು. ಸಕಾರಣಕ್ಕಾಗಿ ನಡೆದ ಎನ್ ಕೌಂಟರ್ ಅನ್ನು ನಕಲಿ ಎಂದು ಕರೆಯಲಾಯ್ತು ಎಂದು ವಂಝಾರಾ ದೂರಿದ್ದಾರೆ.
ಆರೋಪಿಗಳ ಖುಲಾಸೆ
ಹಲವು ವರ್ಷಗಳಿಂದ ಸಿಬಿಐ ವಿಶೇಷ ನ್ಯಾಯಾಲಯ ಸೊಹ್ರಾಬುದ್ದಿನ್ ಎನ್ ಕೌಂಟರ್ ಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿತ್ತು. ಅದರ ತೀರ್ಪು ಶುಕ್ರವಾರ ಹೊರಬಿದ್ದಿದ್ದು, ಸರಿಯಾದ ಸಾಕ್ಷ್ಯಾಧಾರದ ಕೊರತೆಯ ಕಾರಣ ನೀಡಿ, ಎಲ್ಲಾ 22 ಆರೋಪಿಗಳನ್ನೂ ಖುಲಾಸೆಗೊಳಿಸಲಾಯ್ತು.